×
Ad

ಮಹಾನಗರ ಪಾಲಿಕೆ ನೌಕರರೊಂದಿಗೆ ಸಂಧಾನ ಸಭೆ ಯಶಸ್ವಿ: ಮುಷ್ಕರ ವಾಪಸ್

Update: 2025-07-15 19:59 IST

ಬೆಂಗಳೂರು : ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಮಹಾನಗರ ಪಾಲಿಕೆಗಳ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ಮುಷ್ಕರ ಕೈಬಿಡುವುದಾಗಿ ನೌಕರರು ಪ್ರಕಟಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯದ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಮತ್ತು ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ಪದಾಧಿಕಾರಿಗಳೊಂದಿಗೆ ಸಚಿವ ಬಿ.ಎಸ್.ಸುರೇಶ್ ಸಭೆ ನಡೆಸಿದರು.

ಮಹಾನಗರ ಪಾಲಿಕೆಗಳ ಸಾಮಾನ್ಯ ನೇಮಕಾತಿ ನಿಯಮಗಳು 2011ಕ್ಕೆ ಸಮಗ್ರ ತಿದ್ದುಪಡಿ ಮಾಡುವುದು, ಮಹಾನಗರ ಪಾಲಿಕೆ ನೌಕರರನ್ನು ಪೂರ್ಣ ಪ್ರಮಾಣದಲ್ಲಿ ಸರಕಾರಿ ನೌಕರರೆಂದು ಪರಿಗಣಿಸುವುದು, ಸರಕಾರಿ ನೌಕರರ ರೀತಿಯಲ್ಲಿ ಮಹಾನಗರ ಪಾಲಿಕೆಗಳ ಅಧಿಕಾರಿಗಳು, ನೌಕರರಿಗೂ ಕೆಜಿಐಡಿ, ಜಿಐಎಸ್ ಮತ್ತು ಜಿಪಿಎಫ್ ಸೌಲಭ್ಯಗಳನ್ನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ನೌಕರರ ಸಂಘಗಳು ಸರಕಾರದ ಮುಂದಿಟ್ಟಿದ್ದವು.

ಈ ಬಗ್ಗೆ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್, ಪಾಲಿಕೆ ನೌಕರರಿಗೆ ಸಕಾಲಕ್ಕೆ ವೇತನ ನೀಡುವುದು, ಸಿ ಅಂಡ್ ಆರ್ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಆರ್ಥಿಕ ಇಲಾಖೆ ಅನುಮೋದನೆ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಪೌರಾಡಳಿತ ಆಯುಕ್ತರ ಹುದ್ದೆಗಳನ್ನು ಸೃಜಿಸುವಂತೆ ನೌಕರರು ಬೇಡಿಕೆ ಇಟ್ಟಿದ್ದರು. ಆದರೆ, ಕಾನೂನು ಪರಿಮಿತಿಯೊಳಗೆ ವಲಯ ಆಯುಕ್ತರ ಹುದ್ದೆ ಸೃಜಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಆರ್ಥಿಕ ಇಲಾಖೆ ಅಭಿಪ್ರಾಯ ಬಂದ ತಕ್ಷಣ ಕ್ರಮ ವಹಿಸುವುದಾಗಿ ಭರವಸೆ ನೀಡಿರುವುದಾಗಿ ಅವರು ಹೇಳಿದರು.

ಪರಿಸರ ಇಂಜಿನಿಯರ್ ನೇಮಕಕ್ಕೆ ಸೂಚನೆ: ಮಹಾನಗರ ಪಾಲಿಕೆಗಳಲ್ಲಿ ಸಾಕಷ್ಟು ಪರಿಸರ ಇಂಜಿನಿಯರ್ ಗಳ ಹುದ್ದೆಗಳು ಖಾಲಿ ಇವೆ. ಇದರಿಂದ ದೈನಂದಿನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಂಜೂರಾಗಿರುವ ಪರಿಸರ ಇಂಜಿನಿಯರ್ ಗಳ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.

ಪಾಲಿಕೆ ನೌಕರರಿಗೆ ಗುಂಪು ವಿಮೆ: ಸರಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಗುಂಪು ವಿಮೆ ಯೋಜನೆ (ಜಿಐಎಸ್) ಜಾರಿಗೆ ತರುವ ಬಗ್ಗೆ ಸರಕಾರ ಮುಕ್ತ ಮನಸ್ಸು ಹೊಂದಿದೆ. ವಿಮಾ ಕಂತಿನ ಮೊತ್ತದಲ್ಲಿ ನೌಕರರು ತಮ್ಮ ಪಾಲಿನ ಮೊತ್ತವನ್ನು ಪಾವತಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಗಳು ನೌಕರರ ಗುಂಪು ವಿಮೆ ಯೋಜನೆಗೆ ಉಳಿದ ಮೊತ್ತವನ್ನು ಭರಿಸುವುದಾದರೆ ಆಗಬಹುದಾದ ಆರ್ಥಿಕ ಹೊರೆಯನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಉನ್ನತಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಸುರೇಶ್ ಹೇಳಿದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ: ಪ್ರತಿ ವರ್ಷ ಪಾಲಿಕೆಗಳ ನೌಕರರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಆರ್ಥಿಕ ಹೊರೆಯಾಗದ ರೀತಿಯಲ್ಲಿ ಪಾಲಿಕೆಗಳಿಂದಲೇ ವೆಚ್ಚ ಭರಿಸಲು ಸೂಚನೆ ನೀಡಲಾಗಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ನೌಕರರ ಇನ್ನಿತರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಸುರೇಶ್ ತಿಳಿಸಿದರು.

ಪಾಲಿಕೆಗಳಿಗೂ ಜ್ಯೋತಿ ಸಂಜೀವಿನಿ: ಸರಕಾರಿ ನೌಕರರಿಗೆ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆಯನ್ನು ಪಾಲಿಕೆ ನೌಕರರಿಗೂ ವಿಸ್ತರಣೆ ಮಾಡುವ ಬಗ್ಗೆ ಸಹಮತ ವ್ಯಕ್ತಪಡಿಸಲಾಗಿದೆ. ಈ ಯೋಜನೆಯಡಿ ನೌಕರರು ತಮ್ಮ ಪಾಲಿನ ವಿಮಾ ಮೊತ್ತ ಮತ್ತು ಅದಕ್ಕೆ ಸಮಾನವಾದ ಮೊತ್ತವನ್ನು ಪಾಲಿಕೆಗಳು ಭರಿಸುವ ಸಾಧಕ-ಭಾದಕಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಇದಲ್ಲದೇ, ನೌಕರರ ಚಿಕಿತ್ಸಾ ವೆಚ್ಚವನ್ನು ಮಂಜೂರು ಮಾಡುವ ಅಧಿಕಾರವನ್ನು ಆಯಾ ಪಾಲಿಕೆಗಳ ಆಯುಕ್ತರಿಗೆ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.

ಈ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಮತ್ತು ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.

ಮುಷ್ಕರ ವಾಪಸ್: ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನಗರಾಭಿವೃದ್ಧಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಷಷಕ್ಷರಿ ಮತ್ತು ಅಮೃತರಾಜ್ ಅವರು ಮುಷ್ಕರವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದರಲ್ಲದೇ, ಸಚಿವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News