ಉತ್ತರಾಖಂಡದಲ್ಲಿ ಯುವತಿಯ ಹತ್ಯೆ: ಬಿಜೆಪಿ ಶಾಸಕಿಯ ಕಾರನ್ನು ಧ್ವಂಸಗೊಳಿಸಿದ ಸ್ಥಳೀಯರು
ಹೊಸದಿಲ್ಲಿ: ರೆಸಾರ್ಟ್ ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಬಿಜೆಪಿ ನಾಯಕನ ಪುತ್ರ ಹತ್ಯೆ ಮಾಡಿ Uttarakhand Murder ಬಂಧಿತನಾದ ಬಳಿಕ ಕೋಪಗೊಂಡ ಸ್ಥಳೀಯರು ರೆಸಾರ್ಟ್ ನ ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕಿ ರೇಣು ಬಿಷ್ತ್ ಅವರ ಕಾರನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಶಾಸಕಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ವರದಿಯಾಗಿದೆ.
ಕಟ್ಟಡದ ಒಡೆದ ಗಾಜಿನ ಕಿಟಕಿಗಳಿಂದ ಕಪ್ಪು ಹೊಗೆ ಹೊರಬರುತ್ತಿರುವುದು ಸ್ಥಳದಿಂದ ವೀಡಿಯೊಗಳಲ್ಲಿ ಕಂಡುಬಂದಿದೆ. ಕೂಡಲೇ ಬೆಂಕಿ ನಂದಿಸಲಾಗಿದೆ ಎಂದು ವರದಿಯಾಗಿದೆ.
ರೆಸಾರ್ಟ್ ಮುಖ್ಯ ಪಟ್ಟಣವಾದ ಋಷಿಕೇಶದಿಂದ ಸುಮಾರು 10 ಕಿಮೀ ದೂರದಲ್ಲಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ನಗರಪಾಲಿಕೆಯ ಅಧಿಕಾರಿಗಳು ರಾತ್ರೋರಾತ್ರಿ ರೆಸಾರ್ಟ್ ಅನ್ನು ನೆಲಸಮಗೊಳಿಸಿದ್ದರು.
ಹಿರಿಯ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಅವರನ್ನು ಉತ್ತರಾಖಂಡ್ನ ಪೌರಿ ಜಿಲ್ಲೆಯ ರಿಷಿಕೇಶ್ ಬಳಿಯ ರೆಸಾರ್ಟ್ನಲ್ಲಿ ಯುವ ಸ್ವಾಗತಕಾರಿಣಿಯನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಲಾಗಿದೆ.
ಆರೋಪಿಗೆ ಆರೆಸ್ಸೆಸ್-ಬಿಜೆಪಿ ಜೊತೆಗಿನ ಸಂಬಂಧ ಇರುವ ಕಾರಣ ಪೊಲೀಸರ ತನಿಖೆ ನಿಧಾನವಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
"ಇದು ಭಯಾನಕವಾಗಿದೆ. ಸೆಪ್ಟೆಂಬರ್ 18 ರಂದು ಹುಡುಗಿ ಕಾಣೆಯಾದಾಗ ಸೆಪ್ಟೆಂಬರ್ 21 ರಂದು ಪೊಲೀಸರು ಎಫ್ಐಆರ್ ಅನ್ನು ಏಕೆ ದಾಖಲಿಸಿದ್ದರು?. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಈ ನಿರ್ಲಜ್ಜ ಅಧಿಕಾರ ದುರುಪಯೋಗ ಎಲ್ಲಿಯವರೆಗೆ ಮುಂದುವರಿಯುತ್ತದೆ?"ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಗರಿಮಾ ಮೆಹ್ರಾ ದಸೌನಿ ಪ್ರಶ್ನಿಸಿದ್ದಾರೆ.