ಗೋಧ್ರಾ ಗಲಭೆಕೋರರಿಗೆ ಜಾಮೀನು ಕುರಿತು ಮೃದು ನಿಲುವಿಗೆ ಗುಜರಾತ್ ಸರಕಾರ ನಕಾರ

Update: 2022-12-03 07:41 GMT

ಹೊಸದಿಲ್ಲಿ: ಎರಡನೆ ಹಂತದ ಚುನಾವಣೆ ಬಾಕಿಯಿರುವಾಗಲೇ ಗೋಧ್ರಾ ಗಲಭೆಕೋರರಿಗೆ (Godhra convicts) ಜಾಮೀನು ನೀಡುವ ಕುರಿತು ತಾನು ಯಾವುದೇ ಕಾರಣಕ್ಕೂ ಮೃದು ನಿಲುವು ತಳೆಯುವುದಿಲ್ಲ ಎಂದು ಗುಜರಾತ್ ಸರ್ಕಾರ (Gujarat govt) ಹೇಳಿದೆ. ಗೋಧ್ರಾ ಗಲಭೆಯ ನಂತರ ಗುಜರಾತಿನಾದ್ಯಂತ ಕೋಮುಗಲಭೆ ಸ್ಫೋಟಗೊಂಡಿತ್ತು. ಸ್ವತಃ ಸುಪ್ರೀಂ ಕೋರ್ಟ್, ಗಲಭೆಕೋರರ ಪೈಕಿ ಕೆಲವು ಆರೋಪಿಗಳು ಕೇವಲ ಕಲ್ಲೆಸೆತದಲ್ಲಿ ತೊಡಗಿದವರಾಗಿದ್ದು, ಅವರು ಈಗಾಗಲೇ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದರೂ, ಅದು ತನ್ನ ನಿಲುವನ್ನು ಸಡಿಲಿಸಿಲ್ಲ. ಗೋಧ್ರಾ ಗಲಭೆಯಲ್ಲಿ ದೋಷಿಗಳಾಗಿರುವ ಗಲಭೆಕೋರರು ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್ ನಲ್ಲಿ 2018ರಿಂದ ಬಾಕಿ ಇದೆ ಎಂದು timesofindia ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ. ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು, ದೋಷಿಗಳು ಕಳೆದ 17-18 ವರ್ಷಗಳಿಂದ ಸೆರೆವಾಸದಲ್ಲಿದ್ದಾರೆ. ಈ ಪೈಕಿ ಕೇವಲ ಕಲ್ಲೆಸೆತದಲ್ಲಿ ತೊಡಗಿದ್ದವರಿಗಾದರೂ ತಾನು ಜಾಮೀನು ನೀಡುವ ಕುರಿತು ಚಿಂತಿಸುತ್ತೇನೆ ಎಂದು ಹೇಳಿತು. ಆದರೆ, ಪೀಠದ ನಿಲುವನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅದು ಕೇವಲ ಕಲ್ಲೆಸೆತ ಮಾತ್ರವಾಗಿರಲಿಲ್ಲ. ಬದಲಿಗೆ ಕಲ್ಲೆಸೆತವು ಸಂತ್ರಸ್ತರು ಉರಿಯುತ್ತಿರುವ ಬೋಗಿಯಿಂದ ತಪ್ಪಿಸಿಕೊಳ್ಳುವುದನ್ನು ತಡೆಯಿತು ಎಂದು ವಾದಿಸಿದರು.

