ರಾಜ್ಯಾದ್ಯಂತ 80ಕ್ಕೂ ಅಧಿಕ ಪಿಎಫ್‍ಐ ಕಾರ್ಯಕರ್ತರು ವಶಕ್ಕೆ?

Update: 2022-09-27 17:56 GMT

ಬೆಂಗಳೂರು, ಸೆ.27: ಇತ್ತೀಚಿಗೆ ಎಸ್‍ಡಿಪಿಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ)ಸಂಘಟನೆಯ ನಾಯಕರ ಮೇಲಿನ ಎನ್‍ಐಎ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದು ಒಳಗೊಂಡತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ, ಕೋಮುಸೌಹಾರ್ದಕ್ಕೆ ಹಾನಿ ಆರೋಪದಡಿ ರಾಜ್ಯದ  ವಿವಿಧ ಭಾಗಗಳಲ್ಲಿ 80ಕ್ಕೂ ಅಧಿಕ ಪಿಎಫ್‍ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ಬೆಳಗಿನ ಜಾವ ಏಕಕಾಲದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಠಾಣಾಧಿಕಾರಿ ಒಳಗೊಂಡ ಪೊಲೀಸರ ತಂಡಗಳು ಪಿಎಫ್‍ಐ ಕಾರ್ಯಕರ್ತರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ 80ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಬಳಿಕ ವಿಚಾರಣೆ ನಡೆಸಿ ಹಲವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರೆ, ಕೆಲವರಿಗೆ ಸರಕಾರಿ ಉದ್ಯೋಗಿಗಳು ತಮ್ಮ ಪರವಾಗಿ ಶ್ಯೂರಿಟಿ ನೀಡಬೇಕೆಂದು ಸೂಚಿಸಲಾಗಿದೆ. ಅದೇ ರೀತಿ, ಮುಂದಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಇರಬೇಕು. ಕೋಮುದ್ವೇಷ ಭಾಷಣ, ಮಾತುಗಳನ್ನಾಡಬಾರದೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ಸುವ್ಯವಸೆಗೆ ಧಕ್ಕೆ ಸಾಧ್ಯತೆ ಹಿನೆಲೆ ದಾಳಿ: ಎಡಿಜಿಪಿ

ಬೀದರ್ ನಿಂದ ಚಾಮರಾಜನಗರದವರೆಗೂ ಎಲ್ಲ ಜಿಲ್ಲೆಗಳಲ್ಲಿಯೂ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದುಕೊಂಡ ಪಿಎಫ್‍ಐ ಕಾರ್ಯಕರ್ತರನ್ನೂ ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಆನಂತರ, ಐಪಿಸಿ ಸೆಕ್ಷನ್ 107 ರಡಿ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು. ವಶಕ್ಕೆ ಪಡೆದ ಮುಖಂಡರು ಮತ್ತು ಕಾರ್ಯಕರ್ತರು ಅಹಿತಕರ ಘಟನೆಯಲ್ಲಿ ಭಾಗಿಯಾಗಕೂಡದು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುವ ರೀತಿ ಪಿಎಫ್‍ಐ ವರ್ತಿಸುತ್ತಿತ್ತು. ಅಶಾಂತಿಯ ವಾತಾವರಣ ಸೃಷ್ಟಿ, ಕುಮ್ಮಕ್ಕು ನೀಡುವ ಚಟುವಟಿಕೆಗಳಲ್ಲಿಯೂ ಆ ಸಂಘಟನೆಯವರಿದ್ದರು. ಹಾಗಾಗಿ, ಮಾಹಿತಿ ಕಲೆ ಹಾಕಿ ಈ ದಾಳಿ ನಡೆಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ಈಗಿನ ದಾಳಿ ಮತ್ತು ಎನ್‍ಐಎಗೂ ಸಂಬಂಧವಿಲ್ಲ. ಇನ್ನೂ, ದಾಳಿ ಸಂದರ್ಭದಲ್ಲಿ ಯಾವುದೇ ದಾಖಲೆಗಳನ್ನು ಜಪ್ತಿ ಮಾಡಿಲ್ಲ. ಈ ಹಿಂದೆ ದೊರೆತಿರುವ ಮಾಹಿತಿ ಆಧಾರದ ಮೇಲೆಯೇ ದಾಳಿ, ಶೋಧ ನಡೆಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.

ಅಸಂವಿಧಾನಿಕ-ಕಾನೂನುಬಾಹಿರ ಬಂಧನ: ಅಬ್ದುಲ್ ಮಜೀದ್

ರಾಜ್ಯ ಬಿಜೆಪಿ ಸರಕಾರ ತನ್ನ ರಾಜಕೀಯ ಶತ್ರುಗಳನ್ನು ಗುರಿಯಾಗಿಸಿಕೊಂಡು ಎಸ್‍ಡಿಪಿಐ ಪಕ್ಷ ಮತ್ತು ಪಿಎಫ್‍ಐ ಕಾರ್ಯಕರ್ತರನ್ನು ಅಸಂವಿಧಾನಿಕ-ಕಾನೂನುಬಾಹಿರವಾಗಿ ಬಂಧಿಸುತ್ತಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.

ಪೊಲೀಸರ ದಾಳಿ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಆಧಾರವಿಲ್ಲದೆ ಅಮಾಯಕರನ್ನು ಕೇವಲ ರಾಜಕೀಯ ದ್ವೇಷಕ್ಕೆ ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯಂತಹ ವಾತಾವರಣವನ್ನು ಸೃಷ್ಟಿ ಮಾಡಿ ನಮ್ಮ ಪಕ್ಷವನ್ನು ಮತ್ತು ಪಿಎಫ್‍ಐ ಹಾಗೂ ಸಿಎಫ್‍ಐ ಸಂಘಟನೆಗಳನ್ನು ಭಯಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.

ಈ ಪ್ರಜಾಪ್ರಭುತ್ವ ವಿರೋಧಿ ಸರಕಾರದ ನಡೆ ದೇಶದಲ್ಲಿ ಕಾನೂನು, ಸಂವಿಧಾನ ಇದೆಯೋ? ಇಲ್ಲವೋ? ಅನ್ನುವ ಅನುಮಾನ ಮೂಡುವಷ್ಟರ ಮಟ್ಟಿಗೆ ಅಸಹ್ಯಕರ ರೀತಿಯ ದ್ವೇಷ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News