ಮಡಿಕೇರಿ: ಸರ್ವೆಗೆ ತೆರಳಿದ್ದ ಅರಣ್ಯ ಸಿಬ್ಬಂದಿ ಹೊಳೆಗೆ ಬಿದ್ದು ಮೃತ್ಯು

Update: 2022-11-09 07:20 GMT

ಮಡಿಕೇರಿ ನ.9 : ಸರ್ವೆಗೆಂದು ತೆರಳಿದ್ದ ಅರಣ್ಯ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ತೊಡಿಕಾನ ಸಮೀಪದ ಮಾವಿನ ಕಟ್ಟೆ ನರುವೋಳು ಎಂಬಲ್ಲಿ ವರದಿಯಾಗಿದೆ. 

ಚಿನ್ನಪ್ಪ (58) ಎಂಬುವವರೇ ಮೃತ ಅರಣ್ಯ ವೀಕ್ಷಕರಾಗಿದ್ದು, ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬುಧವಾರ ಹೊಳೆಯಲ್ಲಿ ಅವರ ಮೃತದೇಹ ದೊರೆತಿದೆ ಎಂದು ತಿಳಿದು ಬಂದಿದೆ.  

ಅರಣ್ಯ ಇಲಾಖೆಯ ಕೊಡಗು ವೃತ್ತದಿಂದ ಭೂಮಿಯ ಸರ್ವೆಗೆಂದು ತೊಡಿಕಾನಕ್ಕೆ ಹೋದ ಸಂದರ್ಭ ಆಕಸ್ಮಿಕವಾಗಿ ಹೊಳೆಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Similar News