​ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಭಾಷಾ ದಿನಾಚರಣೆ

Update: 2022-10-03 09:24 GMT

ಮಂಗಳೂರು, ಅ.3: ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯು ನಗರದ ಖಾಸಗಿ ಹೊಟೇಲ್ ಸಭಾಂಗಣದ ಸಂಶೋಧಕ ಮರ್ಹೂಂ ಪ್ರೊ. ಬಿ.ಎಂ. ಇಚ್ಲಂಗೋಡು ವೇದಿಕೆಯಲ್ಲಿ ಸೋಮವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕರಾವಳಿಗರು ಹೊರ ಜಿಲ್ಲೆ, ರಾಜ್ಯ, ದೇಶ, ವಿದೇಶಕ್ಕೆ ಹೋದರೂ ನಮ್ಮತನ ಉಳಿಸಿಕೊಳ್ಳುತ್ತಿರುವುದು ಕರಾವಳಿಯ ವೈಶಿಷ್ಟ್ಯವಾಗಿದೆ. ಅನೇಕತೆಯೇ ದೇಶದ, ಭಾಷೆಯ ಜೀವಾಳವಾಗಿದೆ. ಸಾಮಾಜಿಕ ಜಾಲತಾಣಗಳ ಸುಳಿಯ ಮಧ್ಯೆ ಭಾಷೆಗಳು ಸಿಲುಕಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿವೆ. ಹಾಗಾಗಿ ಭಾಷೆಯ ಅಸ್ಮಿತೆಗೆ ಭಾಷಾ ದಿನಾಚರಣೆ ಮುಖ್ಯವಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ ಭಾಷೆಯ ಉಚ್ಛಾರಣೆಯಲ್ಲಿ ಸೂಕ್ಷ್ಮತೆ ಮುಖ್ಯವಾಗಿದೆ. ಆ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಭಾಷೆಯನ್ನು ಬಳಸಬೇಕಿದೆ‌. ಅಳಿಯುವ ಭಾಷೆಗಳ ಪಟ್ಟಿಯಲ್ಲಿದ್ದ ಬ್ಯಾರಿ ಭಾಷೆಯನ್ನು ಉಳಿಸಲು ಬ್ಯಾರಿ ಅಕಾಡಮಿಯಲ್ಲದೆ ಬೇರೆ ಬೇರೆ ಬ್ಯಾರಿ ಸಂಘಟನೆಗಳು ಶಕ್ತಿಮೀರಿ  ಪ್ರಯತ್ನಿಸುತ್ತಿರುವುದು ಶ್ಲಾಘನಾರ್ಹ. ಇಂದು ಹಲವು ಕಡೆಗಳಲ್ಲಿ ಬ್ಯಾರಿ ಭಾಷಾ ದಿನ ಆಚರಿಸಿರುವುದು ಸಂತಸದ ವಿಚಾರವಾಗಿದೆ ಎಂದರು‌.

ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಜಿ.ಎಂ. ಶಾಹುಲ್ ಹಮೀದ್ ಮೆಟ್ರೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತೆರಿಗೆ ಸಲಹೆಗಾರ ಪುಂಡಲೀಕಾಕ್ಷ, ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ, ಉಪನ್ಯಾಸಕಿ ಸಿಹಾನಾ ಬಿ.ಎಂ., ಸಮಾಜದ ಮುಖಂಡರಾದ ನಝೀರ್ ಉಳ್ಳಾಲ್, ಅಝೀಝ್ ಕುದ್ರೋಳಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭ ಭಾಷಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಸನಬ್ಬ ಮೂಡುಬಿದಿರೆ ಬ್ಯಾರಿ ಹಾಡುಗಳನ್ನಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಸ್ವಾಗತಿಸಿದರು. ಅಬ್ದುಲ್ ಖಾದರ್ ಇಡ್ಮ ವಂದಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಜೆ‌. ಹುಸೈನ್ ಮತ್ತು ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News