ಮತ್ಸ್ಯವಾಹಿನಿ ಯೋಜನೆಯಡಿ ದ್ವಿಚಕ್ರ,ತ್ರಿಚಕ್ರ ವಾಹನ ಬಿಡುಗಡೆ; ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ತೀರ್ಥರಾಮ

Update: 2022-10-20 12:44 GMT

ಮಂಗಳೂರು, ಅ.20: ಮತ್ಸ್ಯವಾಹಿನಿ ಯೋಜನೆಯಡಿ ಗ್ರಾಮಾಂತರ ಭಾಗಕ್ಕೆ ಮೀನು ಸಾಗಾಟಕ್ಕೆ ಅನುಕೂಲ ವಾಗುವಂತೆ ರಾಜ್ಯಕ್ಕೆ 300 ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಬಿಡುಗಡೆಯಾಗಿದ್ದು, ಶೀಘ್ರ ಅವುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ತೀರ್ಥರಾಮ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರಿಗೆ ಸಹಕಾರ ಸಂಘಗಳಿಂದ ಸಾಲ ಕೊಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಶೀಘ್ರದಲ್ಲೇ ಇದು ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ ಎಂದರು.

ಮೀನುಗಾರಿಕೆ ವೇಳೆ ಮೃತಪಟ್ಟರೆ ರಾಜ್ಯ ಮತ್ತು ಕೇಂದ್ರದ ನೆರವು ಸೇರಿ ಒಟ್ಟು 11 ಲಕ್ಷ ರು. ಪರಿಹಾರಧನ ಸಿಗಲಿದೆ. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ರು.ವರೆಗೆ ಸಾಲ ಯೋಜನೆ ರೂಪಿಸ ಲಾಗಿದೆ. ಮೀನುಗಾರರ ಮಕ್ಕಳಿಗೆ 50 ಕೋಟಿ ರು. ವಿದ್ಯಾನಿಧಿ, 5 ಸಾವಿರ ಮೀನುಗಾರರಿಗೆ ಮನೆ ನಿರ್ಮಿಸಿ ಕೊಡುವ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಅಲ್ಲದೆ ಮೀನುಗಾರ ಸ್ತ್ರೀಶಕ್ತಿ ಸಂಘಗಳಿಗೆ 3 ಲಕ್ಷ ರೂ.ವರೆಗೆ ಸಹಾಯಧನ ಘೋಷಣೆ ಮಾಡಲಾಗಿದೆ. ಅಲ್ಲದೆ, ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಮೀನುಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಮುದ್ರ ಮೀನುಗಾರಿಕೆಯಲ್ಲಿ ಮೀನು ಉತ್ಪತ್ತಿ ಕಡಿಮೆಯಾಗುತ್ತಿದೆ. ಹಾಗಾಗಿ  ಒಳನಾಡು ಮೀನುಗಾರಿಕೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. 250 ಮೀನು ಮರಿಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ಮೀನು ಕೃಷಿ ಮಾಡಲು 2 ಲಕ್ಷ ರು.ವರೆಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಜತೆಗೆ ಐಸ್‌ಪ್ಲ್ಯಾಂಟ್, ಐಸೊಲೇಟೆಡ್ ವಾಹನ ನಿರ್ಮಿಸಲು ಸಬ್ಸಿಡಿ ಸಹಿತ ಸಾಲ ನೀಡಲಾಗುವುದು ಎಂದು ಅವರು ಹೇಳಿದರು. ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಗಣೇಶ್ ಹೊಸಬೆಟ್ಟು, ವಿಜಯಕುಮಾರ್ ಮತ್ತಿತರರಿದ್ದರು.

ದಂಡ ಪ್ರಮಾಣ ಹೆಚ್ಚಳ

ಕರ್ನಾಟಕದ ಮೀನುಗಾರರು ಮೀನುಗಾರಿಕೆ ವೇಳೆ ರಾಜ್ಯದ ಗಡಿ ದಾಟಿ  ಬೇರೆ ರಾಜ್ಯಗಳ ಗಡಿಯೊಳಗೆ ಹೋದರೆ ಅಲ್ಲಿ ಅಧಿಕ ದಂಡ ಹಾಕಲಾಗುತ್ತದೆ. ಬೇರೆ ರಾಜ್ಯದ ಮೀನುಗಾರರು ಕರ್ನಾಟಕ ಗಡಿ ದಾಟಿದರೆ ವಿಧಿಸಲಾಗುವ ದಂಡ ಪ್ರಮಾಣ ಕಡಿಮೆಯಾಗಿತ್ತು. ಅದನ್ನೀಗ 5 ಲಕ್ಷ ರೂ.ವರೆಗೂ ಏರಿಕೆ ಮಾಡಲಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಾಗಿದೆ ಎಂದು ತೀರ್ಥರಾಮ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News