ಇಂದಿನ ರೌಡಿಗಳೇ ಮುಂದಿನ BJP ನಾಯಕರು: ಕಾಂಗ್ರೆಸ್ ವ್ಯಂಗ್ಯ

Update: 2022-12-03 13:08 GMT

ಬೆಂಗಳೂರು, ಡಿ. 3: ‘ಹಿಂದೆ ರೌಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು, ಈಗ ಬಿಜೆಪಿಯ ರೌಡಿ ರಾಜಕೀಯದಿಂದಾಗಿ ಅದೇ ರೌಡಿಗಳಿಗೆ ಪೊಲೀಸರು ಸೆಲ್ಯೂಟ್ ಹೊಡೆಯುವಂತಾಗಿದೆ. ರೌಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರ ನೈತಿಕ ಸ್ಥೈರ್ಯವನ್ನೇ ಬಿಜೆಪಿ ಕಿತ್ತುಕೊಂಡಿದೆ. ‘ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು’ ಎಂಬಂತಾಗಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸದ್ದಿಲ್ಲದೆ ಬಿಜೆಪಿಯ ‘ರೌಡಿ ಮೋರ್ಚಾ’ ರೂಪುಗೊಳ್ಳುತ್ತಿದೆ. ಜೈಲಿನಲ್ಲಿ ಇರಬೇಕಾದವರು ಬಿಜೆಪಿ ಕಚೇರಿಯಲ್ಲಿದ್ದಾರೆ. ರೌಡಿಗಳಿಗೆ ಪ್ರೋತ್ಸಾಹಿಸುವುದಿಲ್ಲ ಎಂದು ಯೂಟರ್ನ್ ಸ್ಟೇಟ್ಮೆಂಟ್ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಆನೇಕಲ್ ಪುರಸಭೆಗೆ ರೌಡಿ ಶೀಟರ್‍ನನ್ನು ನಿಮ್ಮದೇ ಸರಕಾರ ನಾಮನಿರ್ದೇಶನ ಮಾಡಿರುವುದೇಕೆ? ದಮ್ಮು ತಾಕತ್ತಿದ್ದರೆ ಉತ್ತರಿಸಿ’ ಎಂದು ಆಗ್ರಹಿಸಿದೆ.

‘ಕೋಮು ರಾಜಕಾರಣ ಸಾಲದು ಎಂಬಂತೆ ರೌಡಿ ರಾಜಕೀಯ ಮಾಡಲು ಹೊರಟಿದೆ ಬಿಜೆಪಿ. ರಾಮರಾಜ್ಯದ ಹೆಸರು ಹೇಳುತ್ತಿದ್ದ ಬಿಜೆಪಿ ನಾಯಕರು ರೌಡಿರಾಜ್ಯ ಮಾಡಲು ಹೊರಟಿದ್ದಾರೆ. ಅಪ್ಪು ಎಂಬವನ ಮೇಲಿದ್ದ ರೌಡಿಶೀಟ್ ತೆಗೆಸಿ ರಾಜಕಾರಿಣಿಯ ಮುಖವಾಡ ತೋಡಿಸಿದ್ದೇಕೆ ಬವಸರಾಜ ಬೊಮ್ಮಾಯಿ ಅವರೇ? ಬಿಜೆಪಿ ಸೇರುವ ಎಲ್ಲ ರೌಡಿಗಳ ಕೇಸ್‍ಗಳನ್ನೂ ಮನ್ನಾ ಮಾಡುವಿರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಸಿಎಂ ಬಸವರಾಜ ಬೊಮ್ಮಾಯಿಯವರು ಧಮ್ಮು, ತಾಕತ್ತು ಇದ್ರೆ ಬನ್ನಿ ಎಂದು ರೌಡಿಸಂ ಭಾಷೆಯಲ್ಲಿ ಸವಾಲು ಹಾಕಿದ್ದರ ಹಿಂದೆ ನೈಜ ರೌಡಿಸಂ ಇದೆ ಎಂದು ಈಗ ಬೆಳಕಿಗೆ ಬರುತ್ತಿದೆ. ರೌಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದಿರಾ ಬಸವರಾಜ ಬೊಮ್ಮಾಯಿ ಅವರೇ? ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ, ಬೊಮ್ಮಾಯಿಯವರು ರೌಡಿಗಳಿಗೆ ಮಹಾಗುರುವಿನಂತೆ ಆಗಿದ್ದಾರೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ರೌಡಿಗಳನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಮತ್ತೊಂದೆಡೆ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ನಡೆಸುತ್ತಿದೆ. ಬೆತ್ತನಗೆರೆ ಶಂಕರ ಎಂಬ ರೌಡಿ ಶೀಟರ್‍ನನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡದ್ದಾರೆ ಸಂಸದ ಪ್ರತಾಪ ಸಿಂಹ, ಸಚಿವ ಆರ್.ಅಶೋಕ್ ಅವರೇ, ರೌಡಿ ರಾಜ್ಯ ಕಟ್ಟಲು ಹೊರಟಿದ್ದೀರಾ? ಇದೇನಾ ನಿಮ್ಮ ಸಂಸ್ಕøತಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

Similar News