ದಲಿತ ಮತ್ತೊಮ್ಮೆ ಮಂತ್ರಿಯಾಗಿದ್ದಾನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಮನುವಾದಿಗಳಿಂದ ಹುನ್ನಾರ: ಸಚಿವ ನಾಗೇಂದ್ರ
ಬೆಂಗಳೂರು: ದಲಿತ, ಆದಿವಾಸಿ ಜನಾಂಗದ ಮತ್ತೊಮ್ಮೆ ಮಂತ್ರಿಯಾಗಿರುವ ನನ್ನನ್ನು ಆ ಸ್ಥಾನದಿಂದ ಕೆಳಗಿಳಿಸಬೇಕೆಂದು ಮನುವಾದಿಗಳು ಹುನ್ನಾರ ಮಾಡುತ್ತಿದ್ದಾರೆ ಎಂದು ಸಚಿವ ಬಿ.ನಾಗೇಂದ್ರ ಆರೋಪಿಸಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರನ್ನು ಈ ದೇಶದಲ್ಲಿರುವ ಸರಕಾರ, ಮನುವಾದಿಗಳು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಎಂದರು.
ನನ್ನ ಮೇಲಿನ ಆರೋಪದ ಬಗ್ಗೆ ಸಮುದಾಯದ ಜನತೆಗೆ ನಾನು ಬೆಳಕು ಚೆಲ್ಲಬೇಕಿದೆ. ಹಗರಣದ ವಿಚಾರಕ್ಕೆ ಬಂದಾಗ ಘೋಷಣೆ ಕೂಗಿದಾಗ ನೋವಾಗುತ್ತದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುವುದಕ್ಕೆ ಹೊರಟಿದ್ದಾರೆ. ಚರ್ಚೆಗೆ ಬನ್ನಿ ಅಂತಾ ಹೇಳಿದರೂ ಪ್ರತಿಪಕ್ಷಗಳು ಬರುತ್ತಿಲ್ಲ. ಸರಕಾರ ಚರ್ಚೆಗೆ ಸಿದ್ಧವಿದೆ. ಆದರೂ ಅವರು ಚರ್ಚೆಗೆ ಬರಲು ಸಿದ್ಧರಿಲ್ಲ ಎಂದವರು ಹೇಳಿದರು.
ಈ ಹಿಂದೆ ವಾಲ್ಮೀಕಿ ನಿಗಮದಿಂದ 187 ಕೋಟಿ ರೂ. ಬೋರ್ಡ್ ಮೀಟಿಂಗ್ ಗಮನಕ್ಕೂ ಬಾರದೆ ಒಂದು ಬ್ಯಾಂಕ್ ಗೆ ವರ್ಗಾವಣೆ ಆಗಿದೆ. ಈ ಮಧ್ಯೆ ಚಂದ್ರಶೇಖರ್ ಎಂಬಾತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದು ತನಿಖೆಯಾಗಲಾರಂಭಿಸಿತು. 187 ಕೋಟಿ ರೂ. ವರ್ಗಾವಣೆ ತನ್ನ ಗಮನಕ್ಕೆ ಬರುತ್ತಲೇ ಅದರಲ್ಲಿ 100 ಕೋಟಿ ರೂ.ವನ್ನು ಕೂಡಲೇ ಫ್ರೀಝ್ ಮಾಡಿಸಿದ್ದೇನೆ. ಉಳಿದೆ 87 ಕೋಟಿ ರೂ. ಆಗಾಗಲೇ ವರ್ಗಾವಣೆ ಆಗಿತ್ತು ಎಂದವರು ವಿವರಿಸಿದರು.
ಈ ಮಧ್ಯೆ ಮೇ 31ರಂದು ಹಗರಣದ ತನಿಖೆಗೆ ಎಸ್ಐಟಿ ರಚನೆಯಾಯಿತು. ಈ ಕಾರಣಕ್ಕೆ ಅದೇ ಇಲಾಖೆಯ ಮಂತ್ರಿಯಾಗಿದ್ದರೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದೆ. ತನಿಖೆ ಮುಂದುವರಿಸಿದ ಎಸ್ಐಟಿ ಕೆಲವೇ ದಿನಗಳಲ್ಲಿ 800 ಅಕೌಂಟ್ ಗಳಿಗೆ ಹೋಗಿದ್ದ ಹಣವನ್ನು ರಿಕವರಿ ಮಾಡಿದೆ. ತನಿಖೆಯಲ್ಲಿ ಎಲ್ಲೂ ಕೂಡ ನನ್ನ ಅಕೌಂಟ್ ಗೆ ಹಣ ವರ್ಗಾವಣೆ ಆಗಿಲ್ಲ ಅನ್ನುವುದು ತಿಳಿದುಬಂತು. ಈ ವಿಚಾರವನ್ನ ಸದನದಲ್ಲಿ ಚರ್ಚಿಸಲು ರೆಡಿಯಾಗಿದ್ದೇನೆ ಎಂದು ಸಚಿವ ನಾಗೇಂದ್ರ ಹೇಳಿದರು.