×
Ad

ಒಳಮೀಸಲಾತಿ ತೀರ್ಪಿಗೆ ಬಿಎಸ್ಪಿಯ ಮಾಯಾವತಿ ವಿರೋಧ | ಪಕ್ಷಕ್ಕೆ ಮಾರಸಂದ್ರ ಮುನಿಯಪ್ಪ ಸೇರಿ ರಾಜ್ಯದ ನಾಯಕರು ರಾಜೀನಾಮೆ

Update: 2024-08-31 18:24 IST

ಬೆಂಗಳೂರು : ಪರಿಶಿಷ್ಟರ ಒಳಮೀಸಲಾತಿ ತೀರ್ಪನ್ನು ಬಿಎಸ್ಪಿ ರಾಷ್ಟ್ರೀಯಾಧ್ಯಕ್ಷೆ ಮಾಯಾವತಿ ವಿರೋಧಿಸಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಸಂಯೋಜಕ ಎಂ. ಗೋಪಿನಾಥ್ ಸೇರಿದಂತೆ 5 ಮಂದಿ ಪದಾಧಿಕಾರಿಗಳು ಬಿಎಸ್ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಬಿಎಸ್ಪಿ ಡಾ.ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಸಿದ್ದಾಂತದಿಂದ ದೂರ ಸರಿದಿದೆ ಮತ್ತು ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಕಳೆದುಕೊಂಡಿರುವುದರಿಂದಲೇ ರಾಜ್ಯ ಸಮಿತಿಯ ಪದಾಧಿಕಾರಿಗಳು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್‍ಸಿ-ಎಸ್‍ಟಿ ಮೀಸಲಾತಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇಲ್ಲ. ಮೀಸಲಾತಿ ಕೆನೆಪದರ ವಿಷಯವನ್ನು ವಿರೋಧಿಸಿರುವ ಮಾಯಾವತಿ ನಿಲುವನ್ನು ನಾವು ಅನುಮೋದಿಸುತ್ತೇವೆ. ಆದರೆ, ಒಳಮೀಸಲಾತಿ ವಿರೋಧಿಸುವ ಅವರ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದೇವೆ. 30 ವರ್ಷಗಳಿಂದ ಒಳಮೀಸಲಾತಿ ಆಂದೋಲನವನ್ನು ನಾವು ಮತ್ತು ನಮ್ಮ ಕಾರ್ಯಕರ್ತರು ಬೆಂಬಲಿಸುತ್ತಾ ಬಂದಿದ್ದೇವೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.

ರಾಜ್ಯದ ಸ್ಥಿತಿಯ ಬಗ್ಗೆ ರಾಷ್ಟ್ರೀಯಾಧ್ಯಕ್ಷರೊಂದಿಗೆ ಮಾತನಾಡಲು ಉಸ್ತುವಾರಿ ಡಾ.ಅಶೋಕ್ ಸಿದ್ಧಾರ್ಥ್ ಮೂಲಕ ಮನವಿಯನ್ನು ಸಲ್ಲಿಸಿದೆವು. ಅಲ್ಲದೆ ಆ.9ರಂದು ಅವರೊಂದಿಗೆ ಫೋನ್ ಮೂಲಕ ನಮ್ಮ ಅಹವಾಲನ್ನು ಹೇಳಿಕೊಂಡೆವು. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಿ ಒಳಮೀಸಲಾತಿ ಒದಗಿಸುವಂತೆ ನ್ಯಾ.ಸದಾಶಿವ ಆಯೋಗದ ಶಿಫಾರಸ್ಸುಗಳು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳ ಪ್ರಕಾರವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೆವು ಎಂದು ಅವರು ತಿಳಿಸಿದರು.

ರಾಷ್ಟ್ರೀಯಾಧ್ಯಕ್ಷರ ಆಹ್ವಾನದ ಮೇರೆಗೆ ರಾಜ್ಯ ಪದಾಧಿಕಾರಿಗಳ ನಿಯೋಗವು ಆ.27ರಂದು ಅವರನ್ನು ನೇರವಾಗಿ ಭೇಟಿಯಾಗಿ ಮನವಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಿಲ್ಲ. ನಮ್ಮಂತೆಯೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಾಯಕರೂ ತಮ್ಮ ಮನವಿಯನ್ನು ಸಲ್ಲಿಸಲಾಗದೆ ಅವಮಾನ ಅನುಭವಿಸಿದ್ದಾರೆ. ರಾಜೀನಾಮೆಯ ನಂತರದಲ್ಲಿ ನಾವು ಸುಮ್ಮನೆ ಕೂರದೆ, ಫುಲೆ, ಪೆರಿಯಾರ್, ನಾರಾಯಣಗುರು, ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಆದರ್ಶಗಳ ಮೇಲೆ ಬಹುಜನ ಚಳುವಳಿ ಮುಂದುವರಿಸಲು ಸಂಕಲ್ಪ ಮಾಡಿದ್ದೇವೆ ಎಂದು ಮಾರಸಂದ್ರ ಮುನಿಯಪ್ಪ ತಿಳಿಸಿದರು.

ರಾಜ್ಯ ಸಂಯೋಜಕ ಎಂ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಮುನಿಯಪ್ಪ ಮತ್ತು ಕೆ.ಬಿ.ವಾಸು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News