ಮಹಿಳೆಯರ ರಕ್ಷಣೆ, ಹಿಂದೂ ವಿವಾಹ ಕಾಯಿದೆಯಡಿ ಪತ್ನಿ ಪರಿಹಾರ ಪಡೆಯಲು ಅರ್ಹ: ಹೈಕೋರ್ಟ್

Update: 2022-12-08 16:32 GMT

ಬೆಂಗಳೂರು, ಡಿ.8: ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿಯಲ್ಲಿ ಪರಿಹಾರ ಪಡೆದುಕೊಂಡಿದ್ದರೂ, ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ಪತ್ನಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅಡಿಯಲ್ಲಿ 30 ಸಾವಿರ ರೂ.ಗಳನ್ನು ಪರಿಹಾರ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿರಣ್(ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ನ್ಯಾಯಪೀಠ, ಎರಡೂ ಕಾಯಿದೆಗಳ ಅಡಿಯಲ್ಲಿ ಪ್ರತ್ಯೇಕ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮಹಿಳೆಯರ ರಕ್ಷಣೆ ಮತ್ತು ಕೌಟುಂಬಿಕ ಕಲಹಗಳಿಂದ ಮಹಿಳೆಯರ ರಕ್ಷಣೆ ಕಾಯಿದೆ 2005ರ ಸೆಕ್ಷನ್ 12ರ ಅಡಿಯಲ್ಲಿ ನಿರ್ವಹಣಾ ವೆಚ್ಚದಲ್ಲಿ ತನ್ನ ಪತ್ನಿ ಈಗಾಗಲೇ 20 ಸಾವಿರ ರೂ.ಗಳ ಪಡೆದುಕೊಳ್ಳುತ್ತಿದ್ದಾಳೆ. 

ಹೀಗಾಗಿ ಹೆಚ್ಚುವರಿಯಾಗಿ 10 ಸಾವಿರ ರೂ. ಪರಿಹಾರ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನು ತಳ್ಳಿ ಹಾಕಿರುವ ಹೈಕೋರ್ಟ್, ಕೌಟುಂಬಿಕ ಕಲಹ ಕಾಯಿದೆ ಸೆಕ್ಷನ್ 20(1)ಡಿ ಅಡಿ ಹಾಗೂ ದಂಡ ಪ್ರಕ್ರಿಯ ಸಂಹಿತೆ 125ರ ಅಡಿಯಲ್ಲಿ ಪತ್ನಿಯಾದವರು ನಿರ್ವಹಣಾ ವೆಚ್ಚವಾಗಿ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಅಲ್ಲದೆ, ಹಿಂದೂ ವಿವಾಹ ಕಾಯಿದೆ ಮತ್ತು ಹಿಂದೂ ದತ್ತು ನಿರ್ವಹಣೆ ಕಾಯಿದೆಯ 1956ರ ಅಡಿಯಲ್ಲಿ ಪರಿಹಾರ ಕೇಳಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾಯಿದೆಗಳ ಅಡಿಯಲ್ಲಿ ಪ್ರತ್ಯೇಕ ಪರಿಹಾರ ಪಡೆದುಕೊಳ್ಳಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು: ಅರ್ಜಿದಾರರಾಗಿರುವ ಕಿರಣ್ ಅವರು ಪ್ರತಿವಾದಿಯಾಗಿರುವ ಸವಿತಾ(ಹೆಸರುಗಳನ್ನು ಬದಲಿಸಲಾಗಿದೆ) ಅವರನ್ನು 2018ರ ಡಿ.31ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. 2020ರ ಡಿ.11ರಲ್ಲಿ ಸವಿತಾ ಕಿರುಕುಳ ಆರೋಪದಲ್ಲಿ ದೂರು ದಾಖಲಿಸಿದ್ದರು. 

ಬಳಿಕ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ಸಿವಿಲ್ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಕಿರಣ್ ಅವರು ಸವಿತಾ ಅವರಿಗೆ ಮಧ್ಯಂತರ ಪರಿಹಾರವಾಗಿ 20 ಸಾವಿರ ನೀಡುವುದಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ಇದರ ನಡುವೆ ಕಿರಣ್ ವಿವಾಹ ವಿಚ್ಛೇದನ ನೀಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಪರಿಹಾರವಾಗಿ ಮತ್ತೆ 10 ಸಾವಿರ ರೂ.ಗಳ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Similar News