‘ಬಿಡದಿ ಟೌನ್‍ಶಿಪ್ ಯೋಜನೆಗೆ ಭೂಮಿ ಕೊಡಲು ಸಿದ್ಧ’ | ರೆಡ್ ಝೋನ್‍ನಿಂದ ಮುಕ್ತಿ ನೀಡುವಂತೆ ಮುಖ್ಯಮಂತ್ರಿಗೆ ರೈತರ ಮನವಿ

Update: 2026-08-11 19:07 IST

ಬೆಂಗಳೂರು: ರಾಜ್ಯ ಸರಕಾರದ ಉದ್ದೇಶಿತ ಬಿಡದಿ ಟೌನ್‍ಶಿಪ್ ಯೋಜನೆಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೆವೆ. ಆದರೆ, ನಮಗೆ ರೆಡ್ ಝೋನ್‍ನಿಂದ ಮುಕ್ತಿ ಬೇಕು ಎಂದು ಬಿಡದಿ ಸುತ್ತಮುತ್ತಲಿನ ಪ್ರದೇಶದ ರೈತರ ನಿಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ ರೈತರ ನಿಯೋಗವು, ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು. ಯಾರದೋ ರಾಜಕೀಯ ಆಟಕ್ಕೆ ನಾವು ಬಲಿ ಆಗುತ್ತಿದ್ದೇವೆ. ನಾವು ಜಮೀನು ಕೊಡಲು ಸಿದ್ಧ. ತಕ್ಷಣವೇ ಪರಿಹಾರ ಕೊಡಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಲಿಲ್ಲ. ನೀವಾದರೂ ನಮ್ಮ ಕಷ್ಟ ಬಗೆಹರಿಸಿ ಎಂದು ಮನವಿ ಮಾಡಿದರು.

ಬೈರಮಂಗಲ ಗ್ರಾಮದ ಸುನೀಲ್ ಎಂಬುವವರು ಮಾತನಾಡಿ, ಕಳೆದ 20 ವರ್ಷಗಳಿಂದ ನಾವು ರೆಡ್ ಝೋನ್ ನಿಂದ ಸಂಕಷ್ಟ ಅನುಭವಿಸಿದ್ದೇವೆ. ಅಲ್ಲಿ ವೃಷಭಾವತಿ ಕೊಳಚೆ ನೀರಿನಿಂದ ವ್ಯವಸಾಯ ಕಷ್ಟವಾಗಿದೆ. ಅಲ್ಲಿ ಕೆಲವು ಭಾಗದಲ್ಲಿ ತೆಂಗಿನ ತೋಟ ಮೇಲುನೋಟಕ್ಕೆ ಹಸಿರಾಗಿ ಕಾಣಬಹುದು ಆದರೆ, ಇಳುವರಿ ಬರುತ್ತಿಲ್ಲ. ಕುಡಿಯುವ ಹಾಲು ಕೂಡ ಕಲುಷಿತಗೊಂಡಿದೆ ಎಂದು ಹೇಳಿದರು.

ರೆಡ್ ಝೋನ್ ಮಾಡಿರುವುದರಿಂದ ಆಸ್ಪತ್ರೆ, ಕಲ್ಯಾಣಮಂಟಪ ನಿರ್ಮಾಣ ಸಾಧ್ಯವಿಲ್ಲ. ನಮ್ಮ ಪಕ್ಕದ ಊರುಗಳಲ್ಲಿ ಬ್ಯಾಂಕ್ ನಲ್ಲಿ ಜಮೀನಿಗೆ 1 ಕೋಟಿ ರೂ.ವರೆಗೆ ಸಾಲ ಕೊಟ್ಟರೆ ನಮಗೆ 1 ಲಕ್ಷ ರೂಪಾಯಿ ಕೂಡ ಸಾಲ ಸಿಗುತ್ತಿಲ್ಲ. ನಮಗೆ ಮದುವೆ ಹಾಗೂ ಕಷ್ಟಕಾಲದಲ್ಲಿ ನಮ್ಮ ಜಮೀನು ಮಾರಲು ಆಗುತ್ತಿಲ್ಲ. ಇವೆಲ್ಲವೂ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೊಡುಗೆ. ಹೀಗಾಗಿ ನಮಗೆ ಈ ಸಮಸ್ಯೆಗಳಿಂದ ಮುಕ್ತಿ ದೊರಕಿಸಬೇಕು ಎಂದು ಅವರು ಮನವಿ ಮಾಡಿದರು.

ನಮ್ಮಲ್ಲಿ ಕೊಳಚೆ ನೀರಿನ ವಾಸನೆ, ಸೊಳ್ಳೆಗಳ ಕಾಟದಿಂದ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ. ನಮಗೆ ಹಣ ಬೇಡ, ನಾವು ಈ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಪಡೆದು, ಯೋಜನೆಯ ಪಾಲುದಾರರಾಗುತ್ತೇವೆ ಎಂದು ಸುನೀಲ್ ತಿಳಿಸಿದರು.

ನಾವು ಜೆಡಿಎಸ್ ಕಾರ್ಯಕರ್ತರೇ, ಅಭಿವೃದ್ಧಿ ಮೊದಲು, ಪಕ್ಷ ಆಮೇಲೆ. ನಮಗೆ ಟೌನ್ ಶಿಪ್ ಯೋಜನೆ ಬೇಕು. ಅಲ್ಲಿ ಹೋರಾಟ ಮಾಡುತ್ತಿರುವವರು ಬೇರೆ ಕ್ಷೇತ್ರಗಳಿಂದ ಕರೆ ತಂದಿರುವ ಪಕ್ಷದ ಕಾರ್ಯಕರ್ತರು. ನಮ್ಮಲ್ಲಿ ಬಹುತೇಕ ಜನರು ಟೌನ್‍ಶಿಪ್ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ ಎಂದು ಅವರು ವಿವರಿಸಿದರು.

