ವಿಜ್ಞಾನದ ಮೂಲ ವೇದಗಳಾದರೂ ಪಾಶ್ಚಿಮಾತ್ಯ ಆವಿಷ್ಕಾರಗಳೆಂದು ಮರುಪ್ಯಾಕೇಜ್‌ ಮಾಡಲಾಗಿದೆ: ಇಸ್ರೋ ಅಧ್ಯಕ್ಷ

Update: 2023-05-25 17:31 GMT

ಭೋಪಾಲ್: ವಿಜ್ಞಾನದ ಹಲವು ತತ್ವಗಳು ಹಾಗೂ ವಿಷಯಗಳ ಮೂಲ ವೇದಗಳಾಗಿದ್ದರೂ ಅವುಗಳನ್ನು ಪಾಶ್ಚಿಮಾತ್ಯ ಅನ್ವೇಷಣೆಗಳೆಂದು ಮರುಪ್ಯಾಕೇಜ್‌ ಮಾಡಲಾಗಿದೆ, ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್ ಹೇಳಿದ್ದಾರೆ.

ಮಧ್ಯ ಪ್ರದೇಶದ ಉಜ್ಜಯನಿಯಲ್ಲಿ ಮಹರ್ಷಿ ಪಣಿನಿ ಸಂಸ್ಕೃತ್‌ ಮತ್ತು ವೇದ ವಿವಿಯ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

“ಆಲ್ಜಿಬ್ರಾ, ಸ್ಕ್ವೇರ್‌ ರೂಟ್ಸ್‌, ಆರ್ಕಿಟೆಕ್ಚರ್‌, ಮೆಟಲರ್ಜಿ, ವಾಯುಯಾನದ ವಿಚಾರಗಳೂ ವೇದಗಳಲ್ಲಿವೆ ಆದರೆ ಇವುಗಳೆಲ್ಲವೂ ಯುರೋಪ್‌ ಮತ್ತು ಅರಬ್‌ ದೇಶಗಳ ಮೂಲಕ ಸಾಗಿ ನಂತರ ಪಾಶ್ಚಿಮಾತ್ಯ ಜಗತ್ತಿನ ವಿಜ್ಞಾನಿಗಳ ಅನ್ವೇಷಣೆಗಳೆಂದು ತಿಳಿಯಲಾಯಿತು,” ಎಂದು ಸೋಮನಾಥ್‌ ಹೇಳಿದ್ದಾರೆ.

“ಇದಕ್ಕೆ ಕಾರಣ, ಆ ಕಾಲದ ಭಾರತೀಯ ವಿಜ್ಞಾನಿಗಳು ಸೂಕ್ತ ಲಿಪಿಯಿಲ್ಲದ ಸಂಸ್ಕೃತ ಭಾಷೆಯನ್ನು ಬಳಸುತ್ತಿದ್ದುದು. ಅವರು ಹೇಳಿದ್ದನ್ನು ಕೇಳಿ ತಿಳಿಯಲಾಗುತ್ತಿತ್ತು., ನಂತರವಷ್ಟೇ ಜನರು ಸಂಸ್ಕೃತಕ್ಕಾಗಿ ದೇವನಾಗರಿ ಲಿಪಿ ಬಳಸಲು ಆರಂಭಿಸಿದ್ದರು,” ಎಂದು ಸೋಮನಾಥ್‌ ಹೇಳಿದರು.

“ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಿಗೆ ಸಂಸ್ಕೃತವೆಂದರೆ ಇಷ್ಟ. ಅದು ಕಂಪ್ಯೂಟರ್‌ ಭಾಷೆಗೆ ಹಾಗೂ ಕೃತಕ ಬುದ್ಧಿಮತ್ತೆ ಕಲಿಯುವವರಿಗೆ ಸೂಕ್ತ. ಕಂಪ್ಯುಟೇಶನ್‌ಗೆ ಸಂಸ್ಕೃತ ಹೇಗೆ ಬಳಸಬಹುದೆಂಬ ಕುರಿತು ಬಹಳಷ್ಟು ಸಂಶೋಧನೆ ನಡೆಸಲಾಗುತ್ತಿದೆ,” ಎಂದು ಅವರು ಹೇಳಿದರು.

ಸಂಸ್ಕೃತದಲ್ಲಿ ವಿಜ್ಞಾನಿಗಳ ಕೊಡುಗೆಯನು ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಪಯಣದಿಂದ ತಿಳಿದುಕೊಳ್ಳಬಹುದು. ಖಗೋಳ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಏರೋನಾಟಿಕಲ್‌ ವಿಜ್ಞಾನದ ಆವಿಷ್ಕಾರಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿತ್ತು. ಆದರೆ ಅವುಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ ಎಂದು ಹೇಳಿದ ಅವರು ಖಗೋಳವಿಜ್ಞಾನದ ಕೃತಿಯಾದ ಸೂರ್ಯ ಸಿದ್ಧಾಂತದ ಉದಾಹರಣೆಯನ್ನು ಅವರು ನೀಡಿದರು.

ನಭೋಮಂಡಲದ ಹಲವು ವಿಚಾರಗಳ ಬಗ್ಗೆ ಬರೆಯಲಾಗಿರುವ ಈ ಸಂಸ್ಕೃತ ಪುಸ್ತಕ ರಾಕೆಟ್‌ ವಿಜ್ಞಾನಿಯಾದ ನನ್ನನ್ನು ಆಕರ್ಷಿಸಿದೆ ಎಂದು ಅವರು ಹೇಳಿದರು.

Similar News