ವಿದ್ಯಾರ್ಥಿನಿಗೆ ಅಶ್ಲೀಲ ಪ್ರಶ್ನೆ ಕೇಳಿದ ಆರೋಪ: ಶಿಕ್ಷಕ ಅಮಾನತು

Update: 2022-12-08 07:19 GMT

ಕೋಲಾರ: ವಿದ್ಯಾರ್ಥಿನಿಗೆ ಪ್ರಶ್ನೆ ಕೇಳಿದ್ದ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ತಾಲೂಕಿನ ನರಸಾಪುರದ ಕರ್ನಾಟಕ ‍ಪಬ್ಲಿಕ್‌ ಶಾಲೆಯ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಹಾಗೂ ಪೋಷಕರು ಧರ್ಮದೇಟು ನೀಡಿರುವ ಘಟನೆ ಬುಧವಾರ ನಡೆದಿದೆ.

ಆರೋಪಿ, ಪ್ರೌಢಶಾಲೆಯ ಕನ್ನಡ ಸಹಶಿಕ್ಷಕ ಸಿ.ಎಂ.ಪ್ರಕಾಶ್ ಎಂಬವರನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಅಮಾನತುಗೊಳಿಸಿದ್ದಾರೆ.

ಕೋಲಾರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕನ್ನಯ್ಯ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು, ಪೋಷಕರು ಹಾಗೂ ಮಕ್ಕಳಿಂದ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ ಡಿಡಿಪಿಐಗೆ ವರದಿ ನೀಡಿದ್ದಾರೆ

'10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ವಾಟ್ಸ್‌ಆ್ಯಪ್‌ನಲ್ಲಿ ‘ಏನು ಮಾಡುತ್ತಿದ್ದೀಯಾ? ಎಲ್ಲಿದ್ದೀಯಾ? ಚೆನ್ನಾಗಿ ಎಂಜಾಯ್‌ ಮಾಡು' ಎಂಬಿತ್ಯಾದಿ ಸಂದೇಶ ಕಳುಹಿಸಿದ್ದಾರೆ. ಅದಲ್ಲದೆ, ಹನಿಮೂನ್ ಅರ್ಥ ಗೊತ್ತಾ ಎಂದು ಕೇಳಿದ್ದಾರೆನ್ನಲಾಗಿದೆ. ಅಲ್ಲದೇ, ಮೈಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡು ಬರೆದುಕೊಟ್ಟಿದ್ದಾರೆ. ಶಾಲೆ ಬಳಿ ಬಂದು ಪೋಷಕರು ಹಾಗೂ ಗ್ರಾಮಸ್ಥರು ಬಿಇಒ ಎದುರೇ ಶಿಕ್ಷಕನಿಗೆ ತರಾಟೆ ತೆಗೆದುಕೊಂಡಿದ್ದಾರೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಆರೋಪಿ ಶಿಕ್ಷಕ ಈ ಹಿಂದೆ ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿಯೂ ಅನುಚಿತವಾಗಿ ವರ್ತಿಸಿ ಅಮಾನತುಗೊಂಡಿದ್ದರು ಎಂಬುದು ತಿಳಿದುಬಂದಿದೆ.

Similar News