×
Ad

ಬೆಂಗಳೂರು: 9 ಕೆ.ಜಿ.ಗೂ ಅಧಿಕ ಚಿನ್ನ ಕಳ್ಳಸಾಗಣೆ: ಆರು ಮಂದಿ ಬಂಧನ

Update: 2024-02-07 21:44 IST

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲಾದ ಮೂರು ವಿಭಿನ್ನ ಪ್ರಕರಣಗಳಲ್ಲಿ 9 ಕೆ.ಜಿ.ಗೂ ಅಧಿಕ ಕಳ್ಳಸಾಗಣೆಯಾದ ಚಿನ್ನವನ್ನು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಈ ಪ್ರಕರಣಗಳ ಸಂಬಂಧ ಮಹಿಳೆ ಸೇರಿದಂತೆ ಆರು ಮಂದಿ ಭಾರತೀಯರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ಗೊತ್ತಾಗಿದೆ.

ಫೆಬ್ರವರಿ 1 ರಂದು ಶಾರ್ಜಾದಿಂದ ಹೊರಟಿದ್ದ ವಿಮಾನವನ್ನು ಶೋಧಿಸಿದಾಗ 3.75 ಕೆ.ಜಿ. ವಿದೇಶಿ ಮೂಲದ ಚಿನ್ನದ ಗಟ್ಟಿಯನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಸನಗಳ ಮೇಲಿನ ಲಗೇಜ್ ಕ್ಯಾಬಿನ್‍ನಲ್ಲಿ ಬ್ಯಾಗ್‍ನಲ್ಲಿ ಚಿನ್ನದ ಗಟ್ಟಿಯನ್ನು ಸಾಗಿಸಲಾಗುತಿತ್ತು ಎಂದು ತಿಳಿದು ಬಂದಿದೆ.

ಎರಡನೇ ಪ್ರಕರಣದಲ್ಲಿ, ಮಲೇಷ್ಯಾ ಏರ್‍ಲೈನ್ಸ್ ವಿಮಾನದಲ್ಲಿ ಕೌಲಾಲಂಪುರದಿಂದ ಬಂದ ಇಬ್ಬರು ಪ್ರಯಾಣಿಕರನ್ನು ತಡೆದ ಡಿಆರ್‌ಐ ಅಧಿಕಾರಿಗಳು ಅವರಿಂದ 1.55 ಕೋಟಿ ರೂ. ಮೌಲ್ಯದ 2,854 ಗ್ರಾಂ ತೂಕದ ಪೇಸ್ಟ್ ರೂಪದ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ತಮ್ಮ ಶೂ ಸಾಕ್ಸ್ ನಲ್ಲಿ ಚಿನ್ನ ಸಾಗಿಸುತ್ತಿದ್ದದ್ದು ಕಂಡುಬಂದಿದ್ದು, ಅವರಿಬ್ಬರನ್ನೂ ಬಂಧಿಸಲಾಗಿದೆ.

ಮೂರನೇ ಪ್ರಕರಣದಲ್ಲಿ, ಅದೇ ಮಲೇಷ್ಯಾ ಏರ್‍ಲೈನ್ಸ್ ವಿಮಾನದಲ್ಲಿ ಕೌಲಾಲಂಪುರದಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ತಡೆದಿದ್ದು, ಒಳ ಉಡುಪಿನಲ್ಲಿ ಸಾಗಿಸಲಾಗುತ್ತಿದ್ದ 1.42 ಕೋಟಿ ರೂ. ಮೌಲ್ಯದ 2,632 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣಗಳಲ್ಲದೆ, 73.7 ಲಕ್ಷ ರೂಪಾಯಿ ಮೌಲ್ಯದ 3,510 ಇ-ಸಿಗರೇಟ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News