ಅಕ್ರಮ ಎಲ್‌ಇಡಿ, ವಾಣಿಜ್ಯ ಜಾಹೀರಾತು ಫಲಕಗಳ ಸಕ್ರಮಗೊಳಿಸುವಿಕೆ ನ್ಯಾಯಾಲಯದ ತೀರ್ಪಿಗೆ ಒಳಪಡಲಿದೆ : ಹೈಕೋರ್ಟ್

Update: 2026-08-10 22:10 IST

ಬೆಂಗಳೂರು : ನಗರದಲ್ಲಿರುವ ಅಕ್ರಮ ಎಲ್‌ಇಡಿ ಹಾಗೂ ವಾಣಿಜ್ಯ ಜಾಹೀರಾತು ಫಲಕಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನಿರ್ದೇಶಿಸಿರುವ ಹೈಕೋರ್ಟ್, ಇಂತಹ ಯಾವುದೇ ಜಾಹೀರಾತು ಫಲಕಗಳ ಸಕ್ರಮಗೊಳಿಸುವಿಕೆಯು ಅವುಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಗ್ರೇಟರ್‌ ಬೆಂಗಳೂರು ಪ್ರದೇಶಗಳಲ್ಲಿ (ಜಾಹೀರಾತು) ನಿಯಮ 2025ರ ನಿಯಮ 8(7)(6)ರ ಹಾಗೂ ಈ ಸಂಬಂಧ 2026ರ ಫೆಬ್ರವರಿ 4ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ನಿವೃತ್ತ ನೌಕರ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ. ಲಕ್ಷ್ಮಣ್ ಸಲ್ಲಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಎಸ್. ಹೇಮಲತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸುವ ಸ್ವಯಂ-ಎಲ್‌ಇಡಿ ಫಲಕಗಳನ್ನು ಶಾಲಾ ಆವರಣಗಳು ಸೇರಿ ನಗರದಾದ್ಯಂತ ಅಕ್ರಮವಾಗಿ ಅಳವಡಿಸಲಾಗಿದ್ದು, ಅವುಗಳ ವಿರುದ್ಧ ಜಿಬಿಎ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಜಿಬಿಎ ಪರ ವಕೀಲರು, ಈ ವಿಷಯದಲ್ಲಿ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು. ಅದಕ್ಕಾಗಿ ಒಂದು ವಾರ ಕಾಲಾವಕಾಶ ಕೋರಿತಲ್ಲದೆ, ಹೊಸ ಜಾಹೀರಾತು ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿ‌ದ ನ್ಯಾಯಪೀಠ, ಅಕ್ರಮ ಜಾಹೀರಾತು ಫಲಕಗಳ ವಿಚಾರದಲ್ಲಿ 2026ರ ಜೂನ್ 18ರಂದು ಹೊರಡಿಸಲಾಗಿರುವ ಆದೇಶದ ಅನುಸಾರ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಜಿಬಿಎ ಪರ ವಕೀಲರಿಗೆ ನಿರ್ದೇಶಿಸಿತು. ಜತೆಗೆ, ಈವರೆಗೆ ಯಾವುದೇ ಅಕ್ರಮ ಜಾಹೀರಾತು ಫಲಕಗಳನ್ನು ಸಕ್ರಮಗೊಳಿಸಲಾಗಿದೆಯೇ ಎಂಬುದನ್ನು ವರದಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಅಂತಹ ಯಾವುದೇ ಸಕ್ರಮಗೊಳಿಸುವಿಕೆಯು ಹಾಲಿ ಅರ್ಜಿಯಲ್ಲಿ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು ಅಕ್ಟೋಬರ್ 13 ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News