ಉಡುಪಿ: ವಿಶ್ವ ಏಡ್ಸ್ ದಿನ ಅಂಗವಾಗಿ ಕಲಾವಿದರಿಂದ ಜಾಗೃತಿಗಾಗಿ ಮರಳು ಶಿಲ್ಪ ರಚನೆ
Update: 2022-11-30 14:09 GMT
ಉಡುಪಿ: ಮಣಿಪಾಲ್ ಸ್ಯಾಂಡ್ ಹಾರ್ಟ್ನ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೆಬೆಟ್ಟು ವಿಶ್ವ ಏಡ್ಸ್ ದಿನದ ಅಂಗವಾಗಿ ರೋಗದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಣಿಪಾಲದಲ್ಲಿ ಮರಳು ಶಿಲ್ಪದ ಕಲಾಕೃತಿಯೊಂದನ್ನು ರಚಿಸಿದರು.
ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗ ದೊಂದಿಗೆ ‘ಮುಳುಗದಿರಲಿ ಜೀವನದ ಪಯಣ’ ಎಂಬ ಶೀರ್ಷಿಕೆಯಡಿ ಕಲಾವಿದರು ಈ ಕಲಾಕೃತಿಯನ್ನು ರಚಿಸಿದರು.
ಕಲಾಕೃತಿಯಲ್ಲಿ ಮರಳಿನಿಂದ ಒಂದು ಹಡಗನ್ನು ಕಾಲ್ಪನಿಕವಾಗಿ ರಚಿಸಲಾಗಿದ್ದು, ಅದನ್ನು ಜೀವನದ ಸುಮಧುರ ಪಯಣಕ್ಕೆ ಹೋಲಿಸಲಾಗಿದೆ. ಕಲಾಕೃತಿಯ ಜೊತೆಯಲ್ಲಿ ಮುಳುಗದಿರಲಿ ಜೀವನದ ಪಯಣ ಎನ್ನುವ ಏಡ್ಸ್ ಜಾಗೃತಿ ಸಂದೇಶವನ್ನು ನೀಡಲಾಗಿದೆ.