ಹಿರಿಯ ನಾಗರಿಕ ಯಾಲಕ್ಕಿ ಗೌಡ ಎಂಬವರು ಮಾತನಾಡಿ, ನನಗೆ 80 ವರ್ಷ, ಕಳೆದ 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದೆ. ಕಳೆದ 20 ವರ್ಷಗಳಿಂದ ನಮ್ಮ ಭಾಗವನ್ನು ರೆಡ್ ಝೋನ್ ನಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದೆವು. ಆದರೆ ಕುಮಾರಸ್ವಾಮಿ ಮನಸ್ಸು ಮಾಡಲಿಲ್ಲ. ಅವರ ಉದ್ದೇಶ ನಮಗೆ ತಿಳಿಯುತ್ತಿಲ್ಲ. ನಮ್ಮಲ್ಲಿ ಕೇವಲ 1 ಲಕ್ಷ ರೂ.ಗಳಿಗೆ ಜಮೀನು ಕಳೆದುಕೊಂಡವರನ್ನು ನೋಡಿದ್ದೇನೆ. ಎಲ್ಲರ ಬದುಕು ಅದ್ವಾನ ಆಗೋಗಿದೆ ಎಂದು ಬೇಸರ ಹೊರಹಾಕಿದರು.

ಈಗ ಈ ಪುಣ್ಯಾತ್ಮ ಡಿ.ಕೆ.ಶಿವಕುಮಾರ್ ಅವರ ಸರಕಾರ ಎಲ್ಲವನ್ನೂ ಸರಿ ಮಾಡಲು ಮುಂದಾಗಿದೆ. ಈಗ ಇವರು ಇಲ್ಲದ ಕಾರಣ ಹುಡುಕಿ, ಕೆದಕಿ ತಕರಾರು ಮಾಡುತ್ತಿದ್ದಾರೆ. ಅವರು ಗೌಡರೇ, ಇವರೂ ಗೌಡರೇ, ನಾವು ಗೌಡರೇ ಆದರೆ ಕುಮಾರಣ್ಣನಿಗೆ ಎಲ್ಲರೂ ಚೆನ್ನಾಗಿರಬೇಕು ಎಂಬ ಆಸೆ ಇಲ್ಲ ಎಂದು ಅವರು ನುಡಿದರು.

ಯುವ ರೈತ ಹರೀಶ್ ರೆಡ್ಡಿ ಎಂಬವರು ಮಾತನಾಡಿ, ರೈತರ ಹಿತ ಕಾಪಾಡುವ ದೊಡ್ಡ ಮನಸ್ಸು ಕುಮಾರಸ್ವಾಮಿ ಅವರಿಗಿದ್ದಿದ್ದರೆ ರೆಡ್ ಝೋನ್ ಮಾಡುತ್ತಿರಲಿಲ್ಲ. ಅದನ್ನು ತೆಗೆದು ಬಿಡಿ ಎಂದು ನಾವೆಲ್ಲ ಅವರ ಮನೆಗೆ ಹೋಗಿ ಮನವಿ ಮಾಡಿದರೂ ನಮ್ಮ ಮಾತಿಗೆ ಕಿಮ್ಮತ್ತು ನೀಡಲಿಲ್ಲ ಎಂದು ಹೇಳಿದರು.

ಬಿಡಿದಿ ಟೌನ್ ಶಿಪ್ ನನ್ನ ಕನಸಿನ ಕೂಸು ಅಂತ ಅವರೇ ಹೇಳಿಕೊಂಡಿದ್ದಾರೆ. ಈಗ ನಮ್ಮ ಪಾಲಿಗೆ ಪಾಪದ ಕೂಸಾಗಿದೆ. ಬೆಂಗಳೂರು ಸುತ್ತಮುತ್ತಲಿನ ಇತರೆ ಎಲ್ಲ ಪ್ರದೇಶಗಳನ್ನು ಗಮನಿಸಿ. ಎಲ್ಲವೂ ಶರವೇಗದಲ್ಲಿ ಅಭಿವೃದ್ಧಿಗೊಂಡಿವೆ, ಗೊಳ್ಳುತ್ತಿವೆ. ಆದರೆ, ಬಿಡದಿ ಮಾತ್ರ ಹಿಂದೆ ಬಿದ್ದಿದೆ ಎಂದು ಅವರು ತಮ್ಮ ಸಂಕಷ್ಟವನ್ನು ಹೇಳಿಕೊಂಡರು.


‘ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಅಧಿಸೂಚನೆ ಪ್ರಕಟ’

ಬಿಡದಿಯ ನೂರಾರು ರೈತರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಅಂತಿಮ ಅಧಿಸೂಚನೆ ನೀಡಿ, ನಮಗೆ ಸಮಸ್ಯೆಗಳಿದ್ದು, ಜಮೀನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ನಾವು ಸ್ವಲ್ಪ ಹಣ ಪರಿಹಾರ ಹಾಗೂ ಸ್ವಲ್ಪ ಭೂ ಪರಿಹಾರವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ. ನಾನು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಬಾಕಿ ಇರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ. ಯಾರು ಸ್ವಇಚ್ಛೆಯಿಂದ ಜಮೀನು ನೀಡುತ್ತಾರೋ ಅವರಿಂದ ಪಡೆಯುತ್ತೇವೆ ಯಾರಿಗೂ ಬಲವಂತ ಮಾಡುವುದಿಲ್ಲ.

ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News