×
Ad

ವಿಶೇಷಚೇತನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ : ಸಂತೋಷ್‌ ಲಾಡ್

Update: 2026-01-10 20:38 IST

ಬೆಂಗಳೂರು : ವಿಶೇಷಚೇತನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಸೂದೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ಈ ಮಸೂದೆ ಬರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದರು.

ಶನಿವಾರ ಸ್ನೇಹದೀಪ ಅಂಗವಿಕಲರ ಸಂಸ್ಥೆಯು ಮಲ್ಲೇಶ್ವರದಲ್ಲಿರುವ ಜಲಮಂಡಳಿ ರಜತ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ (ರಾಜ್ಯ ಮಟ್ಟದ ಸಾಂಸ್ಕೃ ತಿಕ ಕಾರ್ಯಕ್ರಮ) ದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ 35 ಲಕ್ಷ ವಿಶೇಷಚೇತನರು ಇದ್ದಾರೆ ಎಂಬ ಅಂದಾಜು ಇದೆ. ಇವರಿಗೆ ಸರಕಾರದ ನೆರವು ಸಿಗಬೇಕು. ಆದುದರಿಂದ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಚಿಂತನೆ ನಡೆದಿದೆ. ಖಾಸಗಿ ಉದ್ದಿಮೆಗಳಲ್ಲಿ ಶೇ.5ರಷ್ಟು ಮೀಸಲು ಸಿಗಬೇಕು. ಇಡೀ ದೇಶದಲ್ಲೆ ಮೊದಲ ಬಾರಿಗೆ ಇಂತಹ ಕ್ರಮಕ್ಕೆ ಸರಕಾರ ಮುಂದಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು.

ಅಧಿಕಾರದಲ್ಲಿ ಇರುವವರು ಸಮಾಜಕ್ಕೆ ಏನಾದರೂ ಉಪಯೋಗವಾಗುವಂತ ಕೆಲಸ ಮಾಡಬೇಕು. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೋ ಗೊತ್ತಿಲ್ಲ. ಸ್ನೇಹದೀಪ ಅಂಗವಿಕಲರ ಸಂಸ್ಥೆ ವಿಶೇಷಚೇತರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಇಂತಹವರಿಗೆ ಬೆಂಬಲ ನೀಡಬೇಕು. ವಿಶೇಷಚೇತನ ಮಕ್ಕಳ ಭವಿಷ್ಯ ಉಜ್ವಲವಾಗಲು ಸರಕಾರವೂ ಮುಂದೆ ಬರಬೇಕು ಎಂದು ಅವರು ನುಡಿದರು.

ನಾವು ವಿಶೇಷಚೇತನರ ಬಗ್ಗೆ ಮಾತನಾಡುತ್ತೇವೆ. ಕನಸು ಕಾಣಲು ಕಣ್ಣು ಬೇಕಾಗಿಲ್ಲ. ನಮಗೆ ದೃಷ್ಟಿ ಇದೆ. ಆದರೆ ವಿಷನ್ ಇಲ್ಲ. ವಿಶೇಷಚೇತನರ ಹೃದಯ ಮತ್ತು ಮನಸ್ಸು ಸುಂದರವಾಗಿದೆ. ನಮಗೆ ದೇವರು ಎಲ್ಲ ಅವಕಾಶ ನೀಡಿದ್ದಾನೆ. ವಿಶೇಷಚೇತನರನ್ನು ನೋಡಿ ನಾವೆಲ್ಲ ಕಲಿಯಬೇಕು. ಉಸಿರು ಇರುವವರೆಗೆ ಬಡವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸಂತೋಷ್ ಲಾಡ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸ್ನೇಹದೀಪ ಟ್ರಸ್ಟ್‌ ನ ವ್ಯವಸ್ಥಾಪಕ ಟ್ರಸ್ಟಿ ಡಾ.ಪೌಲ್ ಮುದ್ದಾ, ಹಿರಿಯ ಗಾಯಕಿ ಡಾ.ಪ್ರಿಯದರ್ಶಿನಿ, ಹಿರಿಯ ವ್ಯವಸ್ಥಾಪಕಿ ಭಾರತಿ ರಾಮ್‍ಬಜ್, ಲಯನ್ಸ್ ಇಂಟರ್ ನ್ಯಾಷನಲ್‍ನ ಸಶ ಕೊಲತುಂಗಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News