ಅಕ್ರಮ ಆಸ್ತಿ ಖರೀದಿ ಆರೋಪ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ ದೂರು

Update: 2023-04-05 05:32 GMT

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದು, ಸರಕಾರಕ್ಕೆ ಭಾರೀ ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ಪ್ರಕರಣದ ತನಿಖೆಗೆ ಒತ್ತಾಯಿಸಿ ಕೊಪ್ಪ ಮೂಲದ ದಿನೇಶ್ ಹೊಸೂರು ಎಂಬವರು ಬುಧವಾರ ನಗರದ ಲೋಕಾಯುಕ್ತ ಕಚೇರಿಗೆ ಮತ್ತೆ ದೂರು ಸಲ್ಲಿಸಿದ್ದಾರೆ.

ನಗರದ ಲೋಕಾಯುಕ್ತ ಕಚೇರಿಗೆ ಬುಧವಾರ ವಿವಿಧ ದಾಖಲೆ ಪತ್ರಗಳೊಂದಿಗೆ ಆಗಮಿಸಿದ ಅವರು, ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಅಕ್ರಮ ಆಸ್ತಿ ಖರೀದಿ ಮತ್ತು ಸರಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ದಿನೇಶ್ ಹೊಸೂರು, 'ಶೃಂಗೇರಿ ಶಾಸಕ ರಾಜೇಗೌಡರ ಅವರು ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಟಿ.ಡಿ.ರಾಜೇಗೌಡ ಅವರು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಅಂದು ಅವರ ವರ್ಷದ ಆದಾಯ ಆದಾಯ 34ಲಕ್ಷ ರೂ. ಆಗಿತ್ತು. 2021-22ರ ವರ್ಷದ ಆದಾಯ 40ಲಕ್ಷ ರೂ. ಆಗಿದ್ದು, ಇದನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ದಾಖಲಿಸಿದ್ದಾರೆ. ಕೃಷಿ ಮತ್ತು ವೈಯಕ್ತಿಕ ಆದಾಯ ಅಲ್ಲದೇ ಶಾಸಕ ರಾಜೇಗೌಡ ಅವರು 123 ಕೋಟಿ ರೂ. ಬ್ಯಾಂಕ್ ಸಾಲ ಮಾಡಿದ್ದು, ಶಬಾನ್ ರಂಜಾನ್ ಟ್ರಸ್ಟ್‍ಗೆ ಸೇರಿದ್ದ 266 ಎಕರೆ 38 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. ಜಮೀನು ಖರೀದಿ ಸಂಬಂಧ ಲೋಕಾಯುಕ್ತ ಅಥವಾ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ' ಎಂದು ಆರೋಪಿಸಿದರು.

123 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಅವರು ಅನೇಕ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ್ದು, ಅವರ ಪತ್ನಿ ಡಿ.ಕೆ.ಪುಷ್ಪಾ, ಮಗ ಟಿ.ಆರ್.ರಾಜದೇವ್, ಮಗಳು ಅರ್ಪಿತಾ ಯುವರಾಜ್ ಶೇ.33ರಂತೆ ಷೇರು ತಗೆದುಕೊಂಡು 123 ಕೋಟಿ ಆಸ್ತಿಯ ಸಾಲಕ್ಕೆ ಸಂಬಂಧಿಸಿದಂತೆ ನರಸಿಂಹರಾಜಪುರ ತಾಲೂಕು ನೋಂದಣಾಧಿಕಾರಿ ಕಚೇರಿಯಲ್ಲಿ ಆಧಾರ ಖುಲಾಸೆ ಮಾಡಿಸಿದ್ದಾರೆ. 123 ಕೋಟಿ ರೂ. ಹಣ ಎಲ್ಲಿಂದ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ದೂರು ದಾಖಲಿಸಿದ್ದೇನೆ ಎಂದರು.

ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಶಾಸಕರ ವಿರುದ್ಧ ದೂರು ನೀಡಿದ್ದೆ: ವಿಜಯಾನಂದ

ಶಾಸಕ ಟಿ.ಡಿ.ರಾಜೇಗೌಡ ಅಕ್ರಮ ಆಸ್ತಿ ಸಂಪಾದನೆ ಹಾಗೂ ಸರಕಾರಕ್ಕೆ ತೆರಿಗೆ ವಂಚನೆ ಆರೋಪ ಸಂಬಂಧ ತನಿಖೆ ನಡೆಸುವಂತೆ ಕೊಪ್ಪ ಮೂಲದ ವಿಜಯಾನಂದ ಎಂಬವರು ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ವಿಜಯಾನಂದ ದೂರು ಸಲ್ಲಿಸಿ ಕೆಲವು ದಿನಗಳ ಬಳಿಕ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಆಮಿಷವೊಡ್ಡಿ ಪ್ರಚೋದಿಸಿದ್ದರಿಂದ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೆ, ದೂರಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ದಾಖಲಿಸಿರುವ ದೂರನ್ನು ಹಿಂಪಡೆದಿದ್ದೇನೆಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ ಹರಿಯಬಿಟ್ಟಿದ್ದರು.

ವಿಜಯಾನಂದ ಅವರು ಶಾಸಕ ರಾಜೇಗೌಡ ಅವರ ವಿರುದ್ಧ ನೀಡಿದ್ದ ದೂರು ಹಿಂಪಡೆಯುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರು,  ರಾಜೇಗೌಡ ಅವರ ಅಕ್ರಮ ಆಸ್ತಿ ಖರೀದಿ ಹಾಗೂ ತೆರಿಗೆ ವಂಚನೆ ಸಂಬಂಧ ಮತ್ತೆ ದೂರು ದಾಖಲಿಸುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆ ಬಳಿಕ ಶಾಸಕ ಟಿ.ಡಿ.ರಾಜೇಗೌಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಅಕ್ರಮ ಆಸ್ತಿ ಆರೋಪ ಸತ್ಯಕ್ಕೆ ದೂರವಾದದ್ದು, ಈ ಸಂಬಂಧ ಯಾವುದೇ ತನಿಖೆಗೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದರು.

ಇದರ ಬೆನ್ನಲ್ಲೇ ಕೊಪ್ಪ ಮೂಲದ ದಿನೇಶ್ ಹೊಸೂರು ಎಂಬುವರು ಜಿಲ್ಲಾ ಲೋಕಾಯುಕ್ತ ಕಚೇರಿಯಲ್ಲಿ ಮತ್ತೆ ದೂರು ಸಲ್ಲಿಕೆ ಮಾಡಿದ್ದಾರೆ. 

Similar News