ಶಿಕ್ಷಣ, ಜ್ಞಾನ ಎಂದಿಗೂ ಕಳವಾಗುವುದಿಲ್ಲ: ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಜೂ.14: ಮಾನವ ಜೀವನದ ಸುಧಾರಣೆ ಮತ್ತು ಪರಿಪೂರ್ಣತೆಯಲ್ಲಿ ಶಿಕ್ಷಣವೂ ಮಹತ್ತರ ಪಾತ್ರವಹಿಸುತ್ತದೆ. ಕಲಿತ ಶಿಕ್ಷಣ ಹಾಗೂ ದೊರೆತ ಜ್ಞಾನವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯದ 11 ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸಂಸ್ಕೃತವು ಭಾರತೀಯ ಸಂಪ್ರದಾಯದ ಜ್ಞಾನದ ಭಾಷೆಯಾಗಿದೆ. ಇದನ್ನು ಅನೇಕ ಭಾಷೆಗಳ ತಾಯಿ ಎಂದು ಪರಿಗಣಿಸಲಾಗಿದೆ. ಹಿಂದೆ ಸಂಸ್ಕೃತವು ದೇಶದಾದ್ಯಂತ ವಿದ್ಯಾವಂತರಲ್ಲಿ ಪ್ರವಚನದ ಭಾಷೆಯಾಗಿತ್ತು ಎಂದರು.
ಆಡು ಭಾಷೆಗಳಲ್ಲಿ ಸಂಸ್ಕೃತವನ್ನು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಸೇರಿಸಲಾಗಿದೆ. ಆದರೆ ಉತ್ತರಾಖಂಡ ರಾಜ್ಯದಲ್ಲಿ ಇದು ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ಹೊಂದಿದೆ. ಕರ್ನಾಟಕದ ಮುತ್ತೂರಿನಲ್ಲಿ ಸಂಸ್ಕೃತವು ಮಾತನಾಡುವ ಭಾಷೆಯಾಗಿದೆ. ಇದಲ್ಲದೆ, ಸಂಸ್ಕೃತವನ್ನು ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಮಾತನಾಡುವ ಭಾಷೆಯಾಗಿ ಬಳಸಲಾಗುತ್ತದೆ. ದೇಶ ಮತ್ತು ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಲಾಗುತ್ತದೆ. ಈ ಭಾಷೆಯ ಜ್ಞಾನ ಹೊಂದಿರುವವರ ಭವಿಷ್ಯವು ತುಂಬಾ ಉಜ್ವಲವಾಗಲಿದೆ ಎಂದು ಹೇಳಿದರು.
ಸಂಸ್ಕೃತ ಶಿಕ್ಷಣದಲ್ಲಿ ಏಕರೂಪತೆಯನ್ನು ತರುವುದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಂಸ್ಕೃತವನ್ನು ಅಧ್ಯಯನ ಮಾಡಲು ಅವಕಾಶಗಳನ್ನು ಒದಗಿಸುವುದು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಘಟಿಕೋತ್ಸವದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಮತ್ತು ಸಂರಕ್ಷಣೆಗಾಗಿ ಮತ್ತು ಸಮಾಜ ಮತ್ತು ದೇಶದ ಕಲ್ಯಾಣಕ್ಕೆ ಅವರ ಅತ್ಯುತ್ತಮ ಕೊಡುಗೆಗಾಗಿ ಸಾಧಕರಿಗೆ ಗೌರವ ಪದವಿಯನ್ನು ನೀಡಲಾಗಿದೆ. ಈ ಸಾಧಕರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ. ಈ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ತಮ್ಮ ಜ್ಞಾನವನ್ನು ದೇಶದೆಲ್ಲೆಡೆ ಪಸರಿಸಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಪ್ರೊ.ಎಚ್.ವಿ.ನಾಗರಾಜ ರಾವ್, ಕುಲಪತಿ ಡಾ.ಅಹಲ್ಯಾ ಶರ್ಮಾ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.