ಭೂತಾನ್ ಅಡಿಕೆ ಅಮದಿಗೆ ನೀಡಿರುವ ಅನುಮತಿ ತಕ್ಷಣ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ

Update: 2022-10-06 10:01 GMT

ಬೆಂಗಳೂರು: 'ಕೇಂದ್ರ ಸರ್ಕಾರದ ದುಷ್ಟ ನೀತಿಯಿಂದಾಗಿ ಈಗ ಅಡಕೆ ಬೆಳೆಗಾರರ ಬದುಕು ನೆಲಕಚ್ಚುವಂತಾಗಿದೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

''ಈಗಾಗಲೇ ಕೊಳೆ ರೋಗ ಮತ್ತು ಎಲೆ ಚುಕ್ಕೆ ರೋಗ ರಾಜ್ಯದಾದ್ಯಂತ ವಿಪರೀತ ಹರಡಿದ್ದು ಅಡಕೆ ಬೆಳೆಗಾರರು ಕಂಗಾಲಾಗಿರುವ ಹೊತ್ತಲ್ಲೇ ಕೇಂದ್ರ ಸರ್ಕಾರದ “ವಿಶ್ವಾಸ ದ್ರೋಹ”ದ ಸಾಂಕ್ರಾಮಿಕ ರೋಗ ಈಗ ಅಡಕೆ ಬೆಳೆ ಮತ್ತು ಬೆಳೆಗಾರರನ್ನು ಆವರಿಸಿದೆ'' ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಬೇಷರತ್ ಅನುಮತಿ ನೀಡಿ ಕಳೆದ ಬುಧವಾರದಂದು ಅಧಿಸೂಚನೆ ಹೊರಡಿಸಿರುವುದು ಅಡಿಕೆ ಬೆಳೆ ಮತ್ತು ಬೆಳೆಗಾರರ ಬದುಕಿಗೆ ಬರೆ ಎಳೆದಂತಾಗಿದೆ. ಅಡಕೆ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುವ ಬೇಡಿಕೆಗಳನ್ನು ಇಟ್ಟುಕೊಂಡು ನಾಡಿನ ಅಡಕೆ ಬೆಳೆಗಾರರು ಪ್ರತಿಭಟನೆಯ ಹಾದಿ ಹಿಡಿದಿರುವ ಹೊತ್ತಲ್ಲೇ ಭೂತಾನ್ ಅಡಕೆ ಆಮದಿಗೆ ಒಪ್ಪಿಗೆ ನೀಡುವ ಮೂಲಕ ಕೇಂದ್ರ ಸರ್ಕಾರ ತನ್ನ ಸಾಂಪ್ರದಾಯಿಕ ಅಹಂಕಾರ ಮೆರೆದಿದೆ' ಎಂದು ಕಿಡಿಕಾರಿದ್ದಾರೆ. 

'ರೈತರು, ಬೆಳೆಗಾರರ ವಿಚಾರದಲ್ಲಿ ಆರಂಭದಿಂದಲೂ ಅಹಂಕಾರವನ್ನೇ ಪ್ರದರ್ಶಿಸುತ್ತಿರುವ ಕೇಂದ್ರ ಸರ್ಕಾರ ಕನಿಷ್ಠ ಆಮದು ಬೆಲೆಯ ಷರತ್ತು (ಎಂಐಸಿ) ಕೂಡ ವಿಧಿಸದೆ ಸದ್ಯ ಭೂತಾನ್ ಅಡಕೆ ಆಮದಿಗೆ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಗಳಿಂದ ಅಡಕೆ ಆಮದಾಗುವ ಅಪಾಯದ ಹೆಬ್ಬಾಗಿಲನ್ನು ಕೇಂದ್ರ ಸರ್ಕಾರ ತೆರೆದಿಟ್ಟಿದೆ' ಎಂದು ಹೇಳಿದ್ದಾರೆ. 

'ವಿದೇಶಿ ಅಡಕೆಯ ಆಮದಿನ ಮೇಲಿನ ಅಬಕಾರಿ ಸುಂಕವನ್ನು ಶೇ110 ರಷ್ಟು ಕಡಿಮೆ ಮಾಡಿ, ನಮ್ಮ ರೈತರು ಬೆಳೆಯುವ ಅಡಿಕೆ ಮೇಲಿನ ಜಿಎಸ್‌ಟಿ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾದಾಗಲೂ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಮಾತ್ರವಲ್ಲದೆ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬೆಳೆಗಾರರ ಸಂಕಷ್ಟವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಸುವಂತೆ ಆಗ್ರಹಿಸಿದ್ದೆ. ಆದರೆ ಪ್ರೊಬೇಷನರಿ ಮುಖ್ಯಮಂತ್ರಿ ಮತ್ತು ಸಂಪುಟಕ್ಕೆ ರಾಜ್ಯದ ರೈತರ ಸಂಕಷ್ಟವನ್ನು ಕೇಂದ್ರಕ್ಕೆ ತಲುಪಿಸುವ ಶಕ್ತಿ ಇಲ್ಲವಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ' ಎಂದು ತಿಳಿಸಿದ್ದಾರೆ.
 
''ಮಲೆನಾಡು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದಾಗ ಮಲೆನಾಡಿನ ರೈತರು ಮತ್ತು ಅಡಿಕೆ ಬೆಳೆಗಾರರು ನನ್ನನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರೂ ಯಾವುದೇ ಪ್ರಯೋಜನವಾಗುವ ಬದಲಿಗೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಆ ಆತಂಕ ನಿಜವಾಗಿದೆ''. 

