×
Ad

ಗಡಿಭಾಗದ ಸಮಸ್ಯೆ ಪರಿಹರಿಸಲು ಕೇಂದ್ರ ಮುಂದಾಗಲಿ : ರಾಷ್ಟ್ರಪತಿಗೆ ಪತ್ರ ಬರೆದ ಪುರುಷೋತ್ತಮ ಬಿಳಿಮಲೆ

Update: 2025-02-27 18:04 IST

ಬೆಂಗಳೂರು : ಗಡಿಭಾಗದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಮುಂದಾಗಬೇಕು. ಕೂಡಲೇ ಸಂವಿಧಾನದ ಅವಕಾಶದಂತೆ ವಿಶೇಷಾಧಿಕಾರಿಯನ್ನು ನೇಮಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಕುರಿತು ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ಅವರು, ಬೆಳಗಾವಿ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ದಾಖಲಾಗುವ ಅಂತರ್‌ ರಾಜ್ಯ ಗಲಭೆಗಳನ್ನು ಸಮರ್ಥವಾಗಿ ಹತ್ತಿಕ್ಕಲು ಸಂವಿಧಾನವೇ ಅವಕಾಶ ಕಲ್ಪಿಸಿದ್ದು, ಕೇಂದ್ರ ಸರಕಾರ ಮನಸು ಮಾಡಬೇಕು ಎಂದು ತಿಳಿಸಿದ್ದಾರೆ.

ಸಂವಿಧಾನದ 350(ಬಿ) ಅನುಚ್ಛೇದದಲ್ಲಿ ಗಡಿ ಪ್ರದೇಶಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರು ಬಹುಸಂಖ್ಯಾತರೊಂದಿಗೆ ಸಾಮರಸ್ಯದ ಜೀವನವನ್ನು ನಡೆಸುವಲ್ಲಿ ಕೇಂದ್ರ ಸರಕಾರದ ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದ್ದು, ಅದರಂತೆ ಕೇಂದ್ರ ಸರಕಾರವು ವಿಶೇಷಾಧಿಕಾರಿಯನ್ನು ನೇಮಿಸಬೇಕಿದೆ ಎಂದಿದ್ದಾರೆ.

ನೇಮಿಸಲಾಗುವ ವಿಶೇಷಾಧಿಕಾರಿ, ಗಡಿ ಭಾಗಗಳ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕು. ಸಮಸ್ಯೆವಾರು ವಿವರಗಳನ್ನು ಸಿದ್ಧಪಡಿಸಿ, ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಬೇಕು. ರಾಷ್ಟ್ರಪತಿಗಳು ಅದನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಮಂಡಿಸಲು ನಿರ್ದೇಶಿಸಬಹುದಾಗಿದ್ದು, ಕೇಂದ್ರ ಸರಕಾರವು ವರದಿಯ ಆಧಾರದಲ್ಲಿ ಉಭಯ ರಾಜ್ಯಗಳ ಗಡಿ ಹಿಂಸಾಚಾರಗಳನ್ನು ಹತ್ತಿಕ್ಕುವಲ್ಲಿ ಕ್ರಮ ವಹಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

‘ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಗಲಭೆ ಈ ಪತ್ರ ಬರೆಯಲು ಪ್ರೇರೇಪಿಸಿದೆ. ಈ ಸಮಸ್ಯೆ ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ತೀವ್ರವಾಗಿದ್ದು, ಎರಡೂ ರಾಜ್ಯಗಳ ಆಡಳಿತ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿರುವುದಷ್ಟೇ ಅಲ್ಲದೇ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ, ಅಗಾಧ ಹಿಂಸಾಚಾರ ವೇದನೆ ತರುವ ವಿಷಯವಾಗಿದೆ. ಈ ಅರ್ಥಹೀನ ಗಲಭೆಗಳಿಗೆ ಕೊನೆಯಾಡಲು ಕೇಂದ್ರ ಸರಕಾರವು ಕೂಡಲೇ ಮುಂದಾಗಬೇಕು’

-ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News