ಕರ್ನಾಟಕದಲ್ಲಿ ಅತ್ಯುತ್ತಮ ಸಮಾಜಶಾಸ್ತ್ರಜ್ಞರನ್ನು ಸೃಷ್ಟಿಸಲಿಲ್ಲ : ಡಾ.ಪುರುಷೋತ್ತಮ ಬಿಳಿಮಲೆ

Update: 2026-08-10 22:19 IST

ಬೆಂಗಳೂರು : ಕರ್ನಾಟಕದಲ್ಲಿ ಅತ್ಯುತ್ತಮವಾದ ಸಮಾಜಶಾಸ್ತ್ರಜ್ಞರನ್ನು ನಾವು ಅನೇಖ ಕಾರಣಾಂತರಗಳಿಂದ ಸೃಷ್ಟಿ ಮಾಡಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ನಯನ ಸಭಾಂಗಣದಲ್ಲಿ ಕೀ.ರಂ. ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಎಂ.ನಾಗರಾಜು ಅವರ ‘ನೆಲದ ನುಡಿಕಾರ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡದ ಈ ಸಮಸ್ಯೆ ಸ್ಥೂಲವಾಗಿ ಭಾರತದ ಸಮಸ್ಯೆ ಕೂಡ ಹೌದು. ಅಖಿಲ ಭಾರತ ಮಟ್ಟದಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸ್ ರಿಸರ್ಚ್‍ನ ನಿರ್ದೇಶಕರಾಗಿ ಬಹಳ ವರ್ಷ ಕೆಲಸ ಮಾಡಿದ ಆಂಡ್ರೆ ಬೆಟೆಲ್ಲೆ, ಎಂ.ಎನ್.ಶ್ರೀನಿವಾಸ್ ಆದಮೇಲೆ ಭಾರತೀಯ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ ಇನ್ನೊಬ್ಬ ಬಹಳ ದೊಡ್ಡ ಸಮಾಜಶಾಸ್ತ್ರಜ್ಞರು ಸೃಷ್ಟಿಯಾಗಲಿಲ್ಲ ಎಂದು ಅವರು ತಿಳಿಸಿದರು.

ಮದುವೆಯ ವಿಚಾರಗಳು, ಸಾವಿನ ವಿಚಾರಗಳು, ಸಾವಿನ ಸಂದರ್ಭದಲ್ಲಿ ನಾವು ಮಾಡುವ ಊಟದ ವಿಚಾರಗಳು, ಶ್ರಾದ್ಧದ ವಿಚಾರಗಳು ಇತ್ಯಾದಿಗಳನ್ನು ಸಮಾಜಶಾಸ್ತ್ರೀಯವಾಗಿ ವಿವರಿಸಿದ ನನಗೆ ವೈಯಕ್ತಿಕವಾಗಿ ಇಷ್ಟವಾದ ಸಮಾಜಶಾಸ್ತ್ರಜ್ಞೆ ವೀಣಾ ದಾಸ್ ಅವರು. ಇತ್ತೀಚೆಗೆ ನಿವೃತ್ತರಾದ ಸಿ.ಜಿ.ಲಕ್ಷ್ಮೀಪತಿ ಅವರು ಬಹಳ ಒಳ್ಳೆಯ ಸಮಾಜಶಾಸ್ತ್ರಜ್ಞ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿರು.

ಕರ್ನಾಟಕದ ಎಲ್ಲ ವಿಶ್ವ ವಿದ್ಯಾನಿಲಯಗಳಲ್ಲೂ ಸಮಾಜಶಾಸ್ತ್ರ ವಿಭಾಗ ಇವೆ. ಪ್ರಾಧ್ಯಾಪಕರಿದ್ದಾರೆ. ಸಹಾಯಕ ಪ್ರಾಧ್ಯಾಪಕರಿದ್ದಾರೆ. ಸಮಾಜಶಾಸ್ತ್ರ ಓದುಗರಿದ್ದಾರೆ. ಆದರೆ ನಮಗೆ ಕರ್ನಾಟಕದ ಮಾದರಿಯನ್ನು ಇಟ್ಟುಕೊಂಡು ಅಥವಾ ಕರ್ನಾಟಕದ ಜನಜೀವನವನ್ನು ಇಟ್ಟುಕೊಂಡು ಸಮಾಜಶಾಸ್ತ್ರೀಯವಾಗಿ ವಿಮರ್ಶಿಸುವ ಅತ್ಯುತ್ತಮವಾದ ಸಮಾಜಶಾಸ್ತ್ರಜ್ಞರು ದೊಡ್ಡ ಸಂಖ್ಯೆಯಲ್ಲಿ ಇಲ್ಲ ಎಂಬುದು ಒಂದು ನೂನ್ಯತೆ ಎಂದರು.

ಜಾನಪದವನ್ನು ಆಧರಿಸಿ ಭಾರತೀಯ ಸಮಾಜವನ್ನು ವಿಶ್ಲೇಷಣೆ ಮಾಡಲು ಹೊರಟಂತಹ ಏಕೈಕ ಸಮಾಜಶಾಸ್ತ್ರಜ್ಞ ಎಂದರೆ ಹೀ.ಚಿ.ಬೋರಲಿಂಗಯ್ಯ ಅವರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿ ಹೀ.ಚಿ.ಬೋರಲಿಂಗಯ್ಯ, ವಿಮರ್ಶಕ ಬಸವರಾಜ ಕಲ್ಗುಡಿ, ಎನ್.ಆರ್.ಚಂದ್ರೇಗೌಡ, ಡಾ. ನಾಗರಾಜು ಎಂ., ಡಾ.ಮನಮೋಹನ್‍ಸಿಂಗ್ ಬೆಂಗಳೂರು ನಗರ ವಿವಿಯ ಕುಲಪತಿ ಪ್ರೊ.ಬಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

‘ಇಡೀ ಭಾರತೀಯ ಭಾಷೆಗಳಲ್ಲಿ ಕನ್ನಡದಷ್ಟು ಚಂದ ಪ್ರಕಟವಾಗುವ ಪುಸ್ತಕಗಳು ಭಾರತದ ಬೇರೆ ಯಾವ ಭಾಷೆಯಲ್ಲೂ ಇಲ್ಲ. ಇದು ಹೆಮ್ಮೆಯ ಸಂಗತಿ. ಕನ್ನಡ ಭಾಷೆ ಅಭಿವೃದ್ಧಿಯಾಗಬೇಕು. ಕನ್ನಡಕ್ಕೆ ಹೋರಾಟ ಮಾಡಿದವರು, ಕನ್ನಡ ಬರೆದವರು, ಕನ್ನಡಕ್ಕೋಸ್ಕರ ಕಟ್ಟಡ ಕಟ್ಟಿದವರು ಇವರೆಲ್ಲರೂ ಕನ್ನಡವನ್ನು ಗೆಲ್ಲಿಸಿದ್ದಾರೆ. ಅದು ಕೇವಲ ಸಾಹಿತಿಗಳು ಮಾಡಿದ್ದು ಎಂಬ ಭಾವನೆಯನ್ನು ನಾವು ಇಟ್ಟುಕೊಂಡರೆ ತಪ್ಪಾಗುತ್ತದೆ’

-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News