''ಈಗಾಗಲೇ ಅಡಕೆ ಬೆಳೆಗೆ ಕೊಳೆ ರೋಗ, ಹಳದಿ ಎಲೆ, ಚುಕ್ಕೆ ರೋಗವೂ ಕಾಡುತ್ತಿದೆ. ಸಾಲದ್ದಕ್ಕೆ ವಿಪರೀತ ಮಳೆ ಹಾಗೂ ಮಂಗಗಳ ಹಾವಳಿಯಿಂದ ಅಡಿಕೆ ಗೊನೆಗಳು ನೆಲೆಕಚ್ಚುತ್ತಲೇ ಇವೆ. ಇವೆಲ್ಲದರಿಂದ ಸಣ್ಣ ಪುಟ್ಟ ಅಡಿಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ಮಟ್ಟದ ಬೆಳೆಗಾರರ ಆದಾಯ ಅಷ್ಟಕಷ್ಟೆ ಎನ್ನುವಂತಾಗಿದೆ. ಇಷ್ಟೆಲ್ಲಾ ಸಂಕಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ನಮ್ಮ ಅಡಕೆಯ ಮೇಲೆ ಜಿಎಸ್‌ಟಿ ಹೆಚ್ಚಿಸುತ್ತಾ, ವಿದೇಶದಿಂದ ಬರುವ ಆಮದು ಅಡಕೆ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ “ದೇಶಕ್ಕೆ ಮಾರಿ ನೆರೆ ದೇಶಕ್ಕೆ ಉಪಕಾರಿ”ಯಂತಾಗಿದೆ. ಈಗ ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಮೆಟ್ರಿಕ್ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳಲು ಮುಂದಾಗಿರುವುದು ಜನದ್ರೋಹದ ಪರಮಾವಧಿಯಾಗಿದೆ''.

''ರಾಜ್ಯ ಗೃಹ ಸಚಿವರೂ ಆಗಿರುವ ಆರಗ ಜ್ಷಾನೇಂದ್ರ ಅವರೇ ಅಡಿಕೆ ಸಮಸ್ಯೆ ಬಗೆಹರಿಸುವ ಸಲುವಾಗಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ನ ಅಧ್ಯಕ್ಷರೂ ಅಗಿದ್ದಾರೆ. ಇವರು ಭೂತಾನ್ ಅಡಕೆ ಆಮದನ್ನು ವಿರೋಧಿಸಿ ಕೇಂದ್ರಕ್ಕೆ ಖಾರವಾಗಿ ಪ್ರತಿಕ್ರಿಯಿಸುವ ಬದಲಿಗೆ “ಆಮದಿನಿಂದ ಏನೂ ನಷ್ಟ ಆಗುವುದಿಲ್ಲ. ಭೂತಾನ್ ದೇಶ ನಮ್ಮ ಸಾಂಪ್ರದಾಯಿಕ ಮಿತ್ರ” ಎಂದು ಭಜನೆ ಮಾಡುತ್ತಿದ್ದಾರೆ. ಇಂಥಾ ಭಜನೆಗಳು ನಾಡಿನ ರೈತರ ಸಂಕಷ್ಟವನ್ನು ಪರಿಹರಿಸುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದವರಂತೆ ಗೃಹ ಸಚಿವರು ಮತ್ತು ಸರ್ಕಾರ ವರ್ತಿಸುತ್ತಿದೆ''. 

''ಮಿಜೋರಾಂ, ಬರ್ಮಾ, ಮ್ಯಾನ್ಮಾರ್ ಮೂಲಕ ಭಾರತಕ್ಕೆ ಬರುವ ವಿದೇಶಗಳ ಆಮದು ಅಡಿಕೆಯ ಮೇಲೆ ಅಬಕಾರಿ ಸುಂಕ ಹೆಚ್ಚಿಸಬೇಕು ಎಂದು ಸ್ಥಳೀಯ ಅಡಕೆ ಬೆಳೆಗಾರರು ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಬೆಳೆಗಾರರ ನಿಯೋಗ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಈ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಮನವಿಯನ್ನು ತಿಪ್ಪೆಗೆಸೆದು ಈಗ ಭೂತಾನ್‌ನಿಂದಲೂ ಆಮದು ಮಾಡಿಕೊಳ್ಳುತ್ತಿದೆ''. 

'ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟೀಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಅಡಕೆ ಬೆಳೆಯುವ ಪ್ರದೇಶದವರೆ ಆಗಿದ್ದಾರೆ. ಮಲೆನಾಡು, ಕರಾವಳಿ ಸೇರಿದಂತೆ ಅಡಕೆ ಬೆಳೆಯುವ ಜಿಲ್ಲೆಗಳ ಸಂಸದರು, ಸಚಿವರು, ಶಾಸಕರು ಕೂಡ ಬಾಯಿ ಬಿಡುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರೂ ಅಡಕೆ ಬೆಳೆಗಾರರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಕೇಂದ್ರ ಸರ್ಕಾರದ ಜನದ್ರೋಹಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ. ಇವರೆಲ್ಲರೂ ಸೇರಿ ಅಡಕೆ ಬೆಳೆಗಾರರಿಗೆ ಮರಣ ಶಾಸನ ಬರೆಯುತ್ತಿರುವುದು ನಾಚಿಕೆಗೇಡು''. 

''ಹೀಗಾಗಿ ಬೇಷರತ್ತಾಗಿ ಭೂತಾನ್ ಅಡಕೆ ಆಮದಿಗೆ ನೀಡಿರುವ ಅನುಮತಿಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಅಡಕೆ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಿ ಆಮದು ಅಡಕೆ ಮೇಲೆ ಅಬಕಾರಿ ಸುಂಕ ಹೆಚ್ಚಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು'' ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News