ಚಿಲುಮೆ ಸಂಸ್ಥೆ ಹಗರಣ: ತನಿಖಾ ಸಂಸ್ಥೆಗಳು ಮಾನಸಿಕ ಹಿಂಸೆ ನೀಡುತ್ತಿದೆ ಎಂದು ದೂರು ನೀಡಿದ ಬಿಬಿಎಂಪಿ ಸಿಬ್ಬಂದಿ

Update: 2022-11-27 13:11 GMT

ಬೆಂಗಳೂರು, ನ. 27: ಮತದಾರರ ಮಾಹಿತಿ ಕದ್ದ ‘ಚಿಲುಮೆ’ ಸಂಸ್ಥೆ ಹಗರಣದಲ್ಲಿ ನಮ್ಮನ್ನು ಗುರಿಯಾಗಿಸಿಕೊಂಡಿರುವ ತನಿಖಾ ಸಂಸ್ಥೆಗಳು, ಮಾನಸಿಕ ಹಿಂಸೆ ನೀಡಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಸಿಬ್ಬಂದಿ ದೂರಿದ್ದಾರೆ.

ರವಿವಾರ ಈ ಸಂಬಂಧ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದ ತನಿಖೆ, ವಿಚಾರಣೆ ನೆಪದಲ್ಲಿ ನಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಒಂದೆಡೆ ಪೊಲೀಸರು ತನಿಖೆಗೆ ಕರೆದರೆ, ಮತ್ತೊಂದೆಡೆ, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಉತ್ತರ ನೀಡಬೇಕಾಗಿದೆ. ಅದೇ ರೀತಿ, ನಮ್ಮ ಕೆಲಸವೂ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲಸೂರುಗೇಟ್, ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಠಾಣೆಗಳ ಪೊಲೀಸರು ಕೂಡ ವಿಚಾರಣೆಗೆ ಕರೆದು ಮಾಹಿತಿ ಪಡೆಯುತ್ತಿದ್ದಾರೆ. ಜತೆಗೆ, ಆಯಾ ವಿಧಾನಸಭಾ ಕ್ಷೇತ್ರ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದರು.

ಇಷ್ಟೇ ಮಾತ್ರವಲ್ಲದೆ, ಕಂದಾಯ ಅಧಿಕಾರಿಗಳು ಇದೇ ವಿಚಾರವಾಗಿ ಮೊಬೈಲ್‍ಗೆ ಕರೆ ಮಾಡಿ ತಕ್ಷಣ ಬರುವಂತೆ ಸೂಚಿಸುತ್ತಾರೆ. ಒಂದಷ್ಟು ಕಾಲಾವಕಾಶ ಕೇಳಿದರೂ, ನಮ್ಮ ಮೇಲೆಯೇ ಮುಗಿಬೀಳುತ್ತಾರೆ. ಹೀಗೆ, ಕಳೆದ ಹತ್ತು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಚಟುವಟಿಕೆಗಳಿಂದ ಬಿಬಿಎಂಪಿ ನೀಡಿರುವ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದ ಅವರು, ಮುಖ್ಯಮಂತ್ರಿ ಹಾಗೂ ಚುನಾವಣಾ ಆಯೋಗ ಸೂಕ್ತ ನಿರ್ಧಾರ ಕೈಗೊಂಡು, ಪಾಲಿಕೆ ಸಿಬ್ಬಂದಿಯ ಹಿತಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಜತೆಗೆ, ಕಂದಾಯ ಅಧಿಕಾರಿ ಅವರ ಕಚೇರಿಯಲ್ಲಿಯೇ ಎಲ್ಲಾ ಹಂತದ ಸಿಬ್ಬಂದಿಯ ವಿಚಾರಣೆ ನಡೆಯಬೇಕು.ಈ ಕೂಡಲೇ ಬಿಎಲ್‍ಒ ಗಳನ್ನು ಮುಖ್ಯ ಚುನಾವಣಾಧಿಕಾರಿಗಳನ್ನು ನೇಮಿಸಬೇಕು ಎಂದು ಅಮೃತ್ ರಾಜ್ ಆಯೋಗಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Similar News