ಎನ್‍ಇಪಿಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಒತ್ತು: ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2022-09-26 14:25 GMT

ಧಾರವಾಡ, ಸೆ.26: ಸದೃಢ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆಗೆ ಅನುಕೂಲವಾಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಕೃತಕ ಬುದ್ಧಿಮತ್ತೆ, ಐಟಿಬಿಟಿ, ನ್ಯಾನೊ ತಂತ್ರಜ್ಞಾನ ಸಂಶೋಧನಾ ಅಭಿವೃದ್ಧಿಯಿಂದಾಗಿ ದೇಶವು ಜಾಗತಿಕ ಮಟ್ಟದಲ್ಲಿ ಸಮೃದ್ಧವಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಸೋಮವಾರ ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಐಐಟಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಧಾರವಾಡದ ಐಐಐಟಿ ರಾಜ್ಯ, ರಾಷ್ಟ್ರ, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ತಂತ್ರಜ್ಞಾನಿಗಳನ್ನು ರೂಪಿಸಲಿ. ಯುವ ಜನಾಂಗಕ್ಕೆ ಕೌಶಲ್ಯಭರಿತ ತಂತ್ರಜ್ಞಾನವನ್ನು ಒದಗಿಸುವ ಅಗತ್ಯವಿದೆ ಎಂದರು.

ಡಾಟಾ ವಿಜ್ಞಾನ, ಕೃತಕ ಬುದ್ಧಿಮತ್ತೆಯಂತಹ ಹೊಸ ಆವಿಷ್ಕಾರ ಸಂಶೋಧನೆಗಳಿಂದ ದೇಶವು ಅಭಿವೃದ್ಧಿಯತ್ತ ಸಾಗಲಿದೆ. ಧಾರವಾಡದ ಐಐಐಟಿ ಈಗಾಗಲೇ ಹ್ಯೂಮನಾಯ್ಡ್ ರೋಬೋಟ್ ತಯಾರಿಸುತ್ತಿದ್ದು, ವಿವಿಧ ಭಾಷಾ ಅನುವಾದ ಮಾಡುತ್ತಿದೆ. ಸುಧಾಮೂರ್ತಿ ಅಧ್ಯಕ್ಷೆಯಾಗಿರುವ ಈ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಹಾಗೂ ಸ್ಥಾನಮಾನ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ತಮ್ಮ ಆದರ್ಶದಿಂದಲೇ ರಾಷ್ಟ್ರಪತಿಯಂತಹ ಉನ್ನತ ಹುದ್ದೆಗೆ ಏರಿದ್ದಾರೆ ಇದು ನಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ. ವಿಜ್ಞಾನವು ಮಾನವನ ಅಭಿವೃದ್ಧಿ, ಮಾನವೀಯತೆ ಗುಣಗಳಿಗೆ ಪ್ರೋತ್ಸಾಹ ನೀಡಬೇಕು. ಸಂಶೋಧನೆಗಳು ಮಾನವ ಕುಲದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.

ಅಭಿವೃದ್ಧಿಶೀಲ ಭಾರತದ ಸಾಮಥ್ರ್ಯ ಮಾನವ ಸಂಪನ್ಮೂಲವೇ ಆಗಿದೆ. ಜನಸಂಖ್ಯೆಯನ್ನು ವರವಾಗಿ ಪರಿವರ್ತಿಸಿಕೊಳ್ಳಬೇಕು. ಶೇ.46 ಯುವ ಜನರ ಶಕ್ತಿ ನಮ್ಮಲ್ಲಿದೆ. ಐಐಐಟಿ ಭಾರತದ ಭವಿಷ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, 2015ರಲ್ಲಿ ಧಾರವಾಡ ಐಐಐಟಿಗೆ ಮಂಜೂರಿ ಪಡೆಯಲಾಗಿತ್ತು. 2016ರಿಂದ ತರಗತಿಗಳು ಆರಂಭಗೊಂಡಿದ್ದವು. ಸುಧಾಮೂರ್ತಿ ಇನ್ಫೋಸಿಸ್‍ನಿಂದಲೂ ದೇಣಿಗೆ ನೀಡಿದ್ದಾರೆ. ಶಾಶ್ವತ ಕ್ಯಾಂಪಸ್‍ಗಾಗಿ ಇಲ್ಲಿನ ರೈತರು ಸಹಕಾರ ನೀಡಿದ್ದಾರೆ. ಪ್ರಧಾನಿ ಧಾರವಾಡ ಐಐಐಟಿ ಹಾಗೂ ಐಐಟಿಗೂ ಶಿಲಾನ್ಯಾಸ ಮಾಡಿದ್ದರು. ಇದೇ ಡಿಸೆಂಬರ್‍ನಲ್ಲಿ ನಾವು ಐಐಟಿಯನ್ನೂ ಉದ್ಘಾಟನೆ ಮಾಡುತ್ತೇವೆ ಎಂದರು.

ಧಾರವಾಡ ಐಐಐಟಿಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷೆ ಡಾ.ಸುಧಾಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 2015ರಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಆಧಾರದ ಮೇಲೆ ಸ್ಥಾಪನೆಯಾಗಿರುವ ಈ ಐಐಐಟಿಗೆ ಒಟ್ಟು 128 ಕೋಟಿ ರೂ.ವೆಚ್ಚದಲ್ಲಿ ನೂತನ ಕ್ಯಾಂಪಸ್ ನಿರ್ಮಾಣವಾಗಿದೆ. 1200 ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಎಲ್ಲ ಸೌಕರ್ಯ ನಿರ್ಮಿಸಲಾಗಿದೆ ಎಂದರು. 

ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಡಾಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್‍ನಲ್ಲಿ ಬಿ.ಟೆಕ್ ಕೋರ್ಸುಗಳು ಕ್ರಮವಾಗಿ 150, 75 ಹಾಗೂ 75 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ, ಪಿಎಚ್‍ಡಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿದೆ. 61 ಎಕರೆ ಭೂಮಿಯಲ್ಲಿ ಸುಸಜ್ಜಿತ ಕ್ಯಾಂಪಸ್, ಗ್ರಂಥಾಲಯ, ವಿದ್ಯಾರ್ಥಿನಿಯರ ಹಾಸ್ಟೇಲ್ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ರೈತರು, ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿಶ್ವ ವಿದ್ಯಾಲಯಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News