ಹೈದರಾಬಾದ್‍ನಿಂದ ಉತ್ತರ ಪ್ರದೇಶಕ್ಕೆ ಸೆಳೆತ: ಹೀಗೊಂದು ದುರಂತ ಪ್ರೇಮಕಥೆ...

Update: 2022-11-13 03:29 GMT

ಬಿಜ್ನೋರ್: ಒಂಬತ್ತು ತಿಂಗಳ ಹಿಂದೆ ಜಾಲತಾಣದ ಮೂಲಕ ಆಗಿದ್ದ ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿ ದುರಂತ ಅಂತ್ಯ ಕಂಡ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರನ ಭೇಟಿಗಾಗಿ ಹೈದರಾಬಾದ್‍ನಿಂದ ದೂರದ ಉತ್ತರ ಪ್ರದೇಶಕ್ಕೆ ತೆರಳಿದ್ದ 25 ವರ್ಷದ ಯುವತಿ ಅದೇ ಪ್ರಿಯಕರನಿಂದ ಹತ್ಯೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆ ಜಜ್ಜಿದ ಸ್ಥಿತಿಯಲ್ಲಿ ಸಲ್ಮಾ (ಹೆಸರು ಬದಲಿಸಲಾಗಿದೆ) ಮೃತದೇಹ ಪತ್ತೆಯಾಗಿದ್ದು, ಉತ್ತರ ಪ್ರದೇಶದಲ್ಲಿ ಪೆಯಿಂಟ್ ಅಂಗಡಿ ನಡೆಸುತ್ತಿದ್ದ 36 ವರ್ಷ ವಯಸ್ಸಿನ ಶೆಹಝಾದ್ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಈಗ ಜೈಲುಪಾಲಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಒಂಬತ್ತು ತಿಂಗಳ ಬಳಿಕ ಸ್ನೇಹ, ಪ್ರೇಮಕ್ಕೆ ತಿರುಗಿದ್ದು, ಶೆಹಝಾದ್‍ನನ್ನು ಭೇಟಿ ಮಾಡುವ ಇಂಗಿತವನ್ನು ಯುವತಿ ವ್ಯಕ್ತಪಡಿಸಿದ್ದಳು. ಉತ್ತರಪ್ರದೇಶದಲ್ಲಿ ಭೇಟಿಯಾಗುವಂತೆ ಪ್ರಿಯಕರ ಸೂಚಿಸಿದ. ಸಲ್ಮಾ ಮೊದಲ ಬಾರಿಗೆ ಪ್ರಿಯಕರನನ್ನು ಭೇಟಿ ಮಾಡುವ ಸಲುವಾಗಿ ನವೆಂಬರ್ 8ರಂದು ಹೈದರಾಬಾದ್‍ನಿಂದ ಉತ್ತರಪ್ರದೇಶಕ್ಕೆ ತೆರಳಿದ್ದಳು.

ತೆಲಂಗಾಣದಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯ ಮಗಳಾದ ಸಲ್ಮಾ, ಶೆಹಝಾದ್ ತನ್ನನ್ನು ವಿವಾಹವಾಗುವಂತೆ ಬಲವಂತಪಡಿಸಿದಳು. ಇದಕ್ಕೆ ಆತ ಒಪ್ಪಲಿಲ್ಲ. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಶೆಹಝಾದ್ ಇಟ್ಟಿಗೆಯಿಂದ ಸಲ್ಮಾ ತಲೆಯನ್ನು ಜಜ್ಜಿ, ಬಳಿಕ ಉಸಿರು ಕಟ್ಟಿಸಿ ಸಾಯಿಸಿದ್ದಾನೆ. ಬಳಿಕ ತನ್ನ ಪೆಯಿಂಟ್ ಅಂಗಡಿ ಬಳಿಯ ಭದ್ರತಾ ಏಜೆನ್ಸಿ ಕಚೇರಿ ಬಳಿ ಶವವನ್ನು ಬಿಟ್ಟು ತೆರಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

"ನವೆಂಬರ್ 9ರಂದು ಯುವತಿಯ ಮೃತದೇಹ ಕಚೇರಿ ಆವರಣದಲ್ಲಿ ಕಂಡುಬಂದಿದೆ. ಐಡಿ ಕಾರ್ಡ್ ನೆರವಿನಿಂದ ಆಕೆಯನ್ನು ಪತ್ತೆ ಮಾಡಲಾಯಿತು. ಆಕೆಯ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಸೇರಿದಂತೆ ಇಬ್ಬರನ್ನು ವಿಚಾರಣೆ ನಡೆಸಲಾಗಿದ್ದು, ಫೇಸ್‍ಬುಕ್ ಮೂಲಕ ಯುವತಿಯ ಪರಿಚಯವಾಗಿದ್ದಾಗಿ ಆರೋಪಿ ಒಪ್ಪಿಕೊಂಡ. ಆರೋಪಿಯ ಅಂಗಡಿಯಲ್ಲೇ ಆತನನ್ನು ಭೇಟಿ ಮಾಡಲು ಬಂದಿದ್ದ ಯುವತಿ ಹಾಗೂ ಆತನ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿತು" ಎಂದು ಎಸ್ಪಿ ಆದಿತ್ಯ ಲಂಗೇಹ್ ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News