ಮುಸ್ಲಿಮರನ್ನು EWSಗೆ ವರ್ಗಾಯಿಸುವ ಆದೇಶ ಪ್ರಕಟ: ಮೂರು ಮಹಾ ಸುಳ್ಳುಗಳ ಆಧಾರದಲ್ಲಿ ಸಮರ್ಥನೆ!

Update: 2023-03-30 08:00 GMT

ಮುಸ್ಲಿಮರನ್ನು EWS ವರ್ಗಕ್ಕೆ ಸೇರಿಸಿ 27-3-2023 ದಿನಾಂಕಿತ ಆದೇಶ ಇಂದು ಲಭ್ಯವಾಗಿದೆ. ಅದರಲ್ಲೂ ಮೂರು ಹಸಿ ಸುಳ್ಳುಗಳನ್ನು 'ಅಧಿಕೃತ'ವಾಗಿ ಹೇಳಿದೆ. ಆ ಸುಳ್ಳುಗಳ ಆಧಾರದಲ್ಲೇ ಸರಕಾರ ಆದೇಶವನೂ ಮಾಡಿದೆ.

ಮೊದಲ ಸುಳ್ಳು: 

ಮುಸ್ಲಿಮರಿಗೆ 2-ಬಿ ಪ್ರವರ್ಗದಲ್ಲಿ ಹಿಂದುಳಿದ ವರ್ಗವಾಗಿ ಮೀಸಲಾತಿಯನ್ನು ಕಲ್ಪಿಸಿದಾಗ  ಯಾವುದೇ ಅಧ್ಯಯನ, ಅಥವಾ ಶಿಫಾರಸುಗಳು ಆಗಿರಲಿಲ್ಲ.

  Whereas at the time 2B category was created and the members of Muslim Community were included/ classified as Backward Classes for the purpose of resetvation, there was neither any recommendation by anybody, nor was there any empirical data nor any material for granting them the said status. 

 ಆದರೆ 1994ರಲ್ಲಿ ಈ ಪ್ರವರ್ಗ ಸೃಷ್ಟಿಯಾದದ್ದೇ ನ್ಯಾ.ಚಿನ್ನಪ್ಪರೆಡ್ಡಿ ನೇತೃತ್ವದ ಮೂರನೇ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಮೇರೆಗೆ. ಅದರ ಹಿಂದಿನ ವೆಂಕಟಸ್ವಾಮಿ ಆಯೋಗ ಕೂಡ ವಿಸ್ತೃತವಾದ ಕ್ಷೇತ್ರ ಅಧ್ಯಯನ ಮಾಡಿ ಹಲವಾರು ಹಿಂದುಳಿದ ಜಾತಿಗಳ ಜೊತೆ ಮುಸ್ಲಿಮರನ್ನು ಹಿಂದುಳಿದ ವರ್ಗದಲ್ಲಿ ಉಳಿಸಿಕೊಳ್ಳಲು ಶಿಫಾರಸು ಮಾಡಿತ್ತು. ಹೀಗಾಗಿ ಮುಸ್ಲಿಮರನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಲು ಮತ್ತು 2-ಬಿ ಪ್ರವರ್ಗ ಸೃಷ್ಟಿಸಲು ಯಾವುದೇ ಶಿಫಾರಸು ಅಥವಾ ಅಧ್ಯಯನ ಇರಲಿಲ್ಲ ಎಂಬುದು ಹಸಿ ಸುಳ್ಳು. ಅಧಿಕೃತ ಸರಕಾರಿ ಸುಳ್ಳು.

ಎರಡನೇ ಸುಳ್ಳು : 

ಈಗಾಗಲೇ ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಳ್ಳಲು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ಮುಸ್ಲಿಮರಿಗೆ 2-ಬಿ ಮೀಸಲಾತಿ ನಿರಾಕರಿಸಲು ಕಾರಣವನ್ನಾಗಿ ಮುಂದಿಡಲಾಗಿದೆ.

  Whereas the members of the Minority community have adequate protection under the Constitution for establishment and admission of Minority Institution/ Students. 

ಆದರೆ, ಸಂವಿಧಾನದಲ್ಲಿ ನೀಡಿರುವ ಅವಕಾಶಕ್ಕೂ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ವಾಸ್ತವಿಕ ಆಧಾರದಲ್ಲಿ ಮೀಸಲಾತಿ ಕಲ್ಪಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಈ ಅವಕಾಶವಿದ್ದರೂ ಒಂದು ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವುದು ವಾಸ್ತವವಾದರೆ ಮೀಸಲಾತಿಯನ್ನು ನಿರಾಕರಿಸಬಹುದು ಎಂಬುದು ಬೊಮ್ಮಾಯಿ ಸರಕಾರದ ತರ್ಕವೇ ವಿನಾ ಸಾಂವಿಧಾನಿಕ ತರ್ಕವಲ್ಲ.

ಹಾಗೆಯೇ, ಇತರ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್, ಬೌದ್ಧ ಮತ್ತು ಜೈನ ಸಮುದಾಯಗಳಿಗೂ ಇದೇ ಅವಕಾಶವನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಆದರೆ ಬೊಮ್ಮಾಯಿ ಸರಕಾರ ಇದೆ ತರ್ಕವನ್ನು ಬಳಸಿ ಹಿಂದುಳಿದ ವರ್ಗಗಳ ಇತರ ಪ್ರವರ್ಗಗಳಿಂದ ಈ ಮುಸ್ಲಿಮೇತರ ಸಮುದಾಯಗಳನ್ನು EWS ಪ್ರವರ್ಗಕ್ಕೆ ಏಕೆ ವರ್ಗಾಯಿಸಿಲ್ಲ ?

