×
Ad

ಸೇನಾ ಸ್ಮಾರಕದಲ್ಲಿ 75 ಅಡಿ ಎತ್ತರದ ಏಕಶಿಲಾ ವೀರಗಲ್ಲು ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2025-07-26 20:48 IST

ಬೆಂಗಳೂರು: ಕಾರ್ಗಿಲ್ ವಿಜಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಸ್ಥಾಪಿಸಿರುವ 75 ಅಡಿ ಎತ್ತರದ ಏಕಶಿಲಾ ‘ವೀರಗಲ್ಲು’ ಸ್ತಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.

ಶನಿವಾರ ನಗರದ ಸೈನಿಕ ಮತ್ತು ಪುನರ್ವಸತಿ ಇಲಾಖೆ, ರಾಷ್ಟ್ರೀಯ ಸೈನಿಕ್ ಸ್ಮಾರಕ ಮ್ಯಾನೇಜ್‍ಮೆಂಟ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ದೇಶದ ಹೆಮ್ಮೆಯ ಸೈನಿಕರ ತ್ಯಾಗ-ಬಲಿದಾನದ ಸಂಕೇತವಾಗಿರುವ ಏಕಶಿಲಾ ‘ವೀರಗಲ್ಲು’ ಸ್ತಂಭವನ್ನು ಅನಾವರಣಗೊಳಿಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಇಡೀ ದೇಶದಲ್ಲಿ ಹುತಾತ್ಮ ಯೋಧರಿಗೆ ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ಮಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮತ್ತು ಗೌರವ ಸಲ್ಲಿಸಲು ನಿರ್ಮಾಣವಾಗಿರುವ 75 ಅಡಿ ಎತ್ತರ ಸುಮಾರು 400 ಟನ್ ತೂಕವುಳ್ಳ ಏಕಶಿಲ ‘ವೀರಗಲ್ಲು’ ಸ್ತಂಭ ಭಾರತೀಯ ಸೇನೆಯ ವೀರರಂತೆಯೇ ಅಚಲ, ಧೃಡ, ಅಮರ ಮತ್ತು ಎಲ್ಲ ನೈಸರ್ಗಿಕ ತಾಪಗಳನ್ನು ತಡೆದುಕೊಳ್ಳಬಲ್ಲಷ್ಟು ಶಕ್ತಿಶಾಲಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೇನಾಧಿಕಾರಿ ಎಂ.ಕೆ. ಚಂದ್ರಶೇಖರ್, ಏಕಶಿಲ ‘ವೀರಗಲ್ಲು’ ಸ್ತಂಭದ ಶಿಲ್ಪಿ ಅಶೋಕ್ ಗುಡಿಗಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ತುಷಾರ್ ಗಿರಿನಾಥ್ ಸೇರಿದಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News