ಬಳ್ಳಾರಿ/ಕಂಪ್ಲಿ: ಸಮೃದ್ಧ ಮಳೆ ಹಾಗೂ ಉತ್ತಮ ಬೆಳೆಗಾಗಿ ಸಂಕಲ್ಪಿಸಿ, ಇದೇ ಮೊದಲ ಬಾರಿಗೆ ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನದ ವತಿಯಿಂದ ಶ್ರೀ ವಾಸವಿ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ‘ಮಳೆಗಾಗಿ ಕವಿಗೋಷ್ಠಿ’ಯನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ವಿ. ರಾಮಲಿಂಗಯ್ಯ ಶ್ರೇಷ್ಠಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಳೆಗಾಗಿ ಕವಿಗೋಷ್ಠಿ ಆಯೋಜಿಸಿರುವುದು ಸಾಹಿತ್ಯದ ದೃಷ್ಟಿಯಿಂದ ಔಚಿತ್ಯಪೂರ್ಣವಾಗಿದೆ. ಮಳೆ ಸಮೃದ್ಧವಾಗಿ ಸುರಿಯಬೇಕು ಹಾಗೂ ಮಳೆ ಕೊರತೆಯ ಬಗ್ಗೆ ವೈಚಾರಿಕವಾಗಿ ಚಿಂತಿಸುವ ನಿಟ್ಟಿನಲ್ಲಿ ಯುವಜನತೆ ಮುಂದಾಗಬೇಕು ಎಂದು ಹೇಳಿದರು.

ಬಳ್ಳಾರಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಯು. ಶ್ರೀನಿವಾಸಮೂರ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದ್ಯವಾಗಲಿ, ಗದ್ಯವಾಗಲಿ ಸಮಾಜಕ್ಕೆ ಸ್ಪಂದಿಸುವಂತಿರಬೇಕು. ಸಮಾಜ ಕಟ್ಟುವ ಮನಸ್ಸು ಸಾಹಿತ್ಯಕ್ಕೆ ಆಮ್ಲಜನಕವಿದ್ದಂತೆ. ಕವಿಗಳು ತಮ್ಮ ಭಾವನೆಗಳನ್ನು ಕವಿತೆಗಳ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕು ಎಂದರು.

ಮೊಬೈಲ್ ಯುಗದಲ್ಲಿ ಮನುಷ್ಯನ ಮನಸ್ಸು ತನ್ನ ಹಿಡಿತದಲ್ಲಿಯೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಕವಿಗಳು ಜಾಗೃತಿ ಮೂಡಿಸುವ ಕವಿತೆಗಳನ್ನು ರಚಿಸಬೇಕು. ಕವಿತೆಗಳು ಗಟ್ಟಿತನದಿಂದ ಕೂಡಿರಬೇಕು. ಮಳೆ ವರ್ಣಿಸುವುದು ಒಂದು ಹಂತವಾದರೆ, ಮಳೆಗಾಗಿ ಬೇಡುವ ಪರಿಸ್ಥಿತಿ ಮತ್ತೊಂದು ಹಂತವಾಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಕವಿತೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಾನದ ನಿರ್ದೇಶಕ ಜಿ. ತಿಪ್ಪಯ್ಯಶ್ರೇಷ್ಠಿ, ಅಧ್ಯಕ್ಷ ಬಿ. ಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಕವಿಗಳು ಮಳೆಯ ಮಹತ್ವ, ರೈತರ ಸಂಕಷ್ಟ ಹಾಗೂ ಪರಿಸರದ ಕುರಿತು ಕವನಗಳನ್ನು ವಾಚಿಸಿದರು. ಎಸ್.ಎಂ. ಪ್ರಭಾವತಿ, ವೀರಮ್ಮ ನಾಗರಾಜ, ರಮೇಶ್ ಸಾಗೇನಹಳ್ಳಿ, ಡಾ. ಬಿ. ಸುನಿಲ್, ಸಿ.ಡಿ. ಕುಮಾರ್, ಮದುಕಪ್ಪ ನೆಲಜೇರಿ ಹಾಗೂ ಬಡಿಗೇರ ಜಿಲಾನ್ ಅವರ ಕವಿತೆಗಳು ಗಮನ ಸೆಳೆದವು. ಮಳೆಗಾಗಿ ರೈತರ ನಿರೀಕ್ಷೆ, ಬರದಿಂದ ಎದುರಾಗುವ ಸಂಕಷ್ಟ ಹಾಗೂ ಪ್ರಕೃತಿಯ ಮಹತ್ವ ಕವಿತೆಗಳಲ್ಲಿ ಪ್ರತಿಧ್ವನಿಸಿತು.

ಕವಿಗೋಷ್ಠಿಯಲ್ಲಿ ಬಿ. ಪ್ರಕಾಶ್, ಪೀರಾಸಾಬ್ ಹಂಚಿನಾಕ್ ಹೀರಾಪಲಿ, ರಾಜು ಬಿಲಂಕರ್, ಎಸ್. ಶಾಮಸುಂದರರಾವ್, ಜಿಲಾನ್ ಸಾಬ್ ಬಡಿಗೇರ, ಸಾಹಿತ್ಯ ಬಿಲಂಕರ್, ಚಂದ್ರಯ್ಯ ಸೊಪ್ಪಿಮಠ, ಅಶೋಕ ಕುನೂರು, ಎಸ್. ರಾಮಪ್ಪ, ಪರಶುರಾಮ ಪವಾರ್, ಸಂತೋಷ್ ಸೋಗಿ, ಬಡಿಗಿ ದೊಡ್ಡ ಮಂಜುನಾಥ ಸೇರಿದಂತೆ ಹಲವು ಕವಿಗಳು ಕವಿತೆ ವಾಚಿಸಿದರು. ಆನ್‌ಲೈನ್ ಮೂಲಕ ಎಚ್.ಟಿ. ಗಿರೀಶ್, ಎನ್.ಸಿ. ಶಿವಕುಮಾರ್ ಹಾಗೂ ಬೇರ್ಗಿ ಜಯಶ್ರೀ ಭಾಗವಹಿಸಿದರು.

ಜ್ಞಾನಿತಾರೆಡ್ಡಿ ಪ್ರಾರ್ಥಿಸಿದರು. ಚಂದ್ರಯ್ಯ ಸೊಪ್ಪಿಮಠ ಸ್ವಾಗತಿಸಿದರು. ಎಸ್. ಶಾಮಸುಂದರರಾವ್ ವಂದಿಸಿದರು. ರಾಜು ಬಿಲಂಕರ್ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor