ಬೆಳಗಾವಿ : ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು
Update: 2026-05-04 09:36 IST
ಬೆಳಗಾವಿ: ನಗರದ ಕಪಿಲೇಶ್ವರ ದೇವಸ್ಥಾನದ ಹಿಂಭಾಗದ ಹೊಂಡದ ಬಳಿಯ ಗೋಡೆ ಕುಸಿದು ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಶಹಾಪುರ ಶಿವಾಜಿ ನಗರದ ಜೆ.ಡಿ. ಗಲ್ಲಿಯ ಶಿವಂ ಪರಶುರಾಮ ಸುಂಡಿಕರ್ (07) ಹಾಗೂ ಪರಶುರಾಮ ರಾಜು ನಿಲಜಕರ್ (11) ಮೃತಪಟ್ಟವರು. ಇವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಹೊಂಡದಲ್ಲಿ ಈಜಲು ಹೋಗಿದ್ದರು. ಈ ವೇಳೆ ಹೊಂಡದ ಪಕ್ಕದ ಗೋಡೆಯ ಮೇಲೆ ನಾಲ್ವರು ಬಾಲಕರು ಕುಳಿತಿದ್ದರು. ಆಗ ಗೋಡೆ ಒಮ್ಮಿಂದೊಮ್ಮೆಲೇ ಕುಸಿದು ಹೊಂಡಕ್ಕೆ ಬಿದ್ದಿದೆ. ನಾಲ್ವರಲ್ಲಿ ಇಬ್ಬರು ಈಜಿಕೊಂಡು ಮೇಲೆ ಬಂದರೆ, ಇನ್ನಿಬ್ಬರು ಬಾಲಕರು ಗೋಡೆಯ ಕಲ್ಲುಗಳು ಬಿದ್ದ ಪರಿಣಾಮ ಈಜಲಾರದೆ ಅಸುನೀಗಿದ್ದಾರೆ.
ಈಗಾಗಲೇ ಒಂದು ಮೃತದೇಹವನ್ನು ಹೊಂಡದಿಂದ ಹೊರತೆಗೆದಿದ್ದು, ಮತ್ತೊಂದು ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಮಹಾನಗರ ಪಾಲಿಕೆ, ವೈದ್ಯಕೀಯ ಸಿಬ್ಬಂದಿ ಹಾಗೂ ಈಜು ನಿಪುಣರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.