ವಿಧಾನಸಭೆಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ' ಮಂಡನೆ

Update: 2022-09-22 15:34 GMT

ಬೆಂಗಳೂರು, ಸೆ. 22: ‘ಕನ್ನಡ ಭಾಷೆಯ ಪ್ರಸಾರ-ಪ್ರಚಾರಕ್ಕಾಗಿ ಮತ್ತು ಕನ್ನಡವನ್ನು ಎಲ್ಲ ಹಂತಗಳಲ್ಲಿ ಅಧಿಕೃತ ಭಾಷೆ'ಯಾಗಿ ಅನುಷ್ಠಾನಗೊಳಿಸುವ ಮಹತ್ವದ ಉದ್ದೇಶದಿಂದ ಕನ್ನಡ ಭಾಷೆ ಬಳಕೆಗೆ ಶಾಸನ ಬಲವನ್ನು ನೀಡುವ ನಿಟ್ಟಿನಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022' ಅನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಯಿತು.

ಗುರುವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಕನ್ನಡ ಮತ್ತು ಸಂಸ್ಕ್ರತಿ, ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರು, ವಿಧೇಯಕವನ್ನು ಮಂಡಿಸಿದರು. ‘ಆಡಳಿತ ಕನ್ನಡ ಜಾರಿ ನಿಯಮ' ಉಲ್ಲಂಘಿಸಿದವರಿಗೆ ದಂಡ ವಿಧಿಸಲು, ಕನ್ನಡ ಕಡ್ಡಾಯ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಹಾಗೂ ಕನ್ನಡ ಭಾಷೆ ಕಡ್ಡಾಯ ಜಾರಿಗೆ ಪ್ರಾಧಿಕಾರ ರಚನೆ ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಜಮೀನು, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯ ಪಡೆಯುತ್ತಿರುವ ಎಲ್ಲ ಕೈಗಾರಿಕೆಗಳು ಮತ್ತು ಇತರೆ ಕೈಗಾರಿಕೆ ಮತ್ತು ಕಾರ್ಯಸಂಸ್ಥೆಗಳಲ್ಲಿಯೂ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ಸಲುವಾಗಿ ಮತ್ತು ಅಧಿನಿಯಮದ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡಲು, ತನಿಖಾಧಿಕಾರಿಗಳೊಂದಿಗೆ ಒಂದು ಕಾರ್ಯ ವ್ಯವಸ್ಥೆ ಕಲ್ಪಿಸಲು ವಿಧೇಯಕದಲ್ಲಿ ಅನುವು ಮಾಡಲಾಗಿದೆ.

ವಿಧೇಯಕದ ಮುಖ್ಯಾಂಶಗಳು: ‘ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಿ, ಕನ್ನಡ ಕಲಿಕೆಗೆ ಪ್ರೋತ್ಸಾಹಿಸುವುದು. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವುದು. ರಾಜ್ಯ ಸರಕಾರ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆಗಳು, ಸಹಕಾರ ಸಂಘಗಳ ನೇಮಕ ಪ್ರಕ್ರಿಯೆಯಲ್ಲಿ ಕನ್ನಡ ಭಾಷೆ ಜ್ಞಾನ ಕಡ್ಡಾಯ. ಅಧೀನ ನ್ಯಾಯಾಲಯ ಹಾಗೂ ನ್ಯಾಯ ಮಂಡಳಿಗಳಲ್ಲಿ ಕನ್ನಡ ಭಾಷೆ ಬಳಕೆ. ಕನ್ನಡ ಭಾಷೆಯ ವ್ಯಾಪಕ ಬಳಕೆ ಮತ್ತು ಪ್ರಚಾರ.

‘ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡ ಭಾಷೆ ಬಳಕೆಗೆ ಕ್ರಮ. ಕನ್ನಡ ಭಾಷೆ ಅಭಿವೃದ್ಧಿಗೆ ಪ್ರೋತ್ಸಾಹ. ಸರಕಾರದಿಂದ ತೆರಿಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯ ಪಡೆದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲು, ಉದ್ಯೋಗ ಪೋರ್ಟಲ್ ಸ್ಥಾಪನೆ. ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಕಾರ್ಯ ವ್ಯವಸ್ಥೆ ಸ್ಥಾಪನೆ ಮಾಡಲಾಗುವುದು' ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಉಲ್ಲಂಘಿಸಿದರೆ ದಂಡ: ‘ಕನ್ನಡ ಭಾಷೆ ಅಷ್ಠಾನದ ಉಲ್ಲಂಘನೆ ಮಾಡಿದ ವ್ಯಕ್ತಿ, ಸಂಘ-ಸಂಸ್ಥೆಗಳಿಗೆ ಈ ವಿಧೇಯಕದ ಅನ್ವಯ ದಂಡ ವಿಧಿಸುವ ಉಪಬಂಧವನ್ನು ಪರಿಚಯಿಸಲಾಗುತ್ತಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಖಾಸಗಿ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ 5 ಸಾವಿರ ರೂ., ಎರಡನೆ ಬಾರಿಗೆ 10 ಸಾವಿರ ರೂ. ಹಾಗೂ ಮೂರನೆ ಬಾರಿಗೆ ಉಲ್ಲಂಘಿಸಿದರೆ 20 ಸಾವಿರ ರೂ.ಗಳ ವರೆಗೆ ದಂಡ ವಿಧಿಸುವ ಅಧಿಕಾರವನ್ನು ಜಾರಿ ಪ್ರಾಧಿಕಾರಕ್ಕೆ ವಿಧೇಯಕದಲ್ಲಿ ನೀಡಲಾಗಿದೆ. ಸರಕಾರಿ ಅಧಿಕಾರಿಗಳು ಕನ್ನಡ ಭಾಷೆ ಜಾರಿ ವಿಚಾರದಲ್ಲಿ ಎಸಗುವ ತಪ್ಪನ್ನು ‘ಕರ್ತವ್ಯ ಲೋಪ' ಎಂದು ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ತಿಳಿಸಲಾಗಿದೆ.

ಕನ್ನಡ ಭಾಷೆಗೆ ಪ್ರೋತ್ಸಾಹ: ‘ಸರಕಾರದ ಇ-ಆಡಳಿತ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿ ಅಭಿವೃದ್ಧಿಗಾಗಿ ಸರಕಾರಕ್ಕೆ ಸೃಜನಾತ್ಮಕ ಸಲಹೆ ನೀಡುವ ವ್ಯಕ್ತಿಗಳಿಗೆ ಅಗತ್ಯ ಪ್ರೋತ್ಸಾಹವನ್ನು ನೀಡುವುದಕ್ಕೂ ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಹಂತಗಳಲ್ಲಿಯೂ ಕನ್ನಡ ಭಾಷೆಯನ್ನು ಕಡ್ಡಾಯ ಬಳಕೆ ಮಾಡುವ ನಿಟ್ಟಿನಲ್ಲಿ ಮಹತ್ವದ ವಿಧೇಯಕವನ್ನು ಮಂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News