ಭಾರತ್ ಜೋಡೋ ಒಡೆದು ಹೋಗಿರುವ ಮನಸುಗಳನ್ನು ಜೋಡಿಸುವ ಯಾತ್ರೆ: ಮಾಜಿ ಸಚಿವ ರಮಾನಾಥ ರೈ

Update: 2022-09-22 17:47 GMT

ಚಿಕ್ಕಮಗಳೂರು, ಸೆ.22: 'ವಿಚ್ಛಿದ್ರಕಾರಕ ಶಕ್ತಿಗಳಿಂದ ಒಡೆದು ಹೋಗಿರುವ ದೇಶದ ಜನರ ಮನಸುಗಳನ್ನು ಜೋಡಿಸುವ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ವ್ಯಾಪಕ ಜನ ಸ್ಪಂದನೆ ದೊರೆಯುತ್ತಿದೆ' ಎಂದು ಮಾಜಿ ಸಚಿವ ಮತ್ತು ಕೆಪಿಸಿಸಿ ವೀಕ್ಷಕ ಬಿ.ರಮಾನಾಥ ರೈ ಹೇಳಿದ್ದಾರೆ.

ಗುರುವಾರ ನಗರದ ಕ್ಯಾಥೋಲಿಕ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಯಾತ್ರೆಯ ಮೂಲಕ ದೇಶದಲ್ಲಿ ಮಕ್ಕಳು, ಯುವಜನರು, ವಿದ್ಯಾರ್ಥಿಗಳು, ಹಿರಿಯರು, ಚಿಂತಕರು ಸೇರಿದಂತೆ ಎಲ್ಲಾ ವರ್ಗಗಳ ಜನರು ಒಟ್ಟುಗೂಡುತ್ತಿದ್ದಾರೆ. ಒಡೆದಿರುವ ಜನರ ಮನಸ್ಸುಗಳನ್ನು ಜೋಡಿಸುವ ಈ ಯಾತ್ರೆ ಇತಿಹಾಸದ ಪುಟ ಸೇರಲಿದೆ ಎಂದು ತಿಳಿಸಿದರು.

 ಟೀ ಮಾರಾಟ ಮಾಡುವವರಿಂದ ಹಿಡಿದು ಬಡವರು, ಕೃಷಿಕರು, ಕೂಲಿ ಕಾರ್ಮಿಕರು, ಚಿಂತಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಉದ್ಯಮಿಗಳು, ವರ್ತಕರು, ಸಾಮಾನ್ಯ ಗ್ರಾಹಕರು, ಮಹಿಳೆಯರು ಒಳಗೊಂಡಂತೆ ಎಲ್ಲಾ ವರ್ಗ, ಧರ್ಮಗಳ ಜನರೊಂದಿಗೆ ಪರಸ್ಪರ ಸಮಾಲೋಚನೆ ನಡೆಸುತ್ತಿರುವುದರಿಂದ ಹೆಚ್ಚಿನ ಅನುಭವ ರಾಹುಲ್ ಗಾಂಧಿ ಅವರಿಗೆ ದೊರೆಯಲಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ ಮಹತ್ಮಾ ಗಾಂಧೀಜಿ ಅವರು ನಡೆಸಿದ್ದ ದಂಡಿ ಯಾತ್ರೆ ಹಾಗೂ ಬೇರೆ ಬೇರೆ ಉದ್ದೇಶಗಳೊಂದಿಗೆ ವಿನೋಭಾಬಾವೆ, ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರು ನಡೆಸಿದ್ದ ಯಾತ್ರೆಗಳಂತೆಯೇ ಜನಪರವಾದ ಮತ್ತು ಭಾರತದ ಜನರನ್ನು ಜೋಡಿಸುವ ಈ ಯಾತ್ರೆಗೆ ಈ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರ ಕಾರ್ಯಕರ್ತರು ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಪಕ್ಷದ ಕಾರ್ಯಕರ್ತರು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಚಿಂತಕರು, ಯುವಜನರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕಾಂಗ್ರೆಸ್‍ನ ಪ್ರತಿ ಬ್ಲಾಕ್ ಗಳಲ್ಲಿ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಬೇಕು. ಸೆ.9 ರಂದು ತುರುವೇಕೆರೆ, ಗುಬ್ಬಿಯಲ್ಲಿ ನಡೆಯುವ ಯಾತ್ರೆಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ತಂಡ ಭಾಗವಹಿಸಲಿದೆ. ಸೆ.10 ರಂದು ಗುಬ್ಬಿ ಮತ್ತು ಶಿರಾದಲ್ಲಿ ನಡೆಯುವ ಯಾತ್ರೆಯಲ್ಲಿ ಚಿಕ್ಕಮಗಳೂರು ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ತಂಡಗಳು, ಸೆ.12 ರಮದು ಹಿರಿಯೂರು ಮಾರ್ಗದಲ್ಲಿ ನಡೆಯುವ ಯಾತ್ರೆಯಲ್ಲಿ ತರೀಕೆರೆ, ಶೃಂಗೇರಿ ವಿಧಾನಸಭಾ ಕ್ಷೇತ್ರಗಳ ತಂಡಗಳು ಭಾಗವಹಿಸಲು ನಿಗಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸೆಸ್, ಪ್ರಸನ್ನ, ಜಿಪಂ ಮಾಜಿ ಅಧ್ಯಕ್ಷರಾದ ಎ.ಎನ್.ಮಹೇಶ್, ದೃವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ.ಮಂಜೇಗೌಡ, ಚಂದ್ರಮೌಳಿ, ಕಲ್ಲೇಶ್, ಫಾರೂಕ್, ನಟರಾಜ್, ಜಿಪಂ ಮಾಜಿ ಸದಸ್ಯ ಆದಿಲ್, ಮುಖಂಡರಾದ ಬಿ.ಎಚ್.ಹರೀಶ್, ದೋರನಾಳು ಪರಮೇಶ್, ಗೋಪಿಕೃಷ್ಣ, ದರ್ಶನ್, ಚಂದ್ರಪ್ಪ, ಶಬೀರ್,  ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News