ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯ ಕೆಲ ನಾಯಕರಿಂದ ದಾಳಿಗೆ ಸಂಚು ಆರೋಪ; ಡಿಜಿಪಿಗೆ ದೂರು ನೀಡಿದ ರಮೇಶ್ ಬಾಬು

ಪ್ರಚೋದನೆ ನೀಡಿದ ಸಚಿವರು ಸಹಿತ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Update: 2022-11-16 10:13 GMT

ಬೆಂಗಳೂರು: ''ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆಯವರನ್ನು (Priyank Kharge) ಗುರಿಯಾಗಿಸಿಕೊಂಡು ರಾಜ್ಯ ಬಿಜೆಪಿಯ ಕೆಲವು ನಾಯಕರು ಸಂಚು ಮಾಡಿ ಅವರ ವ್ಯಕ್ತಿತ್ವಕ್ಕೆ ಕುಂದುಂಟುಮಾಡುವ ಮತ್ತು ದೈಹಿಕವಾಗಿ ಅವರ ಮೇಲೆ ದಾಳಿ ಮಾಡುವ ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಪೂರಕವಾಗಿ ಬಿಜೆಪಿಯ ಕೆಲವು ವ್ಯಕ್ತಿಗಳನ್ನು ಬಳಸಿಕೊಂಡು ಅವರ ವಿರುದ್ಧ ಚಿತ್ತಾಪುರ ಕ್ಷೇತ್ರದಲ್ಲಿ ಪೋಸ್ಟರ್ ಗಳ ಮೂಲಕ ಅಪಪ್ರಚಾರ ಮಾಡಿ ರಾಜಕೀಯ ದ್ವೇಷವನ್ನು ಹರಡಲು ಮತ್ತು ಕೋಮು ಸಾಮರಸ್ಯವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ'' ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಆರೋಪಿಸಿದ್ದಾರೆ. 

ಈ ಸಂಬಂಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿರುವ ಅವರು, ''ಗುಲ್ಬರ್ಗ ಜಿಲ್ಲೆಯಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಯ ಒಳ ಸಂಚಿನ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸಿದ ನಂತರ, ಸ್ಥಳೀಯವಾಗಿ ಬಿಜೆಪಿಯ ಒಬ್ಬ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಆದರೆ ಈ ಒಳಸಂಚಿನಲ್ಲಿ ಭಾಗಿಯಾಗಿರುವ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕದಡಲು ಪ್ರಚೋದನೆ ನೀಡಿರುವ ಇತರೆ ನಾಯಕರನ್ನು ತನಿಖೆಯ ಮೂಲಕ ಸಂಚಿನ ಭಾಗವಾಗಿ ಬಂಧಿಸಬೇಕಾಗಿದೆ'' ಎಂದು ಆಗ್ರಹಿಸಿದ್ದಾರೆ. 

''ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ತಿನ  ಸದಸ್ಯರಾದ ರವಿಕುಮಾರ್,  ಪ್ರಿಯಾಂಕ ಖರ್ಗೆ ವಿರುದ್ಧ ನಡೆದಿರುವ ಸಂಚಿನ ಸಂಬಂಧ ಮಾದ್ಯಮಗಳಲ್ಲಿ ಮಾತನಾಡಿ, ಆಕ್ಷನ್‍ಗೆ ರಿಯಾಕ್ಷನ್ ಇರುವುದಾಗಿ ಸಂಚನ್ನು ಸಮರ್ಥಿಸಿಕೊಂಡಿರುತ್ತಾರೆ. ಈ ಸಂಚಿನಲ್ಲಿ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಕೆಲವು ಸಚಿವರು ಭಾಗಿಯಾಗಿರುವ ಅನುಮಾನಗಳಿರುತ್ತವೆ. ಪ್ರಿಯಾಂಕ್ ಖರ್ಗೆರವರ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ವ್ಯವಸ್ಥಿತವಾಗಿ ಸಂಚು ಮಾಡಿ, ಅವರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಹಲ್ಲೆ ಮಾಡಲು, ಸಾರ್ವಜನಿಕವಾಗಿ ಅವರ ಘನತೆಗೆ ಮಸಿ ಬಳಿಯಲು, ಅವರ ಮೇಲೆ ಸುಳ್ಳು ಸುದ್ದಿ ಹಬ್ಬಿಸಲು, ಅಪಪ್ರಚಾರ ಮಾಡಲು, ಅವರ ವಿರುದ್ಧ ಪ್ರಚೋದನೆ ಮಾಡಲು ಷಡ್ಯಂತ್ರ ಮಾಡಲಾಗಿದೆ'' ಎಂದು ದೂರಿನಲ್ಲಿ ತಿಳಿಸಿದ್ದಾರೆ. 

