ಸಿದ್ದರಾಮಯ್ಯ ಕಲಘಟಗಿಯಿಂದ ಸ್ಪರ್ಧಿಸಲು ಮುಂದಾದರೆ ಕ್ಷೇತ್ರ ಬಿಟ್ಟು ಕೊಡುವೆ: ಸಂತೋಷ ಲಾಡ್

Update: 2022-12-04 09:16 GMT

ಹುಬ್ಬಳ್ಳಿ, ಡಿ.4: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೇ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ ಎಂದು ಮಾಜಿ ಸಚಿವ, ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಸಂತೋಷ ಲಾಡ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಹಲವೆಡೆಗಳಲ್ಲಿ ಕರೆಯುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅದು ಅವರಿಗೆ ಬಿಟ್ಟದ್ದು ಎಂದು ಹೇಳಿದರು‌.

ರಾಜಕೀಯ ಉದ್ದೇಶದಿಂದ ಮದುವೆ ಮಾಡಿಸುತ್ತಿಲ್ಲ: ನಾನು ಮದುವೆ ಮಾಡಿಸುವುದು ಹೊಸದಲ್ಲ. ಲಾಕ್ ಡೌನ್ ಕಾರಣಕ್ಕೆ ಕೆಲವು ಸಮಯ ಮದುವೆ ಮಾಡಿರಲಿಲ್ಲ. ಇದೀಗ ಮತ್ತೆ ಸಾಮೂಹಿಕ ಮದುವೆ ಮಾಡಿಸುವ ಕಾರ್ಯ ಮಾಡುತ್ತಿದ್ದೇವೆ. ಇದು ಯಾವುದೇ ರಾಜಕೀಯ ಉದ್ದೇಶದಿಂದ ಮಾಡುತ್ತಿಲ್ಲ. ಈ ಬಾರಿ  4000 ಮದುವೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಇದು ವರ್ಲ್ಡ್ ರೆಕಾರ್ಡ್ ಕೂಡಾ ಆಗಬಹುದು. ಈಗಾಗಲೇ 1,2000 ಮದುವೆ ಮಾಡಿದ್ದೇನೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಫೋನ್ ಗಳು ಬರುತ್ತಿವೆ ಎಂದರು‌.

ಬಿಜೆಪಿಗರಿಗೆ ಅಭಿವೃದ್ಧಿ ಬೇಕಿಲ್ಲ: ಬಿಜೆಪಿಯವರು ಕೇವಲ ವಿವಾದ ವಿಷಯವಾಗಿ ಮಾತನಾಡುತ್ತಾರೆ. ವಿನಃ ಅವರಿಗೆ ಅಭಿವೃದ್ಧಿ ವಿಷಯ ಬೇಕಾಗಿಲ್ಲ. ವಿರೋಧ ಪಕ್ಷವಾಗಿ ಆಡಳಿತವನ್ನು ಟೀಕೆ ಮಾಡಿದರೇ ಆಡಳಿತ ಪಕ್ಷದವರೇ ವಿರೋಧ ಪಕ್ಷದವರ ಹೇಳಿಕೆಗೆ ಪ್ರತಿ ಹೇಳಿಕೆ ಕೊಡುತ್ತಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳತ್ತಾರೆ ಎಂದರು.

ನಾವು ನೆಲೆಸಿರುವ ಭೂಮಿ ಬಗ್ಗೆ ಗೌರವ ಇಟ್ಟುಕೊಳ್ಳಬೇಕು: ನಾನು ಮರಾಠ ಸಮೂದಾಯದ ನಾಯಕ. ಆದರೆ ನಾವು ಕರ್ನಾಟಕದಲ್ಲಿದ್ದಾಗ ನಮ್ಮ ಭೂಮಿ, ನಮ್ಮ ಭಾಷೆ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಇನ್ನು ಗಡಿ ವಿವಾದ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದೆ. ಗಡಿ ವಿವಾದ ಕೋರ್ಟ್ ನಲ್ಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸಂತೋಷ ಲಾಡ್ ಹೇಳಿದರು.

Similar News