‘ನನಗೂ ಬಿಜೆಪಿಯಲ್ಲಿ ಸ್ಥಾನ ಕೊಡುವಿರಾ’ ಎಂದು ಫ್ಲೆಕ್ಸ್‌ ಹಿಡಿದು ನಿಂತಿದ್ದ ರೌಡಿ ಶೀಟರ್ ಪೊಲೀಸ್ ವಶಕ್ಕೆ

Update: 2022-12-03 18:22 GMT

ಮೈಸೂರು,ಡಿ.3: ಬಿಜೆಪಿಗೆ ಇತ್ತೀಚೆಗೆ ರೌಡಿಶೀಟರ್ ಗಳು ಸೇರ್ಪಡೆಯಾಗುತ್ತಿರುವುದರಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಈ ಬೆನ್ನಲ್ಲೇ 'ಬಿಜೆಪಿಗರೇ ನಾನು ರೌಡಿ ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ' ಎಂಬ ಫ್ಲೆಕ್ಸ್‌ ಹಿಡಿದು ನಿಂತು ಏಕಾಂಗಿಯಾಗಿ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಮಂಜ ಅಲಿಯಾಸ್ ಪಾನೀಪುರಿ ಮಂಜ ಬಂಧಿತ ರೌಡಿ ಶೀಟರ್ ಎಂದು ತಿಳಿದು ಬಂದಿದೆ. 

ಶನಿವಾರ ನಗರದ ನ್ಯಾಯಾಲಯದ ಬಳಿ ಇರುವ ಗಾಂಧಿ ಪ್ರತಿಮೆ ಮುಂಭಾಗ  ಪಾನೀಪುರಿ ಮಂಜ ಒಂದು ಫ್ಲೆಕ್ಸ್ ಹಿಡಿದುಕೊಂಡು 'ಬಿಜೆಪಿಗರೇ ನಾನೂ ರೌಡಿ ಶೀಟರ್, ನನ್ನನ್ನೂ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವಿರಾ'  ಎಂದು ಪ್ರತಿಭಟನೆ ನಡೆಸಿದ್ದ. 

ಗಣೇಶ ನಗರದ ನಿವಾಸಿಯಾಗಿರುವ ಈತ ಕೊಲೆಯತ್ನ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. ಬಳಿಕ ಈತನ ಮೇಲೆ ಪೊಲೀಸರು ರೌಡಿ ಶೀಟರ್ ತೆರೆದಿದ್ದರೆನ್ನಲಾಗಿದೆ.

ಈತನ ಈ ವಿನೂತನ ಪ್ರತಿಭಟನೆ ಬಿಜೆಪಿಯವರಿಗೆ ಮುಜುಗರ ಉಂಟು ಮಾಡಿದ್ದು, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾನೆ ಎಂದು ಕೆ. ಆರ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Similar News