​ಕಳೆದ ಐದು ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿತ 354 ಮಂದಿಯಲ್ಲಿ ಕೇವಲ 32 ಜನರಿಗೆ ಶಿಕ್ಷೆ

Update: 2023-02-08 12:57 GMT

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯಡಿ ಬಂಧಿಸಲ್ಪಟ್ಟ 354 ಜನರ ಪೈಕಿ ಕೇವಲ 32 ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಕೇಂದ್ರ ಸರಕಾರವು ತಿಳಿಸಿದೆ.

ಶಿಕ್ಷೆಗೊಳಗಾದವರ ಪೈಕಿ 12 ಜನರು ಪ್ರಸ್ತುತ ಹಣಕಾಸು ವರ್ಷದಲ್ಲಿ ಜ.31ರವರೆಗೆ,ನಾಲ್ವರು 2021-22ರಲ್ಲಿ,ಓರ್ವರು 2020-21ರಲ್ಲಿ,ಏಳು ಜನರು 2019-20ರಲ್ಲಿ ಮತ್ತು ಎಂಟು ಜನರು 2018-19ರಲ್ಲಿ ಬಂಧಿಸಲ್ಪಟ್ಟಿದ್ದರು.

ಸಹಾಯಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ ಪ್ರತಿಮಾ ಭೌಮಿಕ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಆಪ್ ಸದಸ್ಯ ರಾಘವ ಛಡ್ಡಾ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ.

ಡಿಸೆಂಬರ್ 31ರವರೆಗೆ ದೇಶಾದ್ಯಂತ ವಿಶೇಷ ನ್ಯಾಯಾಲಯಗಳಲ್ಲಿ 1,055 ಪ್ರಕರಣಗಳ ವಿಚಾರಣೆಗಳು ಬಾಕಿಯಿದ್ದವು ಎಂದೂ ಭೌಮಿಕ್ ತಿಳಿಸಿದ್ದಾರೆ.
ಮುಖ್ಯವಾಗಿ ಅಂತರರಾಷ್ಟ್ರೀಯ ಮಾದಕ ದ್ರವ್ಯಗಳ ವ್ಯಾಪಾರದ ಹಣದ ಅಕ್ರಮ ವರ್ಗಾವಣೆಯನ್ನು ತಡೆಯಲು 2002ರಲ್ಲಿ ಪಿಎಂಎಲ್ಎ ಅನ್ನು ಜಾರಿಗೆ ತರಲಾಗಿತ್ತು. 2019ರಲ್ಲಿ ನರೇಂದ್ರ ಮೋದಿ ಸರಕಾರವು ಕಾಯ್ದೆಯನ್ನು ಪೂರ್ವಾನ್ವಯಗೊಳಿಸಲು ಅದಕ್ಕೆ ತಿದ್ದುಪಡಿಯನ್ನು ತಂದಿತ್ತು.

ಗಂಭೀರ ಹಣಕಾಸು ಅಪರಾಧಗಳ ತನಿಖೆ ಮಾಡುವಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದ ಸಾಮರ್ಥ್ಯವನ್ನು ಹೆಚ್ಚಿಸಲು ತಿದ್ದುಪಡಿಗಳು ಅಗತ್ಯವಾಗಿದ್ದವು ಎಂದು ಸರಕಾರವು ಹೇಳಿಕೊಂಡಿದೆ. ಆದರೆ ಅವು ವೈಯಕ್ತಿಕ ಸ್ವಾತಂತ್ರ,ಕಾನೂನಿನ ಕಾರ್ಯವಿಧಾನಗಳು ಮತ್ತು ಸಂವಿಧಾನದ ಆದೇಶವನ್ನು ಉಲ್ಲಂಘಿಸಿವೆ ಎನ್ನುವುದು ಪ್ರತಿಪಕ್ಷಗಳ ಆರೋಪವಾಗಿದೆ.

ತಿದ್ದುಪಡಿಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಅದು ಜುಲೈನಲ್ಲಿ ತಿದ್ದುಪಡಿಗಳನ್ನು ಎತ್ತಿಹಿಡಿದಿತ್ತು.
ಆದರೆ,ಈ.ಡಿ.ಗೆ ಸಮನ್ಸ್ ಹೊರಡಿಸುವ,ದಾಳಿಗಳನ್ನು ನಡೆಸುವ ಮತ್ತು ಬಂಧಿಸಲು ಅನಿಯಂತ್ರಿತ ಸ್ವಾತಂತ್ರವನ್ನು ನೀಡಿರುವ ಪಿಎಂಎಲ್ಎ ಕಾಯ್ದೆಗೆ ತಿದ್ದುಪಡಿಗಳನ್ನು ಎತ್ತಿ ಹಿಡಿದಿದ್ದ ತನ್ನ ತೀರ್ಪಿನಲ್ಲಿಯ ಎರಡು ಅಂಶಗಳನ್ನು ಪ್ರಾಥಮಿಕವಾಗಿ ಮರುಪರಿಶೀಲಿಸುವ ಅಗತ್ಯವಿದೆ ಎಂದು ಒಂದು ತಿಂಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.

ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್)ಗಳನ್ನು ಆರೋಪಿಗೆ ಒದಗಿಸದಿರುವುದು ಮತ್ತು ಆರೋಪ ಸಾಬೀತಾಗುವವರೆಗೆ ಆರೋಪಿಯು ಅಮಾಯಕ ಎಂಬ ಪರಿಕಲ್ಪನೆಯನ್ನು ಹಿಂದೆಗೆದುಕೊಂಡಿದ್ದು ಈ ಎರಡು ಅಂಶಗಳಾಗಿವೆ.

Similar News