ಹುಬ್ಬಳ್ಳಿ ನಾಪತ್ತೆ ಪ್ರಕರಣಕ್ಕೆ ತಿರುವು: ಮಗನನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ತಂದೆ

Update: 2022-12-05 15:01 GMT

ಹುಬ್ಬಳ್ಳಿ, ಡಿ.5: ಉದ್ಯಮಿಯೋರ್ವ ತನ್ನ ಮಗನನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಘಟನೆ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಅಖಿಲ್ ಜೈನ್ (26) ಎಂಬಾತ ಕೊಲೆಯಾಗಿದ್ದು, ಇಲ್ಲಿನ ಕೇಶ್ವಾಪುರ ಅರಿಹಂತ ನಗರದಲ್ಲಿ ಚಿನ್ನದ ಅಂಗಡಿ ಮಾಲಕನಾಗಿರುವ ಭರತ್ ಜೈನ್‌ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 

ನಾಪತ್ತೆ ದೂರು ದಾಖಲಾಗಿತ್ತು: ಡಿ. 3ರಂದು ಕೇಶ್ವಾಪುರ ಠಾಣೆಯಲ್ಲಿ ಅಖಿಲ್ ಕಾಣೆಯಾದ ಬಗ್ಗೆ ಹಾಗೂ ತಂದೆ ಭರತ್ ಜೈನ್‌ಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಅವನನ್ನು ಪತ್ತೆ ಮಾಡಿಕೊಡಿ ಎಂದು ಅಖಿಲ್ ಚಿಕ್ಕಪ್ಪ ಮನೋಜ್ ಅವರು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಯುವಕನ ತಂದೆ ಭರತ್ ಜೈನ್‌ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು.

ಭರತ್ ಜೈನ್‌ರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಕುರಿತು ನಿಜಾಂಶ ಏನೆಂಬುವುದನ್ನು ಹಾಗೂ ಕೊಲೆಗೆ ಸುಪಾರಿ ಕೊಟ್ಟಿದ್ದಾಗಿ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರ ಹೇಳಿಕೆ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಗನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಏಕೆ ಎಂಬ ಕಾರಣ ಇನ್ನೂ ಗೊತ್ತಾಗಿಲ್ಲ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಕೇಶ್ವಾಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Similar News