ಫೆಬ್ರವರಿ 27, 2002ರಂದು ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ಟ್ರೈನ್‍ ಗೆ ಗಲಭೆಕೋರರು ಬೆಂಕಿ ಹಚ್ಚಿದ್ದರಿಂದ 29 ಮಂದಿ ಪುರುಷರು, 22 ಮಂದಿ ಮಹಿಳೆಯರು ಹಾಗೂ ಎಂಟು ಮಕ್ಕಳನ್ನು ಒಳಗೊಂಡಂತೆ ಒಟ್ಟು 59 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್, 11 ಮಂದಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಿ, 20 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು. ಉಳಿದ 63 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

ಎಸ್-6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ನಂತರ, ಒಳಗಿದ್ದ ಪ್ರಯಾಣಿಕರು ಹೊರಬರದಿರಲು ಅಥವಾ ಹೊರಗಿನಿಂದ ಅವರನ್ನು ಯಾರಾದರೂ ರಕ್ಷಿಸಲು ಸಾಧ್ಯವಾಗದಂತೆ ಮಾಡಲು ದೋಷಿಗಳು ಕಲ್ಲು ತೂರಾಟ ನಡೆಸಿದ್ದರು” ಎಂದು ಗುಜರಾತ್ ಸರಕಾರದ ಪರ ವಾದಿಸಿದ ತುಷಾರ್ ಮೆಹ್ತಾ, ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಎಲ್ಲ ಮೇಲ್ಮನವಿಗಳನ್ನು ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಕೋರಿದರು

ಹೀಗಿದ್ದೂ, ಗಲಭೆಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬ ದೋಷಿಯ ಪಾತ್ರವನ್ನು ತಾನು ಪರೀಕ್ಷಿಸಿ, ದೋಷಿಗಳ ಪೈಕಿ ಯಾರಾದರೂ ಗಂಭೀರವಲ್ಲದ ಪಾತ್ರ ನಿರ್ವಹಿಸಿದ್ದರೆ ಅಂಥವರಿಗೆ ಜಾಮೀನು ನೀಡಲು ಸಾಧ‍್ಯವೇ ಎಂಬ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಅವರ ಮಾತನ್ನು ಒಪ್ಪಿಕೊಂಡ ನ್ಯಾಯಾಲಯವು, ಡಿಸೆಂಬರ್ 15ರೊಳಗೆ ಈ ಕುರಿತು ಕ್ರಮ ಕೈಗೊಂಡು ತನ್ನ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸೂಚಿಸಿತು.

ಗೋಧ್ರಾ ಗಲಭೆ ಕುರಿತು ವಾದಿಸಿದ್ದ ಸರ್ಕಾರಿ ವಕೀಲರು, ಫೆಬ್ರವರಿ 27, 2002ರಂದು ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು, ಸಾಬರಮತಿ ಎಕ್ಸ್ ಪ್ರೆಸ್ ರೈಲನ್ನು ಬಲವಂತವಾಗಿ ಗೋಧ್ರಾ ರೈಲು ನಿಲ್ದಾಣದಲ್ಲಿ ತಡೆ ಹಿಡಿದಿದ್ದರು. ಇದಲ್ಲದೆ ಆರೋಪಿಗಳು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸದಂತೆ ತಡೆದರು ಎಂದು ಹೇಳಿದ್ದರು. 

ಇದಕ್ಕೂ ಮುನ್ನ ಗೋಧ್ರಾ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಬ್ದುಲ್ ರೆಹಮಾನ್ ಮಜೀದ್ ಗೆ ಆತನ ಅನಾರೋಗ್ಯ ಪೀಡಿತ ಪತ್ನಿ ಹಾಗೂ ಇಬ್ಬರ ಅಂಗವಿಕಲ ಮಕ್ಕಳಿಗೆ ಆತನ ಆರೈಕೆಯ ಅಗತ್ಯವನ್ನು ಮನಗಂಡು ನವೆಂಬರ್ 11, 2022ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಡಿ.ಬಿ. ಪಾರ್ದಿವಾಲಾ ಅವರನ್ನು ಒಳಗೊಂಡಿದ್ದ ಪೀಠವು ಮೇ 13, 2022ರಂದು ನೀಡಲಾಗಿದ್ದ ಜಾಮೀನಿನ ಅವಧಿಯನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ವಿಸ್ತರಿಸಿತ್ತು ಎಂದು timesofindia.indiatimes.com ವರದಿ ಮಾಡಿದೆ.

Similar News