×
Ad

ಬೀದರ್‌ ದರೋಡೆ ಪ್ರಕರಣ | ರಾಯಚೂರಿನಲ್ಲಿ ಎಸ್ಪಿ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ

Update: 2025-01-19 12:52 IST

ರಾಯಚೂರು : ಬೀದರ್‌ನಲ್ಲಿ ದರೋಡೆಕೋರರು ಬ್ಯಾಂಕ್ ಸಿಬ್ಬಂದಿಯನ್ನು‌ ಗುಂಡಿಕ್ಕಿ ಕೊಲೆ ಮಾಡಿ, ದರೋಡೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕು ವ್ಯಾಪ್ತಿಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಎಸ್ಪಿ ಪುಟ್ಟಮಾದಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.

ಬೀದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಬ್ಯಾಂಕ್‌ನಲ್ಲಿ ಹಗಲಿನಲ್ಲಿ ದರೋಡೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ದರೋಡೆಗೆ ಯತ್ನಕ್ಕೆ ಸಂಬoಧಪಟ್ಟಂತೆ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಬ್ಯಾಂಕ್‌ನಲ್ಲಿ ಇರುವ ಸಿ.ಸಿ.ಟಿ.ವಿ.ಗಳು ಸುವ್ಯಸ್ಥೆಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಬ್ಯಾಂಕ್‌ನಲ್ಲಿರುವ ಭದ್ರತಾ ಸಿಬ್ಬಂದಿ ಸರಿಯಾಗಿ ನಿಗಾ ವಹಿಸುವಂತೆ ಸೂಚಿಸುವುದು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಠಾಣೆಗೆ / ಸರಹದ್ದಿನ ಠಾಣೆಗೆ ಮಾಹಿತಿ ನೀಡಬೇಕು. ಬ್ಯಾಂಕ್ ಆವರಣದ ಸುತ್ತಮುತ್ತ ಇರುವ ಏರಿಯಾವನ್ನು ಸೆರೆ ಹಿಡಿಯುವ ಹಾಗೆ ಒಳ್ಳೆಯ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮಾರಾಗಳನ್ನು ಅಳವಡಿಸಬೇಕು ಎಂದು ಎಸ್ಪಿ ಪುಟ್ಟಮಾದಯ್ಯ ಸೂಚನೆ ನೀಡಿದರು.

ಬ್ಯಾಂಕ್‌ನಲ್ಲಿ ಹೆಚ್ಚಿನ ಮೊತ್ತದ ಹಣ, ಚಿನ್ನವನ್ನು ಡ್ರಾ ಮಾಡಿಕೊಂಡು ಹೋಗುವ ಗ್ರಾಹಕರಿಗೆ ಕಳ್ಳರಿಂದ, ಅಪರಿಚಿತ ರಿಂದ ಜಾಗೃತೆಯಿಂದ ಇರಲು ತಿಳಿಸಬೇಕು. ಬ್ಯಾಂಕ್‌ನಲ್ಲಿ ಹತ್ತಿರದ ಪೊಲೀಸ್ ಠಾಣೆಯ, ಪೊಲೀಸ್ ಅಧಿಕಾರಿಗಳ ಫೋನ್ ನಂಬರಗಳನ್ನು ಬ್ಯಾಂಕ್‌ನಲ್ಲಿ ಕಾಣುವಂತೆ ಹಾಕುವುದು. ಎ.ಟಿ.ಎಂ ಗಳಲ್ಲಿ ಸಿ.ಸಿ.ಟಿ.ವಿ, ಅಲರಾಮ್ ಹಾಗೂ 24×7 ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆಯನ್ನು ಮಾಡುವುದು. ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ವಿತ್ ಡ್ರಾ ಮಾಡುವ ಗ್ರಾಹಕರೊಂದಿಗೆ ಅವರ ಸುರಕ್ಷತೆಗಾಗಿ ಜೊತೆಗೆ ಇನ್ನೊಬ್ಬರನ್ನು ಕರೆದುಕೊಂಡು ಬರುವಂತೆ ತಿಳಿಸಬೇಕು‌ ಎಂದು ನಿರ್ದೇಶನ ನೀಡಿದರು.

ಬ್ಯಾಂಕ್‌ನಲ್ಲಿ ಹಣ ಇಡುವ ಭದ್ರತಾ ಕೋಣೆಗೆ ಸಿಸಿಟಿವಿ ವ್ಯವಸ್ಥೆ ಮಾಡುವುದು. ಪ್ರೈವೆಟ್ ಏಜೆನ್ಸಿಯವರು ಬ್ಯಾಂಕ್‌ ನಿಂದ ಹಣವನ್ನು ವಾಹನದಲ್ಲಿ ತೆಗೆದುಕೊಂಡು ಹೋಗುವಾಗ ಸೂಕ್ತ ಭದ್ರತೆ ಬಗ್ಗೆ ದೃಢಪಡಿಸಿಕೊಳ್ಳುವುದು. ಒಂದು ವೇಳೆ ಇಲ್ಲದೇ ಇದ್ದಲ್ಲಿ ಹೆಚ್ಚಿನ ಭದ್ರತೆ ನೇಮಿಸುವುದು. ಬ್ಯಾಂಕ್‌ಗಳ ಭದ್ರತೆಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ನಿವೃತ್ತ ಸೈನಿಕರು. ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅದ್ಯತೆ ನೀಡಬೇಕು. ಇದಲ್ಲದೇ ಇತರೆ ಭದ್ರತಾ ವಿಚಾರಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಂಜಾಗೃತಾ ಕ್ರಮಗಳನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ, ಡಿವೈಎಸ್‌ಪಿ ಸತ್ಯನಾರಾಯಣರಾವ್ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News