×
Ad

ಮತದಾರರನ್ನೇ ಕದಿಯುತ್ತಿರುವ ಬಿಜೆಪಿ ಸರಕಾರ : ಡಾ.ಮೂಡ್ನಾಕೂಡು ಚಿನ್ನಸ್ವಾಮಿ

Update: 2026-06-28 21:11 IST

ಬೆಂಗಳೂರು : ಮೋದಿ ನೇತೃತ್ವದ ಕೇಂದ್ರ ಸರಕಾರ ಮತಗಳ್ಳತನ ಮಾಡಿ ಅಧಿಕಾರ ಹಿಡಿದಿದೆ ಎಂದು ರಾಹುಲ್ ಗಾಂಧಿ ದಾಖಲೆ ಹಿಡಿದುಕೊಂಡು ಆರೋಪಿಸುತ್ತಿದ್ದಾರೆ. ಮತಗಳ್ಳತನ ಆಯಿತು, ಈಗ ಎಸ್‍ಐಆರ್ ಮೂಲಕ ಮತದಾರರನ್ನೇ ಕದಿಯುವ ಕೆಲಸ ಆಗುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ಸಮುದಾಯ ಕರ್ನಾಟಕದ ವತಿಯಿಂದ ನಡೆದ ‘ಸಮಗ್ರ ಮತದಾರರ ಪರಿಷ್ಕರಣೆ-ಮುಂದೇನು..? ಎಂಬ ವಿಷಯ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ತಮ್ಮ ಮತಗಳನ್ನು ತಾವೇ ಸೃಷ್ಟಿಸಿಕೊಳ್ಳಲು ಹೊರಟಿವೆ. ಈಗ ಆರೆಸ್ಸೆಸ್ ಮತ್ತು ಬಿಜೆಪಿ ತಮಗೆ ಬೇಕಾದ ಕಾನೂನನ್ನು ಸೃಷ್ಟಿಸಿಕೊಳ್ಳುತ್ತಿವೆ. ಇದು ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿನ ದೊಡ್ಡ ದುರಂತ ಎಂದು ಖಂಡಿಸಿದರು.

ಎಸ್‍ಐಆರ್ ಪ್ರಕ್ರಿಯೆಯೊಂದು ಸಾಂಸ್ಕೃತಿಕ ಆಕ್ರಮಣವಾಗಿದೆ. ಹಿಂದಿನ 10 ವರ್ಷದಿಂದ ಯಾವುದೂ ಸಂವಿಧಾನ ಬದ್ಧವಾಗಿ, ಕಾನೂನು ಬದ್ಧವಾಗಿ ನಡೆಯುತ್ತಿಲ್ಲ. ಎಸ್‍ಐಆರ್‍ಗೆ ಚುನಾವಣಾ ಆಯೋಗ ಕೇಳಿರುವ 11 ದಾಖಲೆಗಳನ್ನು ಭಾರತದಂತಹ ದೇಶದಲ್ಲಿ ಜನರು ಹೇಗೆ ಸೃಷ್ಟಿಸಲು ಸಾಧ್ಯವಾಗುತ್ತದೆ? ಚುನಾವಣಾ ಆಯೋಗವು ಬಿಜೆಪಿ ಸರಕಾರದ ಕಪಿಮುಷ್ಟಿಯಲ್ಲಿದ್ದು, ಅದರ ತಾಳಕ್ಕೆ ತಕ್ಕಂತೆ ನರ್ತಿಸುತ್ತಿದೆ ಎಂದು ಮೂಡ್ನಾಕೂಡು ದೂರಿದರು.

ಜಾಲತಾಣಗಳಲ್ಲಿ ಪ್ರಧಾನಿ ಹಾಗೂ ಕೇಂದ್ರ ಸರಕಾರ ವೈಫಲ್ಯಗಳಿಗೆ ಸಂಬಂಧಿಸಿದ ಮಾಹಿತಿ/ವಿಡಿಯೋಗಳು ಹೆಚ್ಚು ವೀಕ್ಷಣೆಗಳನ್ನು ಪಡೆಯುವುದಿಲ್ಲ. ಕೇಂದ್ರ ಸರಕಾರ ಸುದ್ದಿ ಮಾಧ್ಯಮಗಳ ಜೊತೆಗೆ ಸಾಮಾಜಿಕ ಜಾಲತಾಣಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪ್ರಜಾಪ್ರಭುತ್ವವುಳ್ಳ ದೇಶದಲ್ಲಿ ಪ್ರತಿರೋಧವೇ ಇಲ್ಲದಂತಹ ಏಕಮೇವ ಪಕ್ಷ ಸ್ಥಾಪಿಸಲು ಬಿಜೆಪಿ ಮುಂದಾಗಿದೆ. ದೇಶದ ಯಾವುದೇ ಚುನಾವಣೆಯಾಗಲಿ, ಯಾವ ಮಾರ್ಗದಲ್ಲಾಗಲಿ ಅದನ್ನು ಗೆಲ್ಲುವುದೇ ಬಿಜೆಪಿ ಉದ್ದೇಶ. ಇಷ್ಟೆಲ್ಲವೂ ಕಣ್ಮುಂದೆ ಆಗುತ್ತಿರುವಾಗ ಈ ದೇಶದ ಸುಪ್ರೀಂ ಕೋರ್ಟ್ ಏನು ಮಾಡುತ್ತಿದೆ ಎಂದು ಮೂಡ್ನಾಕೂಡು ಪ್ರಶ್ನಿಸಿದರು.

