ಪೈಪ್ಲೈನ್ ಕಾಮಗಾರಿಗೆ ತೆಗೆದಿದ್ದ ಚರಂಡಿಗೆ ಬಿದ್ದು ಯುವಕ ಗಂಭೀರ: ಜಿಬಿಎ, ಜಲಮಂಡಳಿ ಅಧಿಕಾರಿಗಳಿಗೆ ನೋಟಿಸ್
Update: 2025-06-13 22:12 IST
ಬೆಂಗಳೂರು : ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿ ಪೈಪ್ಲೈನ್ ಅಳವಡಿಕೆ ಕಾಮಗಾರಿಗಾಗಿ ತೆಗೆದಿದ್ದ ಚರಂಡಿಗೆ ಬಿದ್ದು ಯುವಕ ಗಂಭೀರ ಗಾಯಗೊಂಡಿರುವ ಪ್ರಕರಣ ಸಂಬಂಧ ರಾಜಾಜಿನಗರ ಸಂಚಾರಿ ಠಾಣಾ ಪೊಲೀಸರು ಸಂಬಂಧಪಟ್ಟ ಜಲಮಂಡಳಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಮಗಾರಿಯ ಗುತ್ತಿಗೆದಾರನಿಗೂ ನೋಟಿಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಚರಂಡಿಯನ್ನು ತೆಗೆಯಲಾಗಿದೆ. ಜೂ.4 ರಂದು ಕೆಲಸ ಮುಗಿಸಿಕೊಂಡು ಮಂಜುನಾಥ್ ಎಂಬುವರು ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಕಾಮಗಾರಿಗಾಗಿ ಅಗೆದಿದ್ದ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಈ ಬಗ್ಗೆ ಮಂಜುನಾಥ್ ಅವರ ತಂದೆ ನೀಡಿದ ದೂರಿನನ್ವಯ ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.