Bengaluru | ಮೋಹನ್ ಭಾಗವತ್ ಹೇಳಿಕೆ ಬಗ್ಗೆ ತನಿಖೆಗೆ ಆಗ್ರಹಿಸಿ ಧರಣಿ
ಬೆಂಗಳೂರು: ಪಾಕಿಸ್ತಾನವನ್ನು ದೀರ್ಘಕಾಲ ದ್ವೇಷಿಸಬಾರದು ಎಂಬ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ರಾಜಕೀಯ ಲಾಭದ ಹೇಳಿಕೆಯನ್ನು ಖಂಡಿಸಿ, ಅವರ ಹೇಳಿಕೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇಂದು ಬೆಂಗಳೂರಿನಲ್ಲಿಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಧರಣಿ ನಡೆಯಿತು.
ಮೋಹನ್ ಭಾಗವತ್ 'ಪಾಕಿಸ್ತಾನ, ಚೀನಾ ನಮಗೆ ಶತ್ರು ರಾಷ್ಟ್ರವಲ್ಲ, ಪಾಕಿಸ್ತಾನವನ್ನು ದೀರ್ಘಕಾಲ ದ್ವೇಷಿಸಬಾರದು' ಎಂಬ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನವನ್ನು ವಿರೋಧಿಸಿ ರಾಜಕೀಯ ಲಾಭ ಪಡೆಯುವ ಆರೆಸ್ಸೆಸ್ ನವರು ಈಗ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಆಧಾರ ಸ್ತಂಭವೇ ಆರೆಸ್ಸೆಸ್. ಈ ಸಂಸ್ಥೆ ನೀಡುವ ಪ್ರತಿಯೊಂದು ಸೂಚನೆಯನ್ನು ಪಾಲಿಸುವುದೇ ಬಿಜೆಪಿ ಹಾಗೂ ಕೇಂದ್ರ ಸರಕಾರದ ಒಂದಂಶದ ಕಾರ್ಯಕ್ರಮ. ಕೇಂದ್ರ ಸರಕಾರ ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಈಗಾಗಲೇ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರವರ ರಾಜೀನಾಮೆ ಪಡೆದಿದೆ. ಈಗ ದೇಶದಲ್ಲಿ ಕೇಂದ್ರ ಸರಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಯುವಕರು ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆ ಅತ್ಯಂತ ಕುತೂಹಲಕಾರಿಯಾಗಿದೆ ಎಂದು ಧರಣಿನಿರತರು ಹೇಳಿದರು.
ಪಾಕಿಸ್ತಾನದ ಹೆಸರನ್ನ ದೇಶದಲ್ಲಿ ಯಾರಾದರೂ ಪ್ರಸ್ತಾಪಿಸಿದರೆ ಅವರು ದೇಶದ್ರೋಹಿಗಳು ಪಾಕಿಸ್ತಾನಕ್ಕೆ ಅವರನ್ನು ಕಳುಹಿಸಿ ಎನ್ನುವ ಬಿಜೆಪಿ ನಾಯಕರು, ಇಂದು ಆರೆಸ್ಸೆಸ್ ಮುಖ್ಯಸ್ಥರು ಪಾಕಿಸ್ತಾನದ ಮೇಲೆ ಪ್ರೀತಿ ತೋರಿದಾಗ ಅವರ ವಿರುದ್ಧ ಬಿಜೆಪಿ ನಾಯಕರು ಹಾಗೂ ಅಂಧ ಭಕ್ತರು ಏಕೆ ಧ್ವನಿ ಎತ್ತುತ್ತಿಲ್ಲ ಎಂಬುದು ಈಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೋಹನ್ ಭಾಗವತ್ ಹೇಳಿಕೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ತನಿಖೆ ನಡೆಸಬೇಕು, ಅವರು ಪಾಕಿಸ್ತಾನದೊಂದಿಗೆ ಸ್ನೇಹ ಬೆಳೆಸುವ ವಿಷಯವನ್ನು ಪ್ರಸ್ತಾಪಿಸಿರುವುದರಿಂದ ಅನೇಕ ರಾಜಕೀಯ ತಂತ್ರದ ಮಾಹಿತಿ ಅಡಗಿದೆ. ಅವರ ಹೇಳಿಕೆಯಲ್ಲಿ ಈ ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನ ಜನರ ಮುಂದೆ ಇಡಬೇಕೆಂದು ಧರಣಿನಿರತರು ಆಗ್ರಹಿಸಿದರು.
ಧರಣಿಯಲ್ಲಿ ಪ್ರಕಾಶ್ ಜಿ., ಹೇಮರಾಜು, ಆನಂದ್ ಕುಮಾರ್ ಎಂ.ಎಸ್.ಮುರಳಿ, ಉಮೇಶ್, ಓಬಳೇಶ್, ಪುಟ್ಟರಾಜು, ಕುಶಲ್, ಹರವೇಗೌಡ, ರಂಜಿತ್, ಮಾಧವ ಹನೂರು, ಶಾಹಿನ್ ಶರೀಫ್, ನವೀನ್, ಅಜಯ್, ಕಿಶೋರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.