×
Ad

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ.ಹೂಡಿಕೆ : ಡಿ.ಕೆ.ಶಿವಕುಮಾರ್

Update: 2026-01-05 00:31 IST

ಬೆಂಗಳೂರು : ಬೆಂಗಳೂರು ನಗರದ ಜನಸಂಖ್ಯೆ ಮುಂದಿನ ಇಪ್ಪತ್ತರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲಸೌಕರ್ಯ ಕೊರತೆ ನಿವಾರಿಸಲು 1.5ಲಕ್ಷ ಕೋಟಿ ರೂ.ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಮಹಾವೀರ್ ಜೈನ್ ಶಿಕ್ಷಣ ಸಂಘದ ಬಿಬಿಯುಎಲ್ ಜೈನ ವಿದ್ಯಾಲಯ 40 ವರ್ಷ ಪೂರೈಸಿದ ಮತ್ತು ಸಿಬಿ ಭಂಡಾರಿ ಜೈನ್ ಕಾಲೇಜಿನ 25 ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಮೂಲಸೌಕರ್ಯದ ಸ್ವರೂಪವನ್ನು ಬದಲಿಸಬೇಕಿದೆ ಎಂದರು.

ಇಲ್ಲಿರುವ ಎಲ್ಲರಿಗೂ ಸಂಚರಿಸಲು ಸ್ವಂತ ವಾಹನಗಳು ಬೇಕು. ಯಾರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಓಡಾಡುವುದಿಲ್ಲ. 1.4ಕೋಟಿ ಜನಸಂಖ್ಯೆ ಇದ್ದರೆ 1.3ಕೋಟಿ ವಾಹನಗಳಿವೆ. ಹಾಗಾಗಿ ಸಂಚಾರಿ ಒತ್ತಡದ ಸಮಸ್ಯೆ ತೀವ್ರವಾಗಿದೆ. ನಗರದ ಜವಾಬ್ದಾರಿ ತೆಗೆದುಕೊಂಡ ನಂತರ ತಾವು ಸೌಕರ್ಯಕ್ಕೆ ಹೂಡಿಕೆಗೆ ಆದ್ಯತೆ ಕೊಡುತ್ತಿದ್ದೇನೆ. ಸಂಚಾರಿ ಒತ್ತಡ ಇದ್ದರೂ ಯಾರೂ ಬೆಂಗಳೂರು ಬಿಟ್ಟು ಹೋಗಲು ತಯಾರಿಲ್ಲ ಎಂದು ಅವರು ತಿಳಿಸಿದರು.

ಬೆಂಗಳೂರು ಅತ್ಯಂತ ಪರಮೋಚ್ಚ ನಗರ. ಇಲ್ಲಿ ಉತ್ತಮ ಸಂಸ್ಕೃತಿ ಇದ್ದು, ಗುಣಮಟ್ಟದ ಶಿಕ್ಷಣಕ್ಕೆ ವಿಫುಲ ಅವಕಾಶಗಳಿವೆ. ಇಲ್ಲಿ ಅತಿಹೆಚ್ಚಿನ ಮಾನವ ಸಂಪನ್ಮೂಲವಿದೆ. ಕ್ಯಾಲಿಪೋರ್ನಿಯಾದಲ್ಲಿ 35ಲಕ್ಷ ಇಂಜಿನಿಯರ್‍ಗಳಿದ್ದು, ಬೆಂಗಳೂರು ಒಂದೇ ನಗರದಲ್ಲಿ 25ಲಕ್ಷ ಇಂಜಿನಿಯರ್ ಗಳಿದ್ದಾರೆ. ಇದು ಬೆಂಗಳೂರಿನ ಶಕ್ತಿಯಾಗಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಆಗಮಿಸಿದ್ದಾಗ ವಿಶ್ವದ ನಾಯಕರು ಮೊದಲು ದಿಲ್ಲಿ ಬರುತ್ತಿದ್ದರು.

ತರುವಾಯ ಮುಂಬೈ, ಚೆನ್ನೈ, ಬಾಂಬೆ, ಹೈದ್ರಾಬಾದ್ ನತ್ತ ತೆರಳುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಇದೀಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ. ನಂತರ ಹೊಸದಿಲ್ಲಿಗೆ ತೆರಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಉದ್ಗರಿಸಿದ್ದರು. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ಎಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.

ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ಜೈನ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಬೇಕಾದಲ್ಲಿ ಸಾಮಾಜಿಕ ಮಾಧ್ಯಮದಿಂದ ದೂರ ಇದ್ದು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಜೈನ ಸಮುದಾಯ ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಲು ಪೋಷಕರು  ಆದ್ಯತೆ ನೀಡಬೇಕು. ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರ ಇಡಬೇಕು ಎಂದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಒಂದು ಕಾಲದಲ್ಲಿ ಲಕ್ಷ್ಮಿ ಪುತ್ರರಿಗೆ ಮನ್ನಣೆ ದೊರೆಯುತ್ತಿತ್ತು. ಹಣವಂತರು, ವ್ಯಾಪಾರಿಗಳಿಗೆ ಮಣೆ ಹಾಕುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗದಲ್ಲಿರುವವರಿಗೆ ಆದ್ಯತೆ ದೊರೆಯುತ್ತಿದೆ. ಶಿಕ್ಷಣಕ್ಕೆ ಪ್ರಧಾನ್ಯತೆ ದೊರೆಯುತ್ತಿರುವುದನ್ನು ಮನಗಂಡು ಉತ್ತಮ ಶಿಕ್ಷಣ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಸಂಘದ ಅಧ್ಯಕ್ಷ ಚಂಪಾಲಾಲ್ ಭಂಡಾರಿ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಹೇಮರಾಜ್, ಆಚರಣಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಪಿರ್ಗಲ್, ಕಾರ್ಯದರ್ಶಿ ಚಂಪಾಲಾಲ್, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಸದಸ್ಯರು ಸೇರಿದಂತೆ 2,000ಕ್ಕೂ ಹೆಚ್ಚು ಜನರು ಈ ಸಮಾರಂಭಕ್ಕೆ ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News