ಪಕ್ಷದ ಸಹೋದ್ಯೋಗಿಗಳನ್ನು ಟೀಕಿಸಬೇಡಿ: ಕಾಂಗ್ರೆಸ್ ನಾಯಕರಿಗೆ ಸಿಂಘ್ವಿ ಆಗ್ರಹ
ಹೊಸದಿಲ್ಲಿ,ಸೆ.24: ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಎಐಸಿಸಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ತಮ್ಮ ಸಹೋದ್ಯೋಗಿಗಳನ್ನು ಟೀಕಿಸದಂತೆ ಶನಿವಾರ ಪಕ್ಷದ ನಾಯಕರನ್ನು ಆಗ್ರಹಿಸಿದ್ದಾರೆ.
ಈ ಮೊದಲು ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಹೊಂದಿರುವ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್
ಅವರೂ ಪಕ್ಷದ ವಕ್ತಾರರಿಗೆ ಮತ್ತು ಸಂವಹನ ವಿಭಾಗದ ಪದಾಧಿಕಾರಿಗಳಿಗೆ ಇಂತಹುದೇ ಸೂಚನೆಯನ್ನು ನೀಡಿದ್ದರು.
‘ಜೈ ರಾಮ್ ರಮೇಶ್ ಅವರ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತಿಯಿದೆ.ಕಾಂಗ್ರೆಸ್ ಪಕ್ಷವು ಪ್ರತಿಪಾದಿಸಿಕೊಂಡು ಬಂದಿರುವ ಪ್ರಜಾಸತ್ತಾತ್ಮಕ ಮುಕ್ತ ಅಭಿವ್ಯಕ್ತಿ ಮೌಲ್ಯಗಳನ್ನು ನಾವು ಕಾಯ್ದುಕೊಳ್ಳಬೇಕು ’ ಎಂದು ಸಿಂಘ್ವಿ ಟ್ವೀಟಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಜ್ಜಾಗಿರುವ ಶಶಿ ತರೂರ್ ಬಗ್ಗೆ ಪಕ್ಷದ ನಾಯಕ ಗೌರವ ವಲ್ಲಭ ಅವರು ಕುಹಕವಾಡಿದ ಹಿನ್ನೆಲೆಯಲ್ಲಿ ಸಿಂಘ್ವಿ ಅವರ ಈ ಹೇಳಿಕೆ ಹೊರಬಿದ್ದಿದೆ.
Completely agree with Jairam Ramesh. Fellow congressmen should refrain from commenting on their party colleagues applying for the post of Congress President. We must maintain the fair minded democratic free speech values that the party has always championed.
— Abhishek Singhvi (@DrAMSinghvi) September 24, 2022