×
Ad

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮನ್ನಣೆ ಸಿಗಲಿ : ಗೊ.ರು.ಚನ್ನಬಸಪ್ಪ

14ನೆ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ

Update: 2026-07-07 23:30 IST

ಬೆಂಗಳೂರು : ‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮತ್ತು ಅದರ ಅನುಯಾಯಿಗಳಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಲ್ಲಿ ಮನ್ನಣೆ ಸಿಗಬೇಕು’ ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಆಗ್ರಹಿಸಿದ್ದಾರೆ.

ಮಂಗಳವಾರ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 14ನೆ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ‘ಸಮ್ಮೇಳನಾಧ್ಯಕ್ಷತೆ’ ವಹಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯದ ಕುರಿತು ನಡೆದಿರುವಷ್ಟು ಸಂಶೋಧನೆ, ಪ್ರಕಟನೆ, ಚರ್ಚೆ-ಸಂವಾದ, ವಾದ-ವಿವಾದ, ಉಪನ್ಯಾಸಗಳು ಬೇರೆ ಯಾವ ಸಾಹಿತ್ಯ ಪ್ರಕಾರಕ್ಕೂ ನಡೆದಿಲ್ಲ. ಈ ಬೆಳವಣಿಗೆಯನ್ನು ಸಹಿಸಲಾಗದಂತಹ ‘ಸನಾತನ’ ಎನ್ನುವ ಕೆಲವು ಹಿತಾಸಕ್ತಿಗಳು, ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಾಗದೇ ಗುಪ್ತ ವಿನಾಶಿತ ಕೃತ್ಯಗಳಲ್ಲಿ ತೊಡಗಿರುವುದನ್ನು ನಾವು ಗಮನಿಸಬೇಕು ಎಂದು ಹೇಳಿದರು.

ವಚನಕಾರರು ಹಿಂದೂ ಧರ್ಮದ ಪ್ರಮಾಣಾಧಾರಗಳಾದ ವೇಧಾಗಮನ, ಶಾಸ್ತ್ರ-ಪುರಾಣ, ಪೂಜಾರಿ-ಪುರೋಹಿತ್ಯ ಪದ್ಧತಿಗಳನ್ನು ವಿರೋಧಿಸಿದ ಕಾರಣ ವಚನ ಸಾಹಿತ್ಯವನ್ನು ಹಿಂದೂ ವಿರೋಧಿ ಎಂದೇ ಬಿಂಬಿಸುತ್ತಾ ಬರಲಾಗಿದೆ. ಆದರೆ ವಚನಕಾರರ ವಿಚಾರಧಾರೆ ಅರ್ಥಹೀನ ಸಂಪ್ರದಾಯಗಳ ವಿರೋಧವೇ ಹೊರತು ಬೇರೆ ಯಾವ ಧರ್ಮದ ವಿರೋಧವಲ್ಲ ಎಂದು ತಿಳಿಸಿದರು.

ವೈಚಾರಿಕ, ವೈಜ್ಞಾನಿಕವಾಗಿ ಸೋಜಿಗ ಪಡುವಷ್ಟು ಮುಂದುವರಿದಿರುವ ಇಂದಿನ ಕಾಲದಲ್ಲಿಯೂ ಸಲ್ಲುವ ಶರಣರ ವಿಚಾರಧಾರೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ಜನಸಮುದಾಯಗಳ ಬದುಕು ಭಯ-ಭೀತಿ ಅನಿಶ್ಚಿತತೆ ಮತ್ತು ಆತಂಕಗಳನ್ನು ಎದುರಿಸುತ್ತಿದೆ. ಇಂತಹ ಕಳವಳಕಾರಿ ಸನ್ನಿವೇಶದಲ್ಲಿ 12ನೇ ಶತಮಾನದ ವಿಚಾರಧಾರೆಯನ್ನು ಇಂದಿನ ತಲೆಮಾರಿಗೆ ತಲುಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಬಸವ ಧರ್ಮ ಅಥವಾ ಲಿಂಗಾಯತ ಧರ್ಮವನ್ನು ಇವತ್ತು ನಾವು ಜಾತಿಯನ್ನಾಗಿ ಮಾಡಿಕೊಂಡಿದ್ದೇವೆ. ಭೌಗೋಳಿಕವಾಗಿ ನಾವೆಲ್ಲರೂ ಭಾರತೀಯರು-ಹಿಂದೂಗಳೇ, ಭಾರತದಲ್ಲಿ ಜೈನ, ಸಿಖ್, ಬೌದ್ಧ ಧರ್ಮದಿಂದ ಹಿಂದೂ ಧರ್ಮಕ್ಕೆ ಏನಾದರೂ ಅಪಾಯವಾಗಿದೆಯೇ? ಆದರೆ ಬಸವ ಧರ್ಮ ಎಂದ ಮೇಲೆ ನಾವೇ ಸಂಕೋಚದಿಂದ ನಡೆದುಕೊಳ್ಳುತ್ತೇವೆ ಎಂದರು.

 ಸಮ್ಮೇಳನದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಎಂ.ಕೃಷ್ಣಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್, ಸಿದ್ಧರಾಮ ಬೆಲ್ದಾಳ, ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ, ಮಾಜಿ ಉಪ ಮೇಯರ್ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

 

ಪ್ರಮುಖ ಒತ್ತಾಯಗಳು

•ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದಕ್ಕಾಗಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ, ಸಮಾಲೋಚನೆಗಾಗಿ ಕ್ಷೇತ್ರ ತಜ್ಞರ ಸಹಾಯ ಪಡೆಯಬೇಕು.

•ಬಸವ ಕಲ್ಯಾಣದಲ್ಲಿ ನಡೆಯುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.

•ವಚನ ಸಾಹಿತ್ಯವನ್ನು ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರದ ಹಂತದ ವರೆಗೆ ಪಠ್ಯವನ್ನಾಗಿಸಬೇಕು.

•ವಚನ ವಿಶ್ವವಿದ್ಯಾಲಯ ಶೀಘ್ರವಾಗಿ ಆರಂಭವಾಗಬೇಕು.

•ದಿಲ್ಲಿಯಲ್ಲಿ ಎಲ್ಲ ರಾಜ್ಯಗಳ ಭವನಗಳಿವೆ. ಅದರಂತೆ ಬೆಂಗಳೂರಿನಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ಭವನಗಳು ನಿರ್ಮಾಣವಾಗಬೇಕು.

•ಬೇರೆ ಬೇರೆ ಜಿಲ್ಲೆಗಳಲ್ಲಿರುವ ಪ್ರಮುಖ ಉದ್ಯಾನವನಗಳಿಗೆ ಶರಣರ ಹೆಸರುಗಳನ್ನು ಇಡಬೇಕು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News