''ರಾಜ್ಯದ ಒಬ್ಬ ಹಾಲಿ ಶಾಸಕರಿಗೆ ಸೂಕ್ತ ರಕ್ಷಣೆ ನೀಡುವ ಬದಲು ಅವರ ವಿರುದ್ಧ ರಾಜ್ಯದ ಗೃಹ ಸಚಿವರೇ ನಿರಂತರವಾಗಿ ಪ್ರಚೋಧನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಪಿಎಸ್‍ಐ ಹಗರಣ, ಬೋರ್‍ವೆಲ್ ಹಗರಣ, ಬಿಟ್‍ಕಾಯಿನ್ ಹಗರಣ, ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟಾಚಾರ ಹಾಗೂ ಇನ್ನಿತರ ಆಡಳಿತ ವೈಫಲ್ಯಗಳನ್ನು ನಿರಂತರವಾಗಿ ಬಯಲು ಮಾಡುತ್ತಿರುವ ಕಾರಣಕ್ಕಾಗಿ ಶ್ರೀ ಪ್ರಿಯಾಂಕ ಖರ್ಗೆರವರ ವಿರುದ್ಧ ವ್ಯವಸ್ಥಿತವಾಗಿ ಸಂಚು ಮಾಡಲಾಗುತ್ತಿದೆ. ಈ ಸಂಚಿನ ವಿರುದ್ಧ ತ್ವರಿತ ತನಿಖೆ ಮತ್ತು ಆರೋಪಿಗಳ ಬಂಧನ ಅವಶ್ಯಕವಾಗಿರುತ್ತದೆ'' ಎಂದು ಹೇಳಿದ್ದಾರೆ. 

''ಪ್ರಿಯಾಂಕ್ ಖರ್ಗೆರವರ ವಿರುದ್ಧ ನಡೆದಿರುವ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ಮತ್ತು ಅನುಮಾನಿತರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ರಾಜ್ಯದ ಒಬ್ಬ ಶಾಸಕರ ವಿರುದ್ಧವೇ ಇಂತಹ ಸಂಚು ಮತ್ತು ಷಡ್ಯಂತ್ರಗಳು ನಡೆದರೆ ಇಡೀ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿಯಲು ಅವಕಾಶವಾಗುತ್ತದೆ. ಸಮಾಜಗಾತುಕ ಶಕ್ತಿಗಳನ್ನು ಸೂಕ್ತ ಕ್ರಮದ ಮೂಲಕ ಬಂಧಿಸದೇ ಇದ್ದರೆ, ಅದು ವ್ಯವಸ್ಥೆಯ ಅಣಕವಾಗುತ್ತದೆ. ಆದುದರಿಂದ ಈ ಸಂಚಿನಲ್ಲಿ ಭಾಗಿಯಾಗಿರುವ, ಪ್ರಚೋದನೆ ನೀಡಿರುವ ಮಂತ್ರಿಗಳ ಸಹಿತವಾಗಿ ಎಲ್ಲಾ ಆರೋಪಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ'' ಎಂದು ರಮೇಶ್ ಬಾಬು ಅವರು ಹೇಳಿದ್ದಾರೆ. 

Similar News