ಅಷ್ಟೇ ಮುಖ್ಯವಾದ ಮತ್ತೊಂದು ವಿಷಯ ಸಾರ್ವಜನಿಕ ಪ್ರಾತಿನಿಧ್ಯದ್ದು. ಶೈಕ್ಷಣಿಕ ವಿಷಯವಲ್ಲದೆ 16 (4)ರಡಿಯಲ್ಲಿ ಸಾರ್ವಜನಿಕ ಸೇವೆಗಳಲ್ಲಿ ಮೀಸಲಾತಿಯೂ ಹಿಂದುಳಿದ ವರ್ಗಗಳ ಮೀಸಲಾತಿಯ ಪರಿಧಿಗೆ ಬರುತ್ತದೆ. ಆಗ ಆಯಾ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸೇವೆಗಳಲ್ಲಿ ಸರಾಸರಿ ಪ್ರಾತಿನಿಧ್ಯವಿದೆಯೇ ಎಂಬುದು 16 (4) ರಡಿ ಮೀಸಲಾತಿ ಪಡೆಯಲು ಪ್ರಮುಖ ಮಾನದಂಡ.

ಚಿನ್ನಪ್ಪರೆಡ್ಡಿ ಆಯೋಗದಿಂದ ಮೊದಲುಗೊಂಡು ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳು ಮುಸ್ಲಿಮರ ಸಾರ್ವಜನಿಕ ಪ್ರಾತಿನಿಧ್ಯ ಕಡಿಮೆ ಎಂದೇ ಅಂಕಿ ಅಂಶಗಳನ್ನಿಟ್ಟು ಸಾಬೀತು ಮಾಡಿ ಇತರ ಹಿಂದುಳಿದ ವರ್ಗಗಳ ಭಾಗವಾಗಿ 16(4)ರಡಿಯಲ್ಲೂ ಮೀಸಲಾತಿ  ಶಿಫಾರಸು ಮಾಡಿದ್ದವು.

ಮೂರನೇ ಸುಳ್ಳು:

ಆಂಧ್ರ ಪ್ರದೇಶದ ಮುಸ್ಲಿಮ್ ಮೀಸಲಾತಿ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ಪೀಠದ ಆದೇಶದ ವಿರುದ್ಧದ ಮೇಲ್ಮನವಿಯು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇದೆ ಎಂದು ಮಾತ್ರ ಬೊಮ್ಮಾಯಿಯವರ ಆದೇಶ ಹೇಳುತ್ತದೆ

Against the said order of the Hon'ble Andhra Pradesh High Court, Civil Appeal No. 7513/2005 is pending before the Hon'ble Supreme Court of India.

ಆದರೆ ಬೊಮ್ಮಾಯಿ ಸರಕಾರ ಮುಚ್ಚಿಟ್ಟಿರುವ ಸತ್ಯವೇನೆಂದರೆ, ಆಂಧ್ರ ಹೈಕೋರ್ಟಿನ ಆದೇಶಕ್ಕೆ 2010ರ ಆಗಸ್ಟ್ ನಲ್ಲೇ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ತಡೆಯಾಜ್ಞೆ ನೀಡಿರುವುದಲ್ಲದೆ ಮೀಸಲಾತಿ ಆದೇಶವನ್ನು ಅಂತಿಮ ತೀರ್ಮಾನ ಬರುವವರೆಗೆ ಚಾಲ್ತಿಯಲ್ಲಿಟ್ಟಿದೆ. ಆಸಕ್ತರು ಆ ತಡೆಯಾಜ್ಞೆ ತೀರ್ಮಾನವನ್ನು ಈ ಕೆಳಗಿನ ವೆಬ್ ವಿಳಾಸದಲ್ಲಿ ಓದಬಹುದು.

https://main.sci.gov.in/jonew/bosir/orderpdfold/1080534.pdf

ಹೀಗೆ ಬೊಮ್ಮಾಯಿ ಸರಕಾರ ಮುಸ್ಲಿಮ್ ಮೀಸಲಾತಿಯ ಬಗ್ಗೆ ತನ್ನ ಕುತಂತ್ರವನ್ನು ಸುಳ್ಳುಗಳನ್ನು ಮುಂದುವರಿಸುತ್ತಿದೆ. ಸುಳ್ಳುಗಳ ಆಧಾರದಲ್ಲಿ ಅಧಿಕೃತ ಆದೇಶವನ್ನು ಮಾಡಿ ಮುಸ್ಲಿಮರಿಗೆ ಅನ್ಯಾಯ ಮಾಡಿರುವುದನ್ನು ಮುಸ್ಲಿಮರ ಜೊತೆಗೆ ಲಿಂಗಾಯತರೂ,  ಒಕ್ಕಲಿಗರೂ  ಹಾಗೂ ಎಲ್ಲಾ ಮೀಸಲಾತಿ ಫಲಾನುಭವಿಗಳು ಸೇರಿಕೊಂಡು ಒಟ್ಟಾಗಿಯೇ ನ್ಯಾಯಾಂಗದ ಕಣದಲ್ಲೂ, ರಾಜಕೀಯ ರಂಗದಲ್ಲೂ ವಿರೋಧಿಸಬೇಕು... ಪಾಠ ಕಲಿಸಲೇಬೇಕು. 

Similar News