ಟ್ಯಾಂಕ್‌ನಿಂದ ನೀರು ಕುಡಿದ ದಲಿತ ಮಹಿಳೆ: ನೀರು ಖಾಲಿ ಮಾಡಿ ಗೋಮೂತ್ರದಿಂದ 'ಶುದ್ಧೀಕರಿಸಿದ' ಗ್ರಾಮಸ್ಥರು

ಚಾಮರಾಜನಗರದಲ್ಲಿ ನಡೆದ ಅಮಾನವೀಯ ಘಟನೆ

Update: 2022-11-19 17:29 GMT

ಚಾಮರಾಜನಗರ: ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್ ನಲ್ಲಿಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಟ್ಯಾಂಕ್‌ ಅನ್ನು 'ಶುದ್ಧೀಕರಿಸಿದ' ಘಟನೆ ಶುಕ್ರವಾರ ನಡೆದಿದೆ. ಇದರ ವೀಡಿಯೊವನ್ನು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಾಕಿರುವುದು ವರದಿಯಾಗಿದೆ

ಘಟನೆಯ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ತಹಶೀಲ್ದಾರ್‌ಗೆ ವರದಿ ನೀಡಿದ್ದಾರೆ.

‘ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನ ಮದುವೆ  ಶುಕ್ರವಾರ ಗ್ರಾಮದಲ್ಲಿ ನಡೆದಿತ್ತು. ವಧುವಿನ ಕಡೆಯವರು  ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯತರ ಬೀದಿಯಲ್ಲಿರುವ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿದ್ದಾರೆ. ಮಹಿಳೆ ದಲಿತ ಸಮುದಾಯದವರು ಎಂದು ಗೊತ್ತಾಗುತ್ತಿದ್ದಂತೆ ಆಕೆಯನ್ನು ನಿಂದಿಸಿದ್ದಾರೆ. ನಂತರ ಟ್ಯಾಂಕ್‌ನ ಎಲ್ಲ ನಲ್ಲಿಯನ್ನು ತೆರೆದು ನೀರು ಖಾಲಿ ಮಾಡಿ, ಗೋಮೂತ್ರ ಹಾಕಿ 'ಸ್ವಚ್ಛ'ಗೊಳಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದಾರೆ.

ಶನಿವಾರ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ೨೦ಕ್ಕೂ ಯುವಕರು ಘಟನೆ ನಡೆದಿರುವ ಬಗ್ಗೆ ಲಿಖಿತವಾಗಿ ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಪ್ಪಿತಸ್ಥರ ವಿರುದ್ಧ ಕ್ರಮ: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ತಾಲೂಕು ತಹಶೀಲ್ದಾರ್ ಐ.ಇ.ಬಸವರಾಜು, ‘ಈ ಬಗ್ಗೆ ಮಾಹಿತಿ ಬಂದಿದೆ. ಶನಿವಾರ     ಕಂದಾಯ ನಿರೀಕ್ಷಕರನ್ನು ಕಳುಹಿಸಿ ವರದಿ ಪಡೆದಿದ್ದೇನೆ. ಅದರ ಆಧಾರದಲ್ಲಿ, ಗ್ರಾಮಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಮಗ್ರ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸುತ್ತೇನೆ. ಗ್ರಾಮದಲ್ಲಿ ಎಲ್ಲ ಸಮುದಾಯದವರ ಸಭೆ ನಡೆಸಿ, ಘಟನೆ ನಡೆದಿರುವುದು ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ಎಂದು ಮಾಹಿತಿ ನೀಡಿದ್ದಾರೆ.

Similar News