ನಮ್ಮ ದೇಶದಲ್ಲಿ ಈಗ ಸುಳ್ಳುಗಳ ಸಾಮ್ರಾಜ್ಯ ನಡೆಯುತ್ತಿದೆ. ಅದನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ. ಇವರು ಶಿಕ್ಷಣ ವ್ಯವಸ್ಥೆಯಲ್ಲೂ ಲೂಟಿ ಹೊಡೆಯುತ್ತಾರೆ, ದೇವಸ್ಥಾನದ ಹುಂಡಿಯಲ್ಲೂ ಲೂಟಿ ಹೊಡೆಯುತ್ತಾರೆ. ಈಗ ಎಸ್‍ಐಆರ್ ತಂದ ಮತದಾರರನ್ನು ಲೂಟಿ ಮಾಡುತ್ತಾರೆ. ಎಸ್‍ಐಆರ್ ಎಂಬ ಭೂತದಿಂದ ನಮ್ಮೆಲ್ಲರ ಉಳಿವಿನ ಪ್ರಶ್ನೆ ಎದುರಾಗಿದೆ ಎಂದು ಮೂಡ್ನಾಕೂಡು ತಿಳಿಸಿದರು.

ಚಿಂತಕ ಶಿವಸುಂದರ್ ಮಾತನಾಡಿ, ಭಾರತದ ಗಣರಾಜ್ಯವನ್ನು ಒಂದೊಂದೇ ಇಟ್ಟಿಗೆ ತೆಗೆದು ಸಂಪೂರ್ಣ ನಿರ್ನಾಮ ಮಾಡುವುದರ ಬಹುದೊಡ್ಡ ದಾಳಿಯೇ ಎಸ್‍ಐಆರ್. ಭಾರತವನ್ನು ಹಿಂದೂಗಳ ರಾಷ್ಟ್ರ ಮಾಡುವುದು, ಅನ್ಯರು ಅಧೀನದಲ್ಲಿರುವುದು. ಜೊತೆಗೆ, ಭಾರತದಲ್ಲಿ ಮನುಸ್ಮೃತಿ ತರಬೇಕೆಂಬ ಅಜೇಂಡಾ ಸಾವರ್ಕರ್ ಸಂತತಿಯದ್ದು. ಇದು ಭಾರತದ ಮೇಲೆ ನಡೆಸುತ್ತಿರುವ ಸಮಗ್ರ ಯುದ್ಧದ ಭಾಗವಾಗಿದ್ದು, ಇದನ್ನು ಈ ದೇಶದ ಪ್ರತಿಪಕ್ಷಗಳು ಅರ್ಥೈಸಿಕೊಂಡಿವೆಯೇ? ಇದನ್ನು ಅಸಾಧಾರಣವಾಗಿ ಎದುರಿಸುವ ತಾಕತ್ತು ಅವರಿಗಿದೆಯೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಮುದಾಯ ಕರ್ನಾಟಕದ ಗೌರವಾಧ್ಯಕ್ಷ ಡಾ.ಎಚ್.ಜನಾರ್ದನ್, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ವಕೀಲ ವಿನಯ್ ಶ್ರೀನಿವಾಸ್, ಹೋರಾಟಗಾರ್ತಿ ಯು.ಟಿ.ಫರ್ಝಾನ, ಜಾಗೃತ ಕರ್ನಾಟಕದ ಡಾ.ಬಿ.ಸಿ.ಬಸವರಾಜು, ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ ಮಾತನಾಡಿದರು. ಈ ವೇಳೆ ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನಟ ದತ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

‘ಕೇಂದ್ರದ ಬಿಜೆಪಿ ಸರಕಾರ ದೇಶದ ದಲಿತ, ಹಿಂದುಳಿದ, ಅಲೆಮಾರಿ, ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಹಲವು ತಳ ಮಟ್ಟದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಎಸ್‍ಐಆರ್ ಮೂಲಕ ತಂದೊಡ್ಡುತ್ತಿರುವ ಯುದ್ಧದ ವಿರುದ್ಧ ಸಂಘರ್ಷ ಸಾರುವುದು ಅಷ್ಟು ಸುಲಭವೇನಲ್ಲ, ಇದರ ವಿರುದ್ಧ ಒಂದು ಪೀಳಿಗೆ ಕನಿಷ್ಠ 20, 30 ವರ್ಷಗಳವರೆಗೆ ನಿಜವಾದ ಸ್ವಾತಂತ್ರ್ಯ ಹೋರಾಟವನ್ನು ಮಾಡಿ ಈ ದೇಶವನ್ನು ಕಾಪಾಡಿಕೊಳ್ಳಬೇಕಾಗಿದೆ’

-ಶಿವಸುಂದರ್, ಚಿಂತಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News