ಒಂದು ಕಾಲದಲ್ಲಿ ಭಿಕ್ಷುಕ ದೇಶವಾಗಿದ್ದ ಭಾರತ, ಮೋದಿ ಶ್ರಮದಿಂದ ಆರ್ಥಿಕವಾಗಿ ಸದೃಢವಾಗಿದೆ: ಕೆ.ಎಸ್.ಈಶ್ವರಪ್ಪ

''ದೇಶದಲ್ಲಿ ಈಗ ಭಯೋತ್ಪಾದನೆ ಕಡಿಮೆಯಾಗಿದೆ''

Update: 2022-11-14 13:04 GMT

ಶಿವಮೊಗ್ಗ , ನ.14: ಒಂದು ಕಾಲದಲ್ಲಿ ಭಿಕ್ಷುಕ ದೇಶವಾಗಿದ್ದ ಭಾರತ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಆರ್ಥಿಕವಾಗಿ ಸದೃಢವಾಗಿದ್ದು, ಬ್ರಿಟನ್ ರಾಷ್ಟ್ರಗಳನ್ನೇ ಹಿಂದಿಕ್ಕುವತ್ತ ಸಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ (K. S. Eshwarappa) ಹೇಳಿದ್ದಾರೆ. 

ವಿನೋಬಗರದ ಚಾಚಾ ನಗರ ಪಾರ್ಕ್ ಸಮುದಾಯ ಭವನದಲ್ಲಿ ಶಿವಮೊಗ್ಗ ನಗರದ ಬಿಜೆಪಿ, ಭಗತ್ ಸಿಂಗ್ ಮಹಾಶಕ್ತಿ ಕೇಂದ್ರ, 8ನೇ ವಾರ್ಡ್ ಜೆಪಿಎನ್ ಶಕ್ತಿ ಕೇಂದ್ರ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

''ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಮತಾಂತರ ಪ್ರಕರಣ, ಭಯೋತ್ಪಾದನೆ ಕಡಿಮೆಯಾಗಿದೆ. ಭಾರತವನ್ನು ಕಂಡು ಹೀಯಾಳಿಸುತ್ತಿದ್ದ ದೇಶಗಳು ಇಂದು ಭಾರತದ ದೇಶದ ಅಭಿವೃದ್ಧಿ ಕಂಡು ಉಬ್ಬೇರಿಸುತ್ತಿವೆ. ಭಾರತೀಯರೆಂದರೆ ಭಿಕ್ಷಕರು ಎಂಬ ಕಲ್ಪನೆ ಇತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿಶ್ವವೇ ಭಾರತವನ್ನು ಪ್ರೀತಿ ಮಾಡಲು ಶುರು ಮಾಡಿದ್ದಾರೆ. ಮೋದಿ ಬಂದ ಮೇಲೆ ದೇಶದ ಘನತೆ ಹೆಚ್ಚಿದೆ'' ಎಂದು ಬಣ್ಣಿಸಿದರು.

 ''ದೇಶದಲ್ಲಿ ಅಸ್ಥಿತ್ವವೇ ಇಲ್ಲದಂತೆ ಇದ್ದ ಬಿಜೆಪಿ ಪಕ್ಷ ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಪಕ್ಷ ಸಂಘಟನೆಗೊಂಡಿದೆ. ದೇಶದ ಸಂಸ್ಕಾರ, ಸಂಸ್ಕೃರಿ ಉಳಿಸಿ, ರಕ್ಷಣೆ ಮಾಡಿಕೊಂಡು ಬಂದ ಪಾರ್ಟಿ ನಮ್ಮದು. ಬಿಜೆಪಿ ಸದಸ್ಯರ ಸಂಖ್ಯೆ 10 ಕೋಟಿ ದಾಟಿದೆ. ವಿಶ್ವದಲ್ಲಿ ನಂ.1 ಪಾರ್ಟಿ ಬಿಜೆಪಿ.  ಇವತು ಗುಡ್ಡಗಾಡು ಪ್ರದೇಶದಿಂದ ಸ್ಲಮ್ ವರೆಗೆ ಎಲ್ಲ ಕಡೆ ಬಿಜೆಪಿ ಇದೆ. ಸುಭದ್ರವಾಗಿ ಸಂಘಟನಾತ್ಮಕವಾಗಿ ಪಕ್ಷ ಸದೃಢವಾಗಿದೆ'' ಎಂದರು.

ಇದನ್ನೂ ಓದಿ... ನನಗೆ ಹೆಚ್ಚು ವರ್ಷ ಬದುಕಿ, ಹೆಚ್ಚು ಹೆಚ್ಚು ಜನರ ಸೇವೆ ಮಾಡಬೇಕೆಂಬ ಆಸೆ: ಸಿದ್ದರಾಮಯ್ಯ 

''ಬಿಜೆಪಿ ಬೇರೆ ಪಕ್ಷದ ರೀತಿ ಅಲ್ಲ. ವರ್ಷಪೂರ್ತಿ ಚಟುವಟಿಕೆ ನಡೆಯುತ್ತಲೇ ಇರುತ್ತವೆ. ಕಾರ್ಯಕರ್ತರು ಕೊರೋನಾ ಸಂದರ್ಭದಲ್ಲಿ ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಲ್ಲದೆ ಸಹಾಯಹಸ್ತ ಚಾಚಿಸಿದ್ದಾರೆ. ಹೀಗಾಗಿ ಭಾರತ ಕೊರೋನಾ ನಿಯಂತ್ರಣದಲ್ಲಿ ಮೇಲುಗೈ ಸಾಧಿಸಿದೆ. ಇದಕ್ಕೆ ಮೋದಿ ಅವರಂಥ ಮುತ್ಸದ್ದಿ ರಾಜಕಾರಣಿಗಳ ರಾಜಕಾರಣವೂ ಕಾರಣ'' ಎಂದು ಹೇಳಿದರು.

''ಅಮಿತ್ ಶಾ ಗೃಹ ಸಚಿವರಾದ ಬಳಿಕ ಪಕ್ಷ ಸಂಘಟನಾತ್ಮಕವಾಗಿ ಪೇಜ್ ಪ್ರಮುಖರನ್ನು ನೇಮಿಸಿ, ಪ್ರತಿಯೊಬ್ಬ ಕಾರ್ಯಕರ್ತನ ಸುಖ ದುಃಖಗಳಿಗೆ ಸ್ಪಂದಿಸಲಾಗುತ್ತಿದೆ.ಈ ಪ್ರಯೋಗ ಈಗ ಯಶ್ವಸ್ವಿಯಾಗಿದೆ. ಪ್ರತಿ ಐದು ಜನ ಕಾರ್ಯಕರ್ತರಿಗೆ ಒಬ್ಬ ಪೇಜ್ ಪ್ರಮುಖ ತೆರಳಿ, ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಈ ವ್ಯವಸ್ಥೆ ಬೇರೆ ಪಕ್ಷದಲ್ಲಿ ಇಲ್ಲ. ಆಗಾಗಿ ಬಿಜೆಪಿ ಸದೃಢವಾಗಿ ಬೆಳೆಯುತ್ತಿದೆ'' ಎಂದು ತಿಳಿಸಿದರು.

'ಪಕ್ಷ ಸಂಘಟನೆಗೆ ಪೇಜ್ ಪ್ರಮುಖರ ಪಾತ್ರ ಮಹತ್ವದ್ದು. ಕಾರ್ಯಕರ್ತರು ಪ್ರತಿ ಮನೆಗೆ ನೇರೆ ಸಂಪರ್ಕ ಇರಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ದತ್ತ ಸೆಳೆಯಬೇಕು' ಎಂದು ಕರೆ ನೀಡಿದರು.

ಸಭೆಯಲ್ಲಿ ವಾರ್ಡ್ ಸದಸ್ಯ ಚನ್ನಬಸಪ್ಪ, ನಗರ ಅಧ್ಯಕ್ಷ ಜಗದೀಶ್, ವಿಭಾಗ ಸಂಘಟನಾ ಕಾರ್ಯದರ್ಶಿ ಗಣೇಶ್ ರಾವ್, ಶಕ್ತಿ ಕೇಂದ್ರದ ಪ್ರಮುಖರಾದ ವಾಗ್ದೇವ್, ವಿಭಾಗ ಸಂಘಟನಾ ಕಾರ್ಯದರ್ಶಿ ನಟರಾಜ್, ದಿನೇಶ್, ಮಲ್ಲಿಕಾರ್ಜುನ್, ವಾರ್ಡ್ ಅಧ್ಯಕ್ಷ ಲಕ್ಷ್ಮೇಕಾಂತ್ ಭಟ್ ಮತ್ತಿತರರು ಇದ್ದರು.

Similar News