ರಾಜಕೀಯ ಎಂದರೆ ಓಟ ಇದ್ದಂತೆ, ಇಲ್ಲದಿದ್ದರೆ ಕೆಲಸ ಆಗಲ್ಲ : ಸತೀಶ್ ಜಾರಕಿಹೊಳಿ
Update: 2026-06-29 23:07 IST
ಬೆಂಗಳೂರು : ರಾಜಕೀಯವಾಗಿ ಒಬ್ಬರನ್ನು ಹಿಂದಿಕ್ಕಿಯೇ ಮತ್ತೊಬ್ಬರು ಮುಂದೆ ಬರುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ ಎನ್ನುವ ಚರ್ಚೆ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ನಾವು ಹೇಳಲು ಸಾಧ್ಯವಿಲ್ಲ. ಮೂಲೆಗುಂಪು ಎಲ್ಲ ಪಕ್ಷಗಳಲ್ಲಿಯೂ ಇರುತ್ತದೆ. ಅದು ರಾಜಕೀಯ ಸಿದ್ದಾಂತದ ಭಾಗ. ಅಲ್ಲದೆ, ಒಬ್ಬರನ್ನು ಹಿಂದೆ ಹಾಕಿಯೇ ಇನ್ನೊಬ್ಬರು ಮುಂದೆ ಬರುವುದು. ನಾವು ಅಷ್ಟೇ ವೇಗದಲ್ಲಿಯೇ ಓಡಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ವೇಗ ಏಕೆ ಕಡಿಮೆ ಆಯಿತು ಎಂದು ಅವರನ್ನೆ ಕೇಳಿ. ನಾವು ಅವರಿಗೆ ಓಡಬೇಕು ಎಂದು ಹೇಳುತ್ತೇವೆ. ರಾಜಕೀಯ ಎಂದರೆ ಓಟ ಇದ್ದಂತೆ, ಇಲ್ಲದಿದ್ದರೆ ಕೆಲಸ ಆಗಲ್ಲ. ಯಾರು ಸ್ಪರ್ಧೆ ಮಾಡುತ್ತಾರೆ ಅವರು ಉಳಿತಾರೆ. ಇಲ್ಲದಿದ್ದರೆ ಜನ ಮರೆಯುತ್ತಾರೆ ಎಂದು ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು.