ನಮ್ಮ ಭಾಷೆಯ ಬಗ್ಗೆ ಗೌರವವಿರಲಿ : ಲೇಖಕಿ ಬಾನು ಮುಷ್ತಾಕ್
ಬೆಂಗಳೂರು : ‘ನನ್ನ ಮಾತೃಭಾಷೆ ಉರ್ದು, ನಮ್ಮ ನಾಡಿನ ಭಾಷೆ ಕನ್ನಡ, ನನಗೂ ಅಷ್ಟಾಗಿ ಇಂಗ್ಲಿಷ್ ಬರುವುದಿಲ್ಲ. ನಮ್ಮ ಭಾಷೆ ಬಗ್ಗೆ ನಮಗೆ ಗೌರವ ಇರಬೇಕು ಹಾಗೂ ಹಿಡಿತ ಇರಬೇಕು. ಕನ್ನಡದವರಾಗಿ ಈಗಿನ ಮಕ್ಕಳಿಗೆ ಕನ್ನಡ ಸಹ ಸರಿಯಾಗಿ ಬರದಿರುವುದು ಇಂದಿನ ದುರಂತ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಕರ್ನಾಟಕ ಮಾದ್ಯಮ ಅಕಾಡಮಿ ಹಾಗೂ ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪ್ರಾಥಮಿಕ ಶಾಲೆಯವರೆಗೆ ಕನ್ನಡ ಮಾದ್ಯಮದಲ್ಲಿಯೇ ಓದಿದ್ದೇನೆ. ಕನ್ನಡದಲ್ಲಿಯೇ ಕಥೆ ಬರೆದಿದ್ದೇನೆ. ಅದಕ್ಕೆ ಇಂಗ್ಲೀಷ್ ಬರಹಗಾರ್ತಿ ದೀಪಾ ಭಾಸ್ತಿ ಅವರು ಇಂಗ್ಲಿಷ್ಗೆ ಅನುವಾದ ಮಾಡಿದ್ದಾರೆ. ನನಗೆ ಸರಿಯಾಗಿ ಇಂಗ್ಲೀಷ್ ಬರುವುದಿಲ್ಲ ಎಂಬ ಕೀಳರಿಮೆ ನನ್ನನ್ನು ಇಂದಿಗೂ ಕಾಡುತ್ತಿಲ್ಲ. ನಿಮಗೆ ಬರುವ ಭಾಷೆ ನಿಮ್ಮ ಬಲ. ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.
ಅವರವರ ಭಾಷೆ ಅವರದ್ದು, ನನಗೆ ಬೂಕರ್ ಪ್ರಶಸ್ತಿ ಬಂದಾಗ ಅಂತರರಾಷ್ಟ್ರೀಯ ವೇದಿಕೆಗಳು ಹಾಗೂ ಮಾದ್ಯಮಗಳಲ್ಲಿ ನಾನು ಭಾಷಾಂತರಕಾರರನ್ನು ಬಳಸಿಕೊಂಡು ಸಂವಹನ ನಡೆಸಿದ್ದೇನೆ, ಇದರ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ನನ್ನ ಬರಹದ ಜೊತೆಗೆ ನನ್ನ ಬದುಕು ನನ್ನೊಳಗೆ ಚರ್ಚೆ ಹುಟ್ಟು ಹಾಕುತ್ತಿದ್ದವು. ಬರವಣಿಗೆಯಲ್ಲಿ ಮರೆಮಾಚುವುದು ಏನೂ ಇಲ್ಲ, ಎಲ್ಲವೂ ತೆರೆಜ ಪುಸ್ತಕ. ಭವಿಷ್ಯದಲ್ಲಿ ಕಾದಂಬರಿ ಸೇರಿದಂತೆ ಆತ್ಮಕಥನವನ್ನು ಸಹ ಬರೆಯುವ ಉದ್ದೇಶವಿದೆ. ಇಲ್ಲಿಯವರೆಗೆ ಯಾವುದೇ ಪ್ರಶಸ್ತಿ ಅಥವಾ ಪುರಸ್ಕಾರಗಳಿಗಾಗಿ ನಾನು ಬರೆದಿಲ್ಲ ಎಂದು ಅವರು ವಿವರಿಸಿದರು.
ನನ್ನ ಬದುಕಿನಲ್ಲಿ ನನ್ನದೇ ಆದ ಅಸ್ತಿತ್ವ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಚಿಕ್ಕ ವಯಸ್ಸಿನಲ್ಲಿಯೇ ನಾನು ನನ್ನ ಸಮಾಜದೊಳಗಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದೆ. ಶಿಕ್ಷಣ ಪಡೆದ ನಂತರ ವಕೀಲೆಯಾಗಿ, ಶಿಕ್ಷಕಿಯಾಗಿ, ಹೋರಾಟಗಾರ್ತಿಯಾಗಿ ನನ್ನನ್ನು ನಾನು ಗುರುತಿಸಿಕೊಂಡು ನನ್ನ ಅನುಭವಗಳನ್ನು ಹಾಗೂ ಕಣ್ಣಾರೆ ಕಂಡ ಘಟನೆಗಳಿಗೆ ಸಾಹಿತ್ಯದ ರೂಪ ಕೊಡಲು ಆರಂಭಿಸಿ ಇಂದು ಅಂತರ್ರಾಷ್ಟ್ರೀಯ ಮಟ್ಟದ ಬೂಕರ್ ಪಡೆಯುವದರೊಂದಿಗೆ ಜಗತ್ತಿನ ಕಣ್ಣಿಗೆ ಬಿದ್ದಿದ್ದೇನೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ, ಪ್ರೆಸ್ಕ್ಲಬ್ನ ಪ್ರಧಾನ ಕಾರ್ಯದರ್ಶಿ ಶಿವಕಮಾರ್ ಬೆಳ್ಳಿತಟ್ಟೆ, ಅನುವಾದಕಿ ದೀಪಾ ಭಾಸ್ತಿ, ಪತ್ರಕರ್ತೆ ಎಸ್.ರಶ್ಮಿ, ಕರ್ನಾಟಕ ಮಾಧ್ಯಮ ಅಕಾಡಮಿಯ ಕಾರ್ಯದರ್ಶಿ ಎಂ.ಸಹನಾ ಮತ್ತಿತರರು ಉಪಸ್ಥಿತರಿದ್ದರು.