ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿಕೆಶಿ
''ಬೆಂಗಳೂರು ನಗರದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ''
Update: 2025-10-11 09:47 IST
ಬೆಂಗಳೂರು, ಅ.11: "ರಸ್ತೆ ಕಾಮಗಾರಿಗಳ ವೇಳೆ ವೆಟ್ ಮಿಕ್ಸಿಂಗ್ ವಿಧಾನ ಬಳಸಿಕೊಳ್ಳಲಾಗಿದೆ. ಕೆಲವೊಂದು ತುರ್ತು ಸಂದರ್ಭದಲ್ಲಿ ಮಳೆಯಲ್ಲೂ ಡಾಂಬರು ಹಾಕುವುದಕ್ಕೆ ಈ ವಿಧಾನ ಬಳಕೆ ಮಾಡಲಾಗುತ್ತದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರದ ನಿವಾಸದ ಬಳಿ ಶನಿವಾರ ಮುಂಜಾನೆ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಪ್ರತಿಕ್ರಿಯಿಸಿದರು.
ಮಾರತ್ ಹಳ್ಳಿ ಬಳಿ ಮಳೆಯಲ್ಲೇ ಡಾಂಬರು ಹಾಕುತ್ತಿದ್ದ ಬಗ್ಗೆ ಕೇಳಿದಾಗ, "ನಗರದಾದ್ಯಂತ ಕಳೆದ ರಾತ್ರಿಯೆಲ್ಲಾ ಜೋರಾಗಿ ಮಳೆ ಸುರಿದಿದೆ. ನಮ್ಮ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಎಲ್ಲಿಯೂ ಅವಘಡಗಳು ನಡೆದ ಸುದ್ದಿಗಳು ವರದಿಯಾಗಿಲ್ಲ. ಒಂದಷ್ಟು ಕಡೆ ಮಾತ್ರ ನೀರಿನ ಹರಿವಿಗೆ ಅಡಚಣೆ ಉಂಟಾಗಿದೆ" ಎಂದರು.
ಒಂದು ವಾರಗಳ ಹಿಂದೆ ಮುಚ್ಚಿದ್ದ ರಸ್ತೆಗುಂಡಿಗಳು ಮಳೆಗೆ ಮತ್ತೆ ಹಾಳಾಗಿರುವ ಬಗ್ಗೆ ಕೇಳಿದಾಗ, "ಮಳೆ ಬಂದಾಗ ಈ ರೀತಿ ತೊಂದರೆಯಾಗುತ್ತದೆ, ಸಮಸ್ಯೆ ಬಗೆಹರಿಸಲಾಗುವುದು" ಎಂದರು.