ಪ್ರಧಾನಿ ಮೋದಿ "ರಾಜಕೀಯ ಟೂರ್" ಆರಂಭಿಸಿದ್ದಾರೆ: ಬಿ.ಕೆ. ಹರಿಪ್ರಸಾದ್

Update: 2023-01-20 09:08 GMT

ಬೆಂಗಳೂರು, ಜ.20: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರತಿದಿನ "ರಾಜಕೀಯ ಟೂರ್" ಆರಂಭಿಸಿದ್ದಾರೆ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ, ಮಾಧ್ಯಮ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನೆರೆ ಬಂತು ಜನರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಧಾನಿ ನರೇಂದ್ರ ಮೋದಿ ಬರಲಿಲ್ಲ. ಅದೇ ರೀತಿ, ಕೋವಿಡ್ ಬಂದಾಗ ಬರಲಿಲ್ಲ. ಆದರೆ ಚುನಾವಣೆ ಬಂತು ಎಂದೂ "ಪೊಲಿಟಿಕಲ್ ಟೂರಿಸಂ" ಅನ್ನು  ಪ್ರಧಾನಿ ಆರಂಭಿಸಿದ್ದಾರೆ ಎಂದು  ಹೇಳಿದರು.

ಚುನಾವಣಾ ದೃಷ್ಟಿಯಿಂದ ಮೂರು ವಾರಕ್ಕೊಂದು ಕೋಮು ಗಲಭೆ ಆಗುತ್ತಿರುವುದನ್ನು ಕಂಡಿದ್ದೇವೆ ಎಂದ ಅವರು, ಕರ್ನಾಟಕ ರಾಜ್ಯದಲ್ಲಿ ನ್ಯಾಷನಲ್ ಎಜುಕೇಷನ್ ಪಾಲಿಸಿಯಿಂದ ಗುಣಮಟ್ಟದ ಶಿಕ್ಷಣ ಕುಸಿತ ಕಂಡಿದೆ. ನಾವು ಪೆನ್ನು ಪುಸ್ತಕ ವಿಚಾರ ಮಾತಾಡಿದರೆ ಪ್ರಜ್ಞಾ ಠಕೂರ್ ಬಂದು ಚಾಕೂ ಚೂರಿ ವಿಚಾರ ಮಾತಾಡ್ತಾರೆ. ಅಮಿತ್ ಶಾ ಬಂದು ಅಮುಲ್ ಕೆಎಂಎಫ್  ವಿಲೀನ ಬಗ್ಗೆ ಮಾತಾಡ್ತಾರೆ. ಅದು ಅಲ್ಲದೆ, ಅಮಿತ್ ಶಾ ರಾಜ್ಯಕ್ಕೆ ವ್ಯಾಪಾರ ಮಾಡುವುದಕ್ಕೆ ಬಂದಿದ್ದಾರೆ ಹೊರತು ಚಾಣಾಕ್ಷತನದಿಂದ ಬೇರೆ ಕೆಲಸಕ್ಕೆ ಬಂದಿಲ್ಲ ಎಂದರು.

ಇನ್ನೂ, ತಾಂಡಗಳಿಗೆ ಕಂದಾಯ ಗ್ರಾಮ ಮಾಡುವ ಸಂಬಂಧ ಖಾಸಗಿ ಮಸೂದೆ ಮಂಡನೆಯಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಎಂದರು.

ಕ್ಷಮೆ: ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ವಿಶೇಷ ಗೌರವವಿದೆ. ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುವೆ. ಅಲ್ಲದೆ, ಕೆಲವರು ನನ್ನ ಹೇಳಿಕೆಯನ್ನು ತಿರುಚಿ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುವೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನನಗೆ ವೈಯಕ್ತಿಕ ಪರಿಚಯವಿದೆ.‌ಅವರ ಸಂಪೂರ್ಣ ಜಾತಕ ಹೇಳುವ ಧೈರ್ಯ ಮಾಹಿತಿ ನನಗೆ ಇದೆ. ಆದರೆ, ಬಿಜೆಪಿಗೆ ಆ ಧೈರ್ಯ ಇಲ್ಲ. ಜೊತೆಗೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಹೇಳುವ ಧೈರ್ಯ ಬಿಜೆಪಿಗೆ ಇಲ್ಲ ಎಂದು ಟೀಕಿಸಿದರು.

ರಸ್ತೆ ಚರಂಡಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಬಿಜೆಪಿಯ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ. ಏಕೆಂದರೆ, ಬಿಜೆಪಿ ಅಭಿವೃದ್ಧಿ ಮಾಡಿರುವ ಕುರಿತು ಹೇಳಲು ಪದಗಳೇ ಇಲ್ಲ. ಹೀಗಾಗಿ, ಈ ರೀತಿಯ ಮಾತುಗಳ್ನಾಡಿ ತಿರುಚುತ್ತಾರೆ ಎಂದರು.

ಕರ್ನಾಟಕವನ್ನು ಗುಜರಾತ್ ಮಾಡೆಲ್ ಮಾಡಬೇಡಿ. ಗುಜರಾತ್ ಹಾಗೂ ಯುಪಿಯಲ್ಲಿ ಕರ್ನಾಟಕದ ಮಾಡೆಲ್ ತರಬೇಕು. ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ ಸರ್ಕಾರಿ ಕಾರ್ಯಕ್ರಮ. ಆದರೂ  ಬಿಜೆಪಿಯ ಧ್ವಜ ಗಳೇ ಕಾಣುತ್ತಿದ್ದವು. ಪ್ರಧಾನಿ ಇರುವುದು ದೇಶಕ್ಕಾ ಅಥವಾ ಕೇವಲ ಬಿಜೆಪಿಗಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